
ಮಡಿಕೇರಿ ಏ.16 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಏ.17ರಿಂದ 24ರವರೆಗೆ ನಡೆಯಲಿದೆಯೆಂದು ಎಮ್ಮೆಮಾಡಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಎಂ.ಹುಸೈನ್ ಸಖಾಫಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಏ.17 ರಂದು ಜುಮಾ ನಮಾಝಿನ ಬಳಿಕ ಜಮಾಅತ್ ಅಧ್ಯಕ್ಷನಾದ ತಾನು ಧ್ವಜಾರೋಹಣವನ್ನು ನೆರವೇರಿಸಲಿದ್ದೇನೆ. ಉರೂಸ್ ಮತ್ತು ಮಖಾಂ ಝಿಯಾರತ್ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ನಡೆಸಿಕೊಡಲಿದ್ದಾರೆ. ಅಂದು ರಾತ್ರಿ ಧಾರ್ಮಿಕ ಪ್ರವಚನವನ್ನು ಎಮ್ಮೆಮಾಡಿನ ಮುದರ್ರಿಸ್ ಎ.ಪಿ.ಹಂಝ ಸಖಾಫಿ ಮೇಲ್ಮುರಿ ಅವರು ನಡೆಸಿಕೊಡಲಿದ್ದಾರೆಂದರು. ಏ.18 ರಂದು ರಾತ್ರಿ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ಅವರ ನೇತೃತ್ವದಲ್ಲಿ ನಡೆಯಲಿದೆ. ಏ.19ರಂದು ರಾತ್ರಿ ಖತಂ ದುಅ ಮಜ್ಲಿಸ್ ಕಾರ್ಯಕ್ರಮವು ಶಿಹಾಬುದ್ದೀನ್ ಮುತ್ತನೂರ್ ತಂಙಳರವರ ನೇತೃತ್ವದಲ್ಲಿ ನಡೆಯಲಿರುವುದಾಗಿ ಹೇಳಿದರು. :: ಸಾರ್ವಜನಿಕ ಸಮ್ಮೇಳನ :: ಏ.20 ರಂದು ಮಧ್ಯಾಹ್ನ ಸಯ್ಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಮ್ಮೇಳನಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದ್ದು, ಅವರು ಬರುವ ವಿಶ್ವಾಸವಿರುವುದಾಗಿ ತಿಳಿಸಿ, ಮುಖ್ಯ ಭಾಷಣಕಾರರಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನ್ನದಾನವನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದರು. ಏ.24 ರಂದು ಮಧ್ಯಾಹ್ನ 2 ಗಂಟೆಗೆ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರೂಸಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭವನ್ನು ಸಯ್ಯದ್ ಇಲ್ಯಾಸ್ ಹೈದರೂಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಭಾಗವಹಿಸಲಿದ್ದಾರೆಂದರು. ನಗರದಲ್ಲಿ ಗೋಷ್ಠಿಯಲ್ಲಿ ಎಮ್ಮೆಮಾಡು ಜಮಾಅತ್ ಉಪಾಧ್ಯಕ್ಷರಾದ ಚೆಂಬಾರಂಡ ಎಂ.ಮಾಹಿನ್, ಸದಸ್ಯರಾದ ಪುದಿಯೋಡಿ ಎ. ಅಬ್ದುಲ್ ರೆಹೆಮಾನ್ ಉಪಸ್ಥಿತರಿದ್ದರು.









