
ಮಡಿಕೇರಿ ಏ.28 NEWS DESK : ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಾ ಮುಂದಕ್ಕೆ ಸಾಗಲು ಅಲ್ಲಿನ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಅತ್ಯಂತ ಮುಖ್ಯವಾದದ್ದು ಎಂದು ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಎಂ.ಎಸ್. ಮುತ್ತಣ್ಣ ಅಭಿಪ್ರಾಯಪಟ್ಟರು. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ನಿವೃತ್ತ ಸಿಬ್ಬಂದಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಸಂಸ್ಥೆಯ ಏಳಿಗೆಯೂ ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮೇಲೆ ಅವಲಂಬಿತವಾಗಿದೆ. ಸಿಬ್ಬಂದಿಗಳು ಸಂಸ್ಥೆಯ ಏಳಿಗೆಗೆ ಶ್ರಮಿಸಿ ತಮ್ಮ ಸೇವೆಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ವೃಂದದವರು ವಹಿಸುವಂತಹ ಪಾತ್ರ ಮಹತ್ವದ್ದಾಗಿದೆ. 60 ವರ್ಷಗಳು ತುಂಬುವವರೆಗೂ ಸಂಸ್ಥೆಗಾಗಿ, ಸಂಸ್ಥೆಯ ಏಳಿಗೆಗಾಗಿ ಶ್ರಮವಹಿಸಿದ್ದು ಇನ್ನು ಮುಂದೆ ನಿಮ್ಮ ಕೌಟುಂಬಿಕ ಜೀವನ ಹಾಗೂ ಸಾಮಾಜಿಕ ಜೀವನದಲ್ಲಿ ನಿಮ್ಮ ಸೇವೆ ಅದೇ ರೀತಿ ಮುಂದುವರೆಯಲಿ. ನಿವೃತ್ತ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಅಚ್ಚಯ್ಯ ಮಾತನಾಡಿ ಕಾವೇರಿ ಎಜುಕೇಶನ್ ಸೊಸೈಟಿ ವತಿಯಿಂದ ಪ್ರತಿ ವರ್ಷವೂ ನಿವೃತ್ತರಾದಂತಹ ಸಿಬ್ಬಂದಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುತ್ತಿತ್ತು ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಕೋವಿಡ್ ಮತ್ತು ಇನ್ನಿತರ ಕಾರಣದಿಂದ ನಿವೃತ್ತರಾದ ಸಿಬ್ಬಂದಿಗಳನ್ನು ಗೌರವಿಸುವ ಕಾರ್ಯ ಹಾಗೇ ಉಳಿದಿತ್ತು . ಇದೀಗ ಆಡಳಿತ ಮಂಡಳಿ ಒಕ್ಕೊರಳಿನ ನಿರ್ಧಾರವನ್ನು ತೆಗೆದುಕೊಂಡು 2018 ರಿಂದ 2026 ರವರೆಗೆ ನಿವೃತ್ತರಾದ ವಿರಾಜಪೇಟೆ ಕಾವೇರಿ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಕರಿಸಿ ಇಂದು ಸನ್ಮಾನಿಸಿ ಸಂಸ್ಥೆಯ ಏಳಿಗೆಗಾಗಿ ಅವರು ಸಲ್ಲಿಸಿದ ಸೇವೆಗೆ ಧನ್ಯವಾದಗಳು ಅರ್ಪಿಸಲಾಗುತ್ತಿದೆ ಎಂದರು. ಕಾವೇರಿ ಎಜುಕೇಶನ್ ಸೊಸೈಟಿ ಗೌ.ಕಾರ್ಯದರ್ಶಿ ಕೆ.ಪಿ.ಬೋಪಣ್ಣ ನಿವೃತ್ತ ಸಿಬ್ಬಂದಿಗಳ ಪರಿಚಯ ಮಾಡಿದರು. ನಂತರ ನಿವೃತ್ತರಾದ ದಿ. ಪ್ರೊ.ಸಿ.ಎಂ.ನಾಚಪ್ಪ, ಕೆ.ಟಿ.ಬೋಜಮ್ಮ , ಡಾ.ಎಂ.ಎಂ. ದೇಚಮ್ಮ , ಪ್ರೊ ಎ.ಎಂ.ಕಮಲಾಕ್ಷಿ , ಹೆಚ್ .ಎಸ್ ಜಯಕುಮಾರ್ , ಡಿ.ಎಂ. ಲತಾ ಕುಮಾರಿ , ಹೆಚ್.ಆರ್. ಮಹದೇವಯ್ಯ, ಎವೆಲಿನ್ ಬ್ರಗಾಂಜ್ಹ , ಪ್ರೊ ಬಿ.ಎನ್. ಶಂಕರ ನಾರಾಯಣ , ಡಾ.ಕೆ. ಆನಂದ್, ಸಿ.ಎಂ.ಸೋಮಣ್ಣ , ಹೆಚ್.ವಿ.ನಾಗರಾಜು , ಬಿ.ಎಸ್.ಜಗದೀಶ್ , ರಜನಿ ಬಿಂದು , ಬೆನೆಡಿಕ್ಟ್ ಆರ್ ಸಲ್ಡಾನ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಕಾರ್ಯಕ್ರಮದ ನಂತರ ನಿವೃತ್ತ ಸಿಬ್ಬಂದಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕೆ.ಎಂ ಬೆಳ್ಳಿಯಪ್ಪ ಖಜಾಂಜಿ ಸಿ.ಡಿ.ಮಾದಪ್ಪ , ನಿರ್ದೇಶಕರಾದ ಸಿ.ಕೆ. ಉತ್ತಪ್ಪ , ಎಂ.ಕೆ.ಮೊಣ್ಣಪ್ಪ, ಪಿ.ಟಿ. ಸುಬ್ಬಯ್ಯ , ಬಿ.ಎ.ಚಂಗಪ್ಪ ,ಸಿ.ಎಂ.ಅಪ್ಪಯ್ಯ , ಕೆ.ಪಿ.ಅಚ್ಚಯ್ಯ , ವಾಣಿ ಚೆಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ, ಪದವಿ ಪೂರ್ವ ಕಾಲೇಜಿನ ಎಂ. ಕೆ ಪದ್ಮ , ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲ ಕಾವೇರಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಮಾದಯ್ಯ , ಕಾಲೇಜಿನ ಸಿಬ್ಬಂದಿ ವರ್ಗ , ನಿವೃತ್ತ ಕುಟುಂಬದ ಕುಟುಂಬಸ್ಥರು ಹಾಜರಿದ್ದರು.









