
ಮಡಿಕೇರಿ ಏ.30 NEWS DESK : ಹಲೋ ಆಕಾಶವಾಣಿ ‘ಬೆಳಕ ಹುಡುಕುತ್ತಾ’ ನೇರ ಪೋನ್ಇನ್ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಗುರುವಾರ ಪಾಲ್ಗೊಂಡು ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಒಂದು ಗಂಟೆಗಳ ಕಾಲ ನಡೆದ ನೇರ ಪೋನ್ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ 16 ಕ್ಕೂ ಹೆಚ್ಚು ಜನ ದೂರವಾಣಿ ಮೂಲಕ ಕರೆ ಮಾಡಿ ಭೂಮಿ ದುರಸ್ತಿ, ರಸ್ತೆ ಸರಿಪಡಿಸುವುದು, ಕುಡಿಯುವ ನೀರು ಪೂರೈಕೆ, ಬೀದಿ ದೀಪ ಅಳವಡಿಕೆ, ಮತ್ತಿತರ ಮೂಲ ಸೌಲಭ್ಯ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಒಳಗೊಂಡ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಆರಂಭದಲ್ಲಿ ಕರೆ ಮಾಡಿದ ವಿರಾಜಪೇಟೆ ತಾಲ್ಲೂಕಿನ ಕೋತೂರು ಗ್ರಾಮದ ಗಣೇಶ್ ಕುಮಾರ್ ಅವರು ಎಫ್ಐಡಿ ಗುರುತಿನ ಚೀಟಿ ಇಲ್ಲದೆ ರಸಗೊಬ್ಬರ ಖರೀದಿಸಲು ತೊಂದರೆಯಾಗಿದೆ. ಆದ್ದರಿಂದ ಆರ್ಟಿಸಿ ಒದಗಿಸುವಂತಾಗಬೇಕು ಎಂದು ಕೋರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವರು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಿಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಎಂದರು. ಸುಂಟಿಕೊಪ್ಪ ಬಳಿಯ ಏಳನೇ ಹೊಸ ಕೋಟೆಯ ಹ್ಯಾರಿಸ್ ಅವರು ಮಾತನಾಡಿ ಜಾಗ ಸಂಬಂಧ ತಿದ್ದುಪಡಿಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಯಾವುದೇ ಕೆಲಸ ಆಗಿಲ್ಲ ಎಂದು ದೂರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವರು ಜಾಗ ತಿದ್ದುಪಡಿ ಸಂಬಂಧ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು. ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಬಳಿಯ ಕೊಳಗದಾಳು ಗ್ರಾಮದ ವಾಣಿ ಅವರು ಕರೆ ಮಾಡಿ ನಮ್ಮ ಕುಟುಂಬದಲ್ಲಿ ಹಿರಿಯರೊಬ್ಬರು ಶೇ.100 ರಷ್ಟು ವಿಕಲಚೇತನರಿದ್ದು, ರಸ್ತೆ ಸಂಪರ್ಕವಿಲ್ಲದೆ ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸಬೇಕಿದೆ. ಯಾವುದೇ ದಿನಸಿ, ಮತ್ತಿತರ ಪದಾರ್ಥ ಕೊಂಡುಕೊಳ್ಳಲು ಚೇರಂಬಾಣೆಗೆ ಹೋಗಬೇಕಿದೆ. ರಸ್ತೆ ಸರಿ ಇಲ್ಲದೆ ಆಟೋ ಕೂಡ ಬರುವುದಿಲ್ಲ. ಡಾಂಬರೀಕರಣ ರಸ್ತೆ ನಿರ್ಮಿಸಬೇಕು ಎಂದು ಕೋರಿದರು. ಈ ಕುರಿತು ಜಿಲ್ಲಾಧಿಕಾರಿ ಅವರು ಆದ್ಯತೆ ಮೇಲೆ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಹಾಗೆಯೇ ಶಾಸಕರ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಪೊನ್ನಂಪೇಟೆ ತಾಲ್ಲೂಕಿನ ಬಲ್ಯಮಂಡೂರು ಸತೀಶ್ ಅವರು ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಜಾಗ ನೀಡುವಂತೆ ತಹಶೀಲ್ದಾರರಿಗೆ ಮನವಿ ಮಾಡಿ, ತೂಚಮಕೇರಿ ಬಳಿ ಜಾಗ ಗುರುತಿಸಲಾಗಿದೆ. ಆದರೆ ಸರ್ವೆ ಅವರು ಜಾಗ ಅಳತೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವರು ಜಾಗ ಅಳತೆ ಮಾಡುವ ಬಗ್ಗೆ ಸರ್ವೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗುವುದು. ಹಾಗೆಯೇ ಶಾಸಕರ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದರು. ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ಧಾಪುರದ ಚಂಗಪ್ಪ ಅವರು ಓಡಾಡಲು ಗ್ರಾಮ ನಕಾಶೆಯಡಿ ರಸ್ತೆ ಬಿಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಕಡತವು ಒಂದು ಟೇಬಲ್ನಿಂದ ಮತ್ತೊಂದು ಟೇಬಲ್ಗೆ ಬರಲು 3 ತಿಂಗಳು ತೆಗೆದುಕೊಳ್ಳುತ್ತಾರೆ. ಇದುವರೆಗೆ ಕೆಲಸವಾಗಿಲ್ಲ ಎಂದು ಗಮನ ಸೆಳೆದರು. ಈ ಸಂಬಂಧ ಅಧಿಕಾರಿಯನ್ನು ಕಳುಹಿಸಿಕೊಡಲಾಗುವುದು. ಗ್ರಾಮ ನಕಾಶೆ ಇದ್ದಲ್ಲಿ ಜಾಗ ಬಿಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿದರು. ಮಡಿಕೇರಿಯ ದೇಚೂರು ಬಡಾವಣೆಯ ಉಷಾ ಅವರು ಕರೆ ಮಾಡಿ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ಇದರಿಂದ ಚರಂಡಿ ಹಾಳಾಗಿದೆ. ಹಾಗೆಯೇ ತಡೆಗೋಡೆ ದುರಸ್ತಿಯಾಗಿದೆ. ಇದನ್ನು ಸರಿಪಡಿಸುವಂತಾಗಬೇಕು ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗುವುದು ಎಂದರು. ಚೇರಂಬಾಣೆಯ ರಘು ಅವರು ಮಾತನಾಡಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗ್ರಾ.ಪಂ.ಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು. ಪೊನ್ನಂಪೇಟೆಯ ಕರುಂಬಯ್ಯ ಅವರು ಮಾತನಾಡಿ ಜಮ್ಮಾ ಭೂಮಿಯಡಿ 30 ಸೆಂಟ್ ಜಾಗವನ್ನು 20 ವರ್ಷಗಳ ಹಿಂದೆ ಖರೀದಿಸಲಾಗಿದೆ. ಆದರೆ ಇದುವರೆಗೆ ಆರ್ಟಿಸಿ ಆಗದೆ ಕಂದಾಯ ನಿಗದಿ ಮಾಡಿಲ್ಲ ಎಂದು ಅಳಲು ತೋಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಲಿಖಿತವಾಗಿ ಮನವಿ ನೀಡಲು ಸಲಹೆ ಮಾಡಿದರು. ಈ ಸಂಬಂಧ ತಹಶೀಲ್ದಾರರಿಗೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದರು. ಮಡಿಕೇರಿಯ ರೂಪ ಅವರು ಕರೆ ಮಾಡಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಬಳಿ ಕುಡಿಯುವ ನೀರು ಪೂರೈಸುವ ಪೈಪುಲೈನ್ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಿಲ್ಲ. ಹೀಗಾಗಿ ಮಕ್ಕಳು, ವಯಸ್ಸಾದವರು ಗುಂಡಿಗೆ ಬೀಳುತ್ತಿದ್ದು, ಆಯಾಯ ಕಾಮಗಾರಿ ಸಂದರ್ಭದಲ್ಲಿಯೇ ಗುಂಡಿ ಮುಚ್ಚುವಂತಾಗಬೇಕು. ಜೊತೆಗೆ ಬೀದಿ ದೀಪ ಅಳವಡಿಸುವಂತಾಗಬೇಕು ಎಂದು ಕೋರಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗುವುದು ಎಂದರು. ಮಡಿಕೇರಿಯ ಪುಟಾಣಿ ನಗರದ ಕುಸುಮ ಅವರು ಕುಡಿಯುವ ನೀರು ಪೈಪುಲೈನ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮನೆ ವರೆಗೂ ಕಾಮಗಾರಿ ಬಂದಿಲ್ಲ. ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದರು. ಈ ಸಂಬಂಧ ನಗರಸಭೆ ಪೌರಾಯುಕ್ತರಿಗೆ ನಿರ್ದೇಶನ ನೀಡಲಾಗುವುದು ಎಂದರು. ಸುಂಟಿಕೊಪ್ಪ ಬಳಿಯ ಕಂಬಿಬಾಣೆಯ ಸಾರ್ವಜನಿಕರೊಬ್ಬರು ಕರೆ ಮಾಡಿ ಅರ್ಧ ಎಕರೆ ಜಾಗಕ್ಕಾಗಿ 1987 ರಿಂದ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ, ಆದರೂ ಸಹ ಕೆಲಸ ಆಗಿಲ್ಲ ಎಂದು ದೂರಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು. ಸಿವಿಲ್ ವ್ಯಾಜ್ಯ ಇದ್ದಲ್ಲಿ ಡಿಸಿ ನ್ಯಾಯಾಲಯದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸುಂಟಿಕೊಪ್ಪದ ಹರದೂರಿನ ಗಣೇಶ್ ಅವರು ಮಾತನಾಡಿ ಊರುಡುವೆ ಪೈಸಾರಿಯಲ್ಲಿ ಮನೆ ನಿರ್ಮಿಸಲು 94 ಸಿನಡಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಕೆಲಸ ಆಗಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು ದಾಖಲೆ ನೀಡದೆ ಭರವಸೆ ನೀಡಲು ಕಷ್ಟಸಾಧ್ಯ ಎಂದು ಹೇಳಿದರು. ಸೋಮವಾರಪೇಟೆಯ ಬೋಪಯ್ಯ ಅವರು ಮಾತನಾಡಿ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷತವಾಗಿ ಭೇಟಿ ನೀಡುವ ಕಾರ್ಯ ಆಗಬೇಕು ಎಂದರು. ಮತ್ತೊಬ್ಬರು ಪ್ರತಿ ತಿಂಗಳು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಬೆಳಕ ಹುಡುಕುತ್ತಾ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಾಹಕರಾದ ಎಂ.ಶಕುಂತಲಾ ಅವರು ನಡೆಸಿಕೊಟ್ಟರು. ಮಡಿಕೇರಿ ಆಕಾಶವಾಣಿ ಮುಖ್ಯಸ್ಥರಾದ ಪಿ.ಎಂ.ಜಗದೀಶ್, ತಾ.ಪ.ಇಒ ಶೇಖರ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಆಹಾರ ಇಲಾಖೆ ಉಪ ನಿರ್ದೇಶಕರಾದ ಭೀಮರಾಯ, ಇತರರು ಇದ್ದರು.









