
ಮಡಿಕೇರಿ ಮೇ 3 NEWS DESK : ಸುಸಂಸ್ಕೃತ ಸಮಾಜ ನಿರ್ಮಾಣದಕ್ಕೆ ಬಂಟ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಗುರುದೇವಾನಂದ ಸ್ವಾಮೀಜಿ ಬಣ್ಣಿಸಿದರು. ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್ ಹಾಗೂ ಜಿಲ್ಲಾ ಬಂಟರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಜರುಗಿದ ಬಂಟರ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಸಮಾಜಕ್ಕೆ ಸುಸಂಸ್ಕೃತ ಪ್ರಜೆಗಳ ಅಗತ್ಯವಿದೆ. ಮಕ್ಕಳಿಗೆ ಸಂಸ್ಕಾರ ಕಲಿಸುವ ಕಾರ್ಯವನ್ನು ಮನೆಯಿಂದಲೇ ಆರಂಭಿಸಬೇಕು. ಈ ವಿಚಾರದಲ್ಲಿ ಮಾತೆಯರಿಗೆ ಮಹತ್ತರ ಜವಾಬ್ದಾರಿ ಇದೆ ಎಂದರು. ನಾಡಿನ ವಿವಿಧೆಡೆ ಬಂಟರ ಭವನ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಭವನ ಈವರೆಗೆ ಇರಲಿಲ್ಲ. ಉದ್ದೇಶಿತ ಯೋಜನೆ ಶೀಘ್ರವಾಗಿ ಈಡೇರಲು ಸಮುದಾಯ ಬಾಂಧವರೆಲ್ಲರು ಸಹೃದಯದಿಂದ ಸಂಘಟನೆ ಜೊತೆ ನಿಲ್ಲಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ನಾಡಿನಲ್ಲಿರುವ ಪ್ರಬಲ ಮತ್ತು ಪ್ರಭಾವಿ ಸಮುದಾಯಗಳಲ್ಲಿ ಬಂಟ ಸಮುದಾಯ ಕೂಡಾ ಒಂದು. ಉದ್ಯಮ, ಸಿನೆಮಾ ಕ್ಷೇತ್ರದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಬಂಟ ಬಾಂಧವರು ಹೊಂದಿದ್ದಾರೆ. ಉದ್ದೇಶಿತ ಭವನ ವ್ಯವಸ್ಥಿತವಾಗಿ ನಿರ್ಮಾಣವಾಗಬೇಕು. ಸಂಸ್ಕೃತಿ ಬಿಂಬಿಸುವ ಭವನವಾಗಿ ಕೊಡಗು ಬಂಟರ ಭವನ ರೂಪುಗೊಳ್ಳಬೇಕೆಂದು ಸಲಹೆ ನೀಡಿದರು. ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಪ್ರಾಸ್ತಾವಿಕ ಮಾತನಾಡಿ, ಅಂದುಕೊಂಡಂತೆ ಆಗಿದ್ದರೆ ಕೊಡಗು ಜಿಲ್ಲೆಯಲ್ಲಿ ಬಹಳ ವರ್ಷದ ಹಿಂದೆಯೇ ಭವನ ನಿರ್ಮಾಣವಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಅದು ಆಗಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಕೈ ಹಾಕಿದಾಗ ಕಾಲೆಳೆಯುವವರು ಕೂಡಾ ಇದ್ದಾರೆ. ಜಿಲ್ಲೆಯಲ್ಲಿರುವ ಬಂಟ ಬಾಂಧವರು ಈಗ ಒಗ್ಗಟ್ಟಾಗಿದ್ದು, ಕಾಲೆಳೆಯುವವರಿಗೆ ಈಗಿನ ಆಡಳಿತ ಮಂಡಳಿ ಹೆದರುವುದಿಲ್ಲ. ಬಂಟರ ಏಳಿಗೆಯ ಉದ್ದೇಶದಿಂದ ಡಾ. ಪ್ರೇಮನಾಥ್ ಪೂಂಜರವರು ದಾನವಾಗಿ ಜಾಗವನ್ನು ನೀಡಿದ್ದಾರೆ. ಅವರ ಆಶಯದಂತೆ ಈ ಜಾಗದಲ್ಲಿ ಭವನ ನಿರ್ಮಾಣವಾಗುತ್ತಿದೆ ಎಂದರು. ಉದ್ದೇಶಿತ ಭವನವನ್ನು 12ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಭವನ ನಿರ್ಮಾಣವಾಗಬೇಕೆಂಬ ಕನಸಿದೆ. ಎಲ್ಲರ ಸಹಕಾರವಿದ್ದರೆ ಉದ್ದೇಶಿತ ಅವಧಿಯಲ್ಲಿ ಮಡಿಕೇರಿಯಲ್ಲಿ ಸುಸಜ್ಜಿತ ಭವನ ತಲೆ ಎತ್ತಲಿದೆ ಎಂದು ಹೇಳಿದರು. ವಿಧಾನ ಪರಿಷತ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಭವನ ನಿರ್ಮಾಣಕ್ಕೆ 05 ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಉದ್ಯಮಿ ಕುಸುಮೋದರ ಡಿ. ಶೆಟ್ಟಿ ಮಾತನಾಡಿ, ಬಂಟರೆಂದರೆ ಉದ್ಯಮಿಗಳು