
ಮಡಿಕೇರಿ NEWS DESK ಮೇ 2 : ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ವಿಜ್ಞಾನ, ಗಣಿತ, ಆರ್ಯುವೇದ, ತತ್ವಶಾಸ್ತ್ರ ಮತ್ತು ಸಾಹಿತ್ಯ ಸೇರಿದಂತೆ ಅಪಾರ ಸಂಪತ್ತು ಹಸ್ತಪ್ರತಿಗಳ ರೂಪದಲ್ಲಿ ಅಡಗಿದೆ. ಸಮಯ ಬದಲಾದಂತೆ, ಕಾಲ ಓಡಿದಂತೆ ಈ ಅಮೂಲ್ಯ ನಿಧಿ ಧೂಳು ಹಿಡಿದು, ಗೆದ್ದಲು ಪಾಲಾಗುತ್ತಿದೆ. ಇದರ ಹೊರತಾಗಿ ಕೆಲವು ವಿದೇಶಿ ವಸ್ತು ಸಂಗ್ರಹಾಲಯಗಳ ಪಾಲಾಗಿವೆ. ನಮ್ಮ ಪೂರ್ವಿಕರ ಆಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತದ ಅಸ್ತಿತ್ವದ ಮರುಸ್ಥಾಪನೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸ್ಕೃತಿ ಸಚಿವಾಲಯ ʻಜ್ಞಾನ ಭಾರತಂʼ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಹಸ್ತಪ್ರತಿಗಳು ಕೇವಲ ಹಳೆಯ ಕಾಗದಗಳಾಗದೇ ಭಾರತೀಯ ಪರಂಪರೆಯ ಹುಟ್ಟು ಹಾಗೂ ಅದರ ಬೆಳವಣಿಗೆ ಮತ್ತು ಸಂಸ್ಕೃತಿಯ ಪರಿಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಹಸ್ತಪ್ರತಿಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬೆಸೆದು ಮುಂದಿನ ಪೀಳಿಗೆಗೆ ಪುರಾತನ ಯುಗದ ದರ್ಶನ ಮಾಡಿಸುವ ಪ್ರಮುಖ ಯೋಜನೆ ಇದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹಸ್ತಪ್ರತಿಗಳನ್ನು ಪತ್ತೆ ಹಚ್ಚಲು ಹಾಗೂ ತಮ್ಮ ಸಂಸ್ಥೆಯಲ್ಲಿ ಯಾವುದೇ ದಾಖಲೆ ಇದ್ದರೆ ಮಾಹಿತಿ ನೀಡಲು ಪುರಾತತ್ತ್ವ ಶಾಸ್ತ್ರಜ್ಞ ಮತ್ತು ಸಂಸ್ಕøತಿ ಫೌಂಡೇಶನ್ ಕ್ಲಸ್ಟರ್ ಸೆಂಟರ್ ಮೈಸೂರು ಸಂಸ್ಥೆ, ದೇವಾಲಯ ಸಮಿತಿಯ ಮುಖ್ಯಸ್ಥರು, ಚರ್ಚ್ ಸಮಿತಿಯ ಮುಖ್ಯಸ್ಥರು, ದರ್ಗ ಸಮಿತಿಯ ಮುಖ್ಯಸ್ಥರು ಸಿಬ್ಬಂದಿಗೆ ಸೂಚಿಸಿದರು. ಸಭೆಯಲ್ಲಿ ಇದರ ಬಗ್ಗೆ ಕೂಡಲೇ ಪರಿಶೀಲಿಸಿ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು. ಹಿರಿಯ ಕಥೆಗಾರರು ಮತ್ತು ಕವಿಗಳ ಸಹಾಯದೊಂದಿಗೆ ಜಿಲ್ಲೆ, ಲಿಪಿಗಳು, ವರ್ಷ ಮತ್ತು ಸ್ಥಳಗಳ ಸ್ಥಾಪನೆ ಮತ್ತು ಔಷಧ ಇದರ ಬಗ್ಗೆ ಯಾವುದೇ ಮೂಲ ಪತ್ರ ಕಂಡು ಬಂದಲ್ಲಿ ಸಮೀಕ್ಷೆ ಮಾಡುವಂತೆ ಸೂಚಿಸಿದರು. ಸಂಸ್ಕøತಿ ಫೌಂಡೇಶನ್, ಕ್ಲಸ್ಟರ್ ಸೆಂಟರ್ ಮೈಸೂರು ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಎಸ್.