
ಮಡಿಕೇರಿ ಏ.25 NEWS DESK : ಮಹಿಳೆಯರಿಗೆ ರಾಜಕೀಯವಾದ ಸ್ಥಾನಮಾನಗಳನ್ನು ಕಲ್ಪಿಸುವ ಕೇಂದ್ರದ “ನಾರಿ ಶಕ್ತಿ ವಂದನ್ ಅಧಿನಿಯಮ”ಕ್ಕೆ ರಾಷ್ಟ್ರದ ಹಿತ ಚಿಂತನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಳಗೊಂಡಂತೆ ವಿಪಕ್ಷಗಳು ಬೆಂಬಲ ನೀಡುವ ವಿಶ್ವಾಸಗಳು ಹುಸಿಯಾಗುವ ಮೂಲಕ, ಮಹಿಳೆಯರು ರಾಜಕೀಯ ಮೀಸಲಾತಿಯಿಂದ ವಂಚನೆಗೆ ಒಳಗಾಗಿದ್ದಾರೆಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ ಪರಂಪರೆಗಳ ಸಂರಕ್ಷಣೆಯಲ್ಲಿ ಮಹಿಳೆಯರ ಕೊಡುಗೆ ಅತ್ಯಂತ ಮಹತ್ವಪೂರ್ಣವಾದದ್ದು. ಕರ್ನಾಟಕದ ಇತಿಹಾಸ ಪರಂಪರೆಗಳನ್ನು ಅವಲೋಕಿಸಿದಾಗ ಒಡೆಯರ್ ವಂಶದಲ್ಲಿಯೂ ಮಹಿಳೆಯರ ಕೊಡುಗೆ ಅನನ್ಯವಾಗಿದೆ. ಅದರಂತೆಯೇ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲ ಮಹಿಳೆಯರು ಈ ನೆಲದ ಸಂಸ್ಕೃತಿಯ ಸಂರಕ್ಷಣೆಗೆ ಶ್ರಮಿಸಿರುವುದನ್ನು ಕಾಣುತ್ತೇವೆ. ಇಂತಹ ಮಹಿಳೆಯರಿಗೆ ರಾಜಕೀಯವಾದ ಮೀಸಲಾತಿ ನೀಡುವ ಮಸೂದೆಗೆ ಕಾಂಗ್ರೆಸ್ ಒಳಗೊಂಡ ಮಿತ್ರಪಕ್ಷಗಳ ಇಂಡಿಯಾ ಸಂಘಟನೆ ಉದ್ದೇಶಪೂರ್ವಕವಾಗಿ ವಿರೋಧವನ್ನು ಮಾಡುವ ಮೂಲಕ, ವಿಧೇಯಕ ಜಾರಿಯಾಗದಂತೆ ನೋಡಿಕೊಂಡಿರುವುದಾಗಿ ಆರೋಪಿಸಿದರು. :: ಕ್ಷೇತ್ರ ಪುನರ್ವಿಂಗಡಣೆ ಅಪಪ್ರಚಾರ :: ಮಹಿಳಾ ಮೀಸಲಾತಿಯೊಂದಿಗೆ ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆಯ ಬಗ್ಗೆ ಕೇಂದ್ರ ಗೃಹ ಸಚಿವರು ಅಗತ್ಯ ಮಾಹಿತಿಗಳನ್ನು ನೀಡಿದ್ದು, ಯಾವುದೇ ರಾಜ್ಯಗಳಿಗೆ ಪುನರ್ವಿಂಗಡಣೆಯಿಂದ ಅನ್ಯಾಯವಾಗದಂತೆ, ಪ್ರಸ್ತುತ ರಾಜ್ಯಗಳಲ್ಲಿ ಇರುವ ಸಂಸತ್ ಕ್ಷೇತ್ರಗಳಿಗೆ ಸರಿ ಸುಮಾರು ಶೇ.50 ರಷ್ಟು ಹೆಚ್ಚುವರಿ ಸ್ಥಾನಗಳ ಸೇರ್ಪಡೆಯಾಗುತ್ತದೆಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ ಇರುವ 28 ಲೋಕಸಭಾ ಸ್ಥಾನಗಳು ಪುನರ್ವಿಂಗಡಣೆಯೊಂದಿಗೆ 43 ಆಗುತಿತ್ತೆಂದು ಮಾಹಿತಿಯನ್ನು ನೀಡಿದರು. :: ಮಹಿಳಾ ಕಲ್ಯಾಣಕ್ಕೆ ಅಗತ್ಯ ಕ್ರಮ :: ವಿಧೇಯಕಕ್ಕೆ ಅನುಮೋದನೆ ದೊರಕದಿದ್ದರು ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿಕೊಂಡು ಬರುತ್ತಿದೆ. ಈ ಹಿಂದೆಯೇ ಜಾರಿ ಮಾಡಿರುವ ಮುದ್ರಾ ಯೋಜನೆಯಡಿ ಇಲ್ಲಿಯವರೆಗೆ ಶೇ.69 ರಷ್ಟು ಮಹಿಳಾ ಫಲಾನುಭವಿಗಳು ಪ್ರಯೋಜನವನ್ನು ಪಡೆದುಕೊಂಡಿರುವುದಾಗಿ ತಿಳಿಸಿದ ಯದುವೀರ್ ಅವರು, ಉಜ್ವಲ ಸೇರಿದಂತೆ ಮಹಿಳಾ ಸ್ವಾವಲಂಬನೆಗೆ ಪೂರಕವಾದ ಯೋಜನೆಗಳ ಪ್ರಯೋಜನವನ್ನು ಶೇ.84 ರಷ್ಟು ಮಹಿಳೆಯರು ಪಡೆದುಕೊಳ್ಳುತ್ತಿರುವ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. :: ಕೊಡಗಿಗೆ ಲೋಕಸಭಾ ಸ್ಥಾನದ ಅವಕಾಶವಿತ್ತು :: ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆಯ ಸಂದರ್ಭ ಸಾಂಸ್ಕøತಿಕವಾಗಿ, ಭೌಗೋಳಿವಾಗಿ ವಿಭಿನ್ನವಾಗಿರುವ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ದೊರಕುವ ನಿರೀಕ್ಷೆ ಇತ್ತೆಂದು ಯದುವೀರ್ ತಿಳಿಸಿದರು. ಈ ಹಿಂದೆ ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಸೇರಿದ್ದ ಕೊಡಗು , ಬಳಿಕ ಮೈಸೂರಿಗೆ ಸೇರ್ಪಡೆಗೊಂಡಿತ್ತು. ಕೊಡಗು-ಮೈಸೂರು ಕ್ಷೇತ್ರ ಭೌಗೊಳಿಕವಾಗಿ ತುಂಬಾ ವಿಸ್ತಾರವಾಗಿದ್ದು, ಸುಮಾರು 22 ಲಕ್ಷ ಮತದಾರರನ್ನು ಹೊಂದಿದೆ. ಇಂತಹ ದೊಡ್ಡ ಕ್ಷೇತ್ರದ ಭಾಗವಾದ ಕೊಡಗು ಜಿಲ್ಲೆಗೆ ಪ್ರತೇಕ ಲೋಕಸಭಾ ಕ್ಷೇತ್ರ ದೊರಕುವ ನಿರೀಕ್ಷೆ ಇತ್ತಾದರು, ಪ್ರಸ್ತುತ ವಿಧೇಯಕಕ್ಕೆ ವಿಪಕ್ಷಗಳು ಅನಗತ್ಯವಾದ ತಾಂತ್ರಿಕ ಕಾರಣಗಳನ್ನು ನೀಡುತ್ತಾ ಬೆಂಬಲ ನೀಡದಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆಂದು ಹೇಳಿದರು. :: ಮಹಿಳೆಯರ ಕನಸು ನುಚ್ಚು ನೂರು :: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರೀನಾ ಪ್ರಕಾಶ್ ಅವರು ಮಾತನಾಡಿ, ಮಹಿಳೆಯರಿಗೆ ರಾಜಕೀಯ ಸ್ಥಾನ ಮಾನಗಳನ್ನು ನೀಡುವ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಕಾಂಗ್ರೆಸ್ ಒಳಗೊಂಡಂತೆ ವಿಪಕ್ಷಗಳು ವಿರೋಧಿಸುವ ಮೂಲಕ ದೇಶದ 70 ಕೋಟಿ ಮಹಿಳೆಯರ ಕನಸು ನುಚ್ಚು ನೂರಾಗಿದೆ.ಇದಕ್ಕೆ ಕಾರಣವಾದ ಕಾಂಗ್ರೆಸ್ಗೆ ಧಿಕ್ಕಾರವಿರುವುದಾಗಿ ತೀಕ್ಷ್ಣವಾಗಿ ನುಡಿದರು. ಪ್ರಧಾನಿ ಮೋದಿ ಅವರು ಮಹಿಳೆಯರ ಕಲ್ಯಾಣ ಮತ್ತು ಅವರ ಸ್ವಾವಲಂಬನೆಯ ಚಿಂತನೆಗಳಡಿ ನಾರಿ ಶಕ್ತಿ ಅಧಿನಿಯಮದ ಜಾರಿಗೆ ಮುಂದಾಗಿದ್ದರು.ಈ ಮಸೂದೆಗೆ ಅನುಮೋದನೆ ದೊರಕಿದ್ದಲ್ಲಿ ವಿಶ್ವ ಮಟ್ಟದಲ್ಲಿ ಭಾರತ ಗಮನ ಸೆಳೆಯುತಿತ್ತು. ಇದಕ್ಕೆ ಬದಲಾಗಿ, ವಿಧೇಯಕವನ್ನು ವಿರೋಧಿಸಿ, ಅದು ಜಾರಿಯಾಗದಂತೆ ನೊಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ವಿಪಕ್ಷಗಳು ಕಗ್ಗೊಲೆ ಮಾಡಿರುವುದಾಗಿ ಕಟುವಾಗಿ ನುಡಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ನಾರಿ ವಂದನ್ ಅಧಿನಿಯಮವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಒಳಗೊಂಡ ವಿಪಕ್ಷಗಳು ಮಹಿಳೆಯರಿಗೆ ದ್ರೋಹ ಬಗೆದಿರುವುದಾಗಿ ಟೀಕಿಸಿದರು. ಗೋಷ್ಠಿಯಲ್ಲಿ ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಪಕ್ಷದ ಪ್ರಮುಖರಾದ ವಿ.ಕೆ.ಲೋಕೇಶ್, ಯಮುನಾ ಚಂಗಪ್ಪ, ಲೋಕೇಶ್ವರಿ ಗೋಪಾಲ್, ಬಿ.ಕೆ. ಜಗದೀಶ್, ಕನ್ನಿಕೆ ಮೊದಲಾದವರಿದ್ದರು.