ಅಂತ ಗುರುತಿಸುತ್ತಾರೆ. ಆದರೆ ಜಗತ್ತಿನಾದ್ಯಂತ ವಿವಿಧ ಕ್ಷೇತ್ರದಲ್ಲಿ ಬಂಟ ಸಮುದಾಯದ ಸಾಧಕರಿದ್ದಾರೆ. ಇಷ್ಟಿದ್ದರೂ ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅದನ್ನು ನಾವೆಲ್ಲರು ದೂರ ಮಾಡಿ, ಎಲ್ಲರೂ ಒಗ್ಗಟ್ಟಿನಿಂದ ಬದುಕುವುವುದನ್ನು ಮೈಗೂಡಿಕೊಳ್ಳಬೇಕಿದೆ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಬಂಟ ಬಾಂಧವರ ಪಾಲಿಗೆ ಈ ದಿನ ಚಿರಸ್ಮರಣೀಯವಾಗಿರಲಿದೆ. ಹಿಂದು ಧರ್ಮದ ಭಾಗವಾಗಿರುವ ಬಂಟರು ಎಲ್ಲಾ ಕ್ಷೇತ್ರದಲ್ಲೂ ಪಾರಮ್ಯತೆ ಹೊಂದಿದ್ದಾರೆ. ಹಿಂದು ಸಮಾಜಕ್ಕೆ ಡಾ. ಪ್ರೇಮನಾಥ್ ಪೂಂಜ ಅವರ ಕೊಡುಗೆ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಜನ ಕೇವಲ ಹಣದಲ್ಲಿ ಶ್ರೀಮಂತರಾದರೆ ಸಾಲದು. ಹೃದಯ ಶ್ರೀಮಂತಿಕೆ ಬಹಳ ಮುಖ್ಯವಾಗುತ್ತದೆ. ಭವನ ನಿರ್ಮಾಣದ ಜೊತೆಗೆ ಪಕ್ಕದಲ್ಲೆ ಹೆಚ್ಚುವರಿ ಜಾಗ ಖರೀದಿ ಮಾಡಿ ವಾಹನ ನಿಲುಗಡೆಗೂ ಅಗತ್ಯ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ಘಟಕ ಅಧ್ಯಕ್ಷ ಗಿರೀಶ್ ತೆಳ್ಳಾರ್ ಮಾತನಾಡಿ, ನಮ್ಮ ಜನಾಂಗದವರು ಅಸೂಯೆ ಬಿಟ್ಟು ಒಂದಾಗಬೇಕಿದೆ. ಕೊಡಗು ಜಿಲ್ಲೆಯ ಬಂಟರ ಬೆಳವಣಿಗೆ ವಿಚಾರದಲ್ಲಿ ಜಾಗತಿಕ ಬಂಟರ ಸಂಘ ಸದಾ ಜೊತೆಗೆ ನಿಲ್ಲುತ್ತದೆ. ಉದ್ದೇಶಿತ ಅವಧಿಯಲ್ಲಿ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುದೆಂದರು. :: ಬಿರುದು ಪ್ರದಾನ : ಇತ್ತೀಚೆಗೆ ನಿಧನರಾದ ಕೊಡಗಿನ ಹಿರಿಯ ಬೆಳೆಗಾರ, ಜನಪ್ರತಿಯ ವೈದ್ಯ ಡಾ. ಪ್ರೇಮನಾಥ್ ಪೂಂಜ ಅವರಿಗೆ ಮರಣೋತ್ತರವಾಗಿ ʼಬಂಟ ಬಹದ್ದೂರ್ʼ ಬಿರುದು ನೀಡಿ ಗೌರವಿಸಲಾಯಿತು. ಪೂಂಜ ಅವರ ಸಾಧನೆಯ ಕುರಿತಾದ ವಿವರವನ್ನು ಸಂಘದ ಕಾರ್ಯದರ್ಶಿ ರವೀಂದ್ರ ವಿ. ರೈ ಓದಿದರು. ಭವನದ ಶಂಕುಸ್ಥಾಪನೆಯ ಪೂಜಾ ಕಾರ್ಯವನ್ನು ಶ್ರೀಕೃಷ್ಣ ಭಟ್ ನೆರವೇರಿಸಿದರು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ್ ಶೆಟ್ಟಿ, ಖ್ಯಾತ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಯುವ ಘಟಕ ಜಿಲ್ಲಾಧ್ಯಕ್ಷ ಸದಾನಂದ ರೈ, ಉದ್ಯಮಿ ಪುರುಷೋತ್ತಮ ರೈ, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಬಂಟರ ಸಂಘದ ತಾಲೂಕು, ಹೋಬಳಿ, ನಗರ ಘಟಕ, ಮಹಿಳಾ ಘಟಕ ಅಧ್ಯಕ್ಷರು ವೇದಿಕೆಯಲ್ಲಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಡಿಕೇರಿಗೆ ಆಗಮಿಸಿದ ಗುರುದೇವಾನಂದ ಸ್ವಾಮೀಜಿಯವರನ್ನು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬರಮಾಡಿಕೊಂಡು, ಬೈಕ್ ಜಾಥ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು. ಹಿತ ಯೋಗೇಶ್ ಶೆಟ್ಟಿ ಮತ್ತು ಅಪೇಕ್ಷಾ ರಾಧಾಕೃಷ್ಣ ಪ್ರಾರ್ಥಿಸಿದರು. ಉಪಾಧ್ಯಕ್ಷ ರತ್ನಾಕರ ರೈ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ರೈ ವಂದಿಸಿದರು.









