
ಮಡಿಕೇರಿ NEWS DESK ಏ.25 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡುಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ನ ಸಹಯೋಗದೊಂದಿಗೆ ಏಪ್ರಿಲ್ 28ರಂದು ಮಡಿಕೇರಿಯ ಕಾವೇರಿ ಹಾಲ್ನಲ್ಲಿ ಹಮ್ಮಿಕೊಂಡಿರುವ ಕೊಡಗು ಜಿಲ್ಲಾ ಮೊದಲ ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ಪತ್ರಕರ್ತ, ಕವಿ ಬಿ.ಎ. ಶಂಷುದ್ದೀನ್ ಮಡಿಕೇರಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ತಿಳಿಸಿದ್ದಾರೆ. ಬ್ಯಾರಿ ಹಾಡುಗಳ ಮೊದಲ ಧ್ವನಿಸುರುಳಿ ಹೊರತಂದ ಕೀರ್ತಿಗೆ ಪಾತ್ರರಾಗಿರುವ ಶಂಷುದ್ದೀನ್ ಮಡಿಕೇರಿ 1983ರಲ್ಲಿ ಹಮ್ಮಿಕೊಂಡಿದ್ದ ‘ಪುದಿಯೊ ಬ್ಯಾರಿ ಪಾಟ್ಙ’ ಧ್ವನಿಸುರುಳಿ ಬಿಡುಗಡೆ ಮತ್ತು ಸಂಗೀತ ರಸಮಂಜರಿ ಸಮಾರಂಭವು ಬ್ಯಾರಿ ಭಾಷೆಯ ಮೊದಲ ಸಾಂಸ್ಕೃತಿಕ ಕಾರ್ಯಕ್ರಮವೆಂದು ದಾಖಲಾಗಿದೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಅಕಾಡೆಮಿ ಹೊರತಂದ ಬ್ಯಾರಿ-ಕನ್ನಡ-ಇಂಗ್ಲೀಷ್ ನಿಘಂಟುವಿನ ಮೂವರು ಸಂಪಾದಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿರುವ ಇವರು ಸಂತ ಕವಿ ಕನಕದಾಸರ ʼಮೋಹನ ತರಂಗಿಣಿʼ ಕಾವ್ಯವನ್ನು ಬ್ಯಾರಿ ಭಾಷೆಗೆ ಅನುವಾದಿಸಿರುತ್ತಾರೆ. ಇವರ ʼನೆನಪುಙʼ (ಬ್ಯಾರಿ ಕವನ ಸಂಕಲನ) ಕೃತಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ್ದು, 2014-15ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಬ್ಯಾರಿ ಕಥೆ, ಕವನ, ಲೇಖನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿ.ವಿ. ಬ್ಯಾರಿ ಅಧ್ಯಯನ ಪೀಠದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ʼನ ಸ್ಥಾಪಕ ಅಧ್ಯಕ್ಷರು. ಬ್ಯಾರಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದ ಕಾರ್ಯದರ್ಶಿ. ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ, ಅಖಿಲ ಕರ್ನಾಟಕ ಕನ್ನಡ ಕ್ರಿಯಾವೇದಿಕೆಯ ಕೊಡಗು ಜಿಲ್ಲಾ ಪ್ರತಿನಿಧಿಯಾಗಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, 2014ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 9ನೇ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ ಅಲಂಕರಿಸಿದ್ದಾರೆ. ಕನ್ನಡದಲ್ಲಿ ಹಲವು ಕೃತಿಗಳನ್ನು ಹೊರತಂದಿರುವ ಇವರು ಮೂರು ನಾಟಕ, ನಾಲ್ಕು ರೇಡಿಯೋ ನಾಟಕ ಹಾಗೂ ಇಪ್ಪತ್ತಕ್ಕೂ ಹೆಚ್ಚು ಬೀದಿನಾಟಕಗಳನ್ನು ಇವರು ರಚಿಸಿ, ನಿರ್ದೇಶಿಸಿದ್ದಾರೆ. ಪತ್ರಕರ್ತರಾಗಿಯೂ ಗುರುತಿಸಿ ಕೊಂಡಿರುವ ಇವರು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿ. ರಾಜ್ಯದ ಹಲವು ದಿನಪತ್ರಿಕೆ ಮತ್ತು ನಿಯತಕಾಲಿಕ ಗಳಲ್ಲಿ ಸಂಪಾದಕ, ಸಹಾಯಕ ಸಂಪಾದಕ, ಜಿಲ್ಲಾ ವರದಿಗಾರ ಮತ್ತು ಅಂಕಣಕಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಮಂಗಳೂರು ವಿವಿಯ ದ್ವಿತೀಯ ಬಿ.ಎ. ಕನ್ನಡ ಪಠ್ಯಪುಸ್ತಕ “ನುಡಿಯೊರತೆ”ಯಲ್ಲಿ ಇವರ ಕವನ ‘ರಾಜಾಸೀಟ್ ಹಾಡಾಯಿತು’ ಬಳಸಿಕೊಳ್ಳಲಾಗಿದೆ. ಮಡಿಕೇರಿ, ಮೈಸೂರು, ಗುಲ್ಬರ್ಗಾ ಹಾಗೂ ಬೆಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಚಿಂತನ, ಭಾಷಣಗಳು ಪ್ರಸಾರವಾಗಿವೆ. ಇವರು ಹಲವು ಮಹತ್ವದ ಕೃತಿಗಳು ಮತ್ತು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ನಡೆದ ಸಾಕ್ಷರತಾ ಆಂದೋಲನದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಇವರು ಶಿಕ್ಷಣ, ಲಿಂಗಸಮಾನತೆ, ಆಶಾ ಕಾರ್ಯಕರ್ತೆಯರಿಗೆ ತರಬೇತಿ, ಹೆಚ್ ಐ ವಿ ಸೋಂಕು ವಿರುದ್ಧದ ಜನಜಾಗೃತಿ ಮುಂತಾದ ಸರಕಾರದ ಹಲವು ಯೋಜನೆಗಳಿಗೆ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅವಿರತ ಶ್ರಮಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಕೊಡಗು ಉತ್ಸವ ಮತ್ತು ರಾಜ್ಯಮಟ್ಟದ ನಾಟಕೋತ್ಸವ ಸಮಿತಿ ಸಂಚಾಲಕರಾಗಿ, ಕೊಡಗು ಲೇಖಕ ಕಲಾವಿದರ ಬಳಗದ ಸ್ಥಾಪಕ ಅಧ್ಯಕ್ಷರಾಗಿ, ಕೊಡಗು ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, ಕೊಡಗು ಜಿಲ್ಲಾಸಾಕ್ಷರತಾ ಸಮಿತಿ ಕಾರ್ಯದರ್ಶಿಯಾಗಿ, ಕೊಡಗು ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ಇವರು ಕಾರ್ಯನಿರ್ವಹಿಸಿರುತ್ತಾರೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.








