
ಮಡಿಕೇರಿ NEWS DESK ಏ.19 : ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿ ಎಡವಿ ಬಿದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೋಷಪೂರಿತ ವಿಚಾರ ಮಂಡನೆ ಅಸಾಧ್ಯ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪುಷ್ಪಲತಾ ಜಿ.ಆರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಂದಿಗೂ ಇಂಡಿಯಾ ಒಕ್ಕೂಟ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಕೇಂದ್ರ ಸರಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ದೋಷಪೂರಿತ ಕ್ಷೇತ್ರ ಪುನರ್ ವಿಂಗಡಣೆೆಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 2010 ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರಾದರೂ ಸಫಲರಾಗಿರಲಿಲ್ಲ. 2023 ರಲ್ಲಿ ಅಂಗೀಕಾರವಾಗಿದ್ದ 543 ಲೋಕಸಭೆ ಸ್ಥಾನಗಳಿಗೆ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದರೆ ಇಂದಿನ ಇಂಡಿಯಾ ಒಕ್ಕೂಟ ಬೆಂಬಲ ನೀಡುತ್ತಿತ್ತು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇಂದ್ರ ಸರಕಾರ 2011 ರಲ್ಲಿ ನಡೆಸಿದ ಜಾತಿ ಜನಗಣತಿ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಲು ಹೊರಟಿದ್ದು, ಪ್ರಸ್ತುತ ಜಾತಿ ಜನಗಣತಿ ಕಾರ್ಯ ಪ್ರಗತಿಯಲ್ಲಿದೆ. ಈಗಿನ ಗಣತಿ ಪೂರ್ಣಗೊಂಡ ನಂತರ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದು ಸೂಕ್ತವಾಗಿತ್ತು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಮಹಿಳಾ ಮೀಸಲಾತಿಯ ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆಯನ್ನು ತಳುಕು ಹಾಕುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಯಿಂದ ರಾಜ್ಯಗಳ ಮಧ್ಯೆ ಅಸಮಾನತೆ ಉಂಟಾಗುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಮಹಿಳಾ ಮೀಸಲಾತಿ ವಿಧೇಯಕ ಜಾರಿ ಮಾಡದೆ ಮಹಿಳೆಯರಿಗೆ ಅನ್ಯಾಯ ಮಾಡುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮಹಿಳಾ ಮೀಸಲಾತಿಯ ವಿರೋಧಿಗಳು ಎಂದು ದೇಶದ ಜನರಲ್ಲಿ ಪ್ರತಿಬಿಂಬಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ವ್ಯರ್ಥ ಪ್ರಯತ್ನವನ್ನು ಜನತೆ ಅರ್ಥ ಮಾಡಿಕೊಂಡು ಜಾಗೃತರಾಗದಿದ್ದರೆ ಮುಂದೆ ಇಡೀ ದಕ್ಷಿಣ ಭಾರತಕ್ಕೆ ತೊಂದರೆಯಾಗಲಿದೆ ಎಂದು ಪುಷ್ಪಲತಾ ಜಿ.ಆರ್ ಟೀಕಿಸಿದ್ದಾರೆ. 2026ರ ಜಾತಿ ಜನಗಣತಿ ಮುಗಿಯುವವರೆಗೂ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯವನ್ನು ಮುಂದೂಡಬೇಕು. ಸರ್ವ ಪಕ್ಷಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈಗ ಇರುವ 543 ಲೋಕಸಭಾ ಸ್ಥಾನಗಳಿಗೆ ಪೂರಕವಾಗಿ ಶೇ.33 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿಯವರ ನೇತೃತ್ವದಲ್ಲಿ ನಡೆಯುವ ಎಲ್ಲಾ ಹೋರಾಟಕ್ಕೆ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.