ಕಾರ್ತಿಕೇಯನ್ ಅವರು ಭಾರತದ ಪಾರಂಪರಿಕ ಜ್ಞಾನ ನಿಧಿಗಳಾದ ದೇಶಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ತಾಳೆಗರಿಗಳು, ಹಸ್ತಪ್ರತಿಗಳ ಸಮೀಕ್ಷೆ ಮತ್ತು ಗಣತಿ ಕಾರ್ಯವನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಅಡಿಯಲ್ಲಿ ಜ್ಞಾನ ಭಾರತಂ ಮಿಷನ್ ಕಾರ್ಯವನ್ನು ಕರ್ನಾಟಕದಲ್ಲಿ ಕಾರ್ಯಗತಗೊಳಿಸಿದ್ದು, ಕೊಡಗು ಜಿಲ್ಲೆಯಲ್ಲಿಯೂ ತಾಳೆಗರಿ ಹಸ್ತಪ್ರತಿಗಳ ಸಮೀಕ್ಷೆ ಮತ್ತು ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು, ಮಠಮಾನ್ಯಗಳು ದೇವಾಲಯಗಳು, ಮಸೀದಿಗಳು, ಚರ್ಚ್ಗಳು, ಇತಿಹಾಸ ಸಂಶೋಧಕರು ತಮ್ಮ ಬಳಿ ಇರುವ ತಾಳೆಗರಿ ಮಾಹಿತಿಯನ್ನು ಜ್ಞಾನ ಭಾರತಂ ಮಿಷನ್ ಆಪ್ ನಲ್ಲಿ ಅಳವಡಿಸಬೇಕೆಂದು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಜ್ಞಾನ ಭಾರತಂ ಮಿಷನ್ ಸಂಚಾಲಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ಯೋಜನೆಯಡಿಯಲ್ಲಿ ರಾಷ್ಟ್ರದಾದ್ಯಂತ ಶತಮಾನಗಳಷ್ಟು ಹಳೆ ಕೈಬರಹ, ಪಠ್ಯ, ಹಸ್ತಪ್ರತಿ ಮತ್ತು ದಾಖಲೆಗಳನ್ನು ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಮಾಡುವ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯ ಯಾವುದೇ ಮನೆ ಅಥವಾ ಸ್ಥಳಗಳಲ್ಲಿ ಹಸ್ತಪ್ರತಿಗಳು ಮತ್ತು ತಾಳೆ ಗರಿಗಳು ಲಭ್ಯವಿದ್ದಲ್ಲಿ ಆ ಕುರಿತು ಇಲಾಖೆಗೆ ಮಾಹಿತಿ ನೀಡಿದರೆ, ಡಿಜಿಟಲೀಕರಣ ಮಾಡಲಾಗುವುದು ಎಂದು ಕೊಡಗು ಪುರಾತತ್ತ್ವ ಶಾಸ್ತ್ರಜ್ಞರಾದ ರೇಖಾ ಅವರು ಹೇಳಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕರ್ನಾಟಕ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಪೋಸ್ಟರ್ ನ್ನು ಬಿಡುಗಡೆ ಮಾಡಿದರು. ಕೊಡಗು ಜಾನಪದ ಪರಿಷತ್ ಅಕಾಡೆಮಿ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಎಫ್ಎಂಸಿ ಕಾಲೇಜಿನ ಪ್ರಾಂಶುಪಾಲರಾದ ಬಿ.ರಾಘವ, ಭಗಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಚಂದ್ರಶೇಖರ್, ಓಂಕಾರೇಶ್ವರ ದೇವಾಲಯದ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಲ್.ದೇವರಾಜ್, ಸೇಂಟ್ ಆನ್ಸ್ ಚರ್ಚ್ ಧರ್ಮ ಗುರು ಜೇಮ್ಸ್ ಡಾಮಿನಿಕ್, ಎಮ್ಮೆಮಾಡು ದರ್ಗಾದ ಧರ್ಮ ಗುರು ಮೊಹಮ್ಮದ್ ಜಾಕೀರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ಕೊಡವ ಸಮಾಜದ ಪ್ರಮುಖರು, ನಗರಸಭೆ ಸದಸ್ಯರು, ಗೌಡ ಸಮಾಜದ ಪ್ರಮುಖರು ಹಾಗೂ ಇತರರು ಪಾಲ್ಗೊಂಡಿದ್ದರು.









