
ಸುಂಟಿಕೊಪ್ಪ ಜು.8 NEWS DESK : ಸಹಕಾರ ಕ್ಷೇತ್ರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರಶ್ನಿಸುವ ಗುಣಗಳನ್ನು ಪ್ರತಿಯೊಬ್ಬ ಸದಸ್ಯರು ಬೆಳೆಸಿಕೊಂಡಾಗ ಮಾತ್ರ ಸಹಕಾರ ಕ್ಷೇತ್ರವು ಬಲಿಷ್ಠವಾಗಿ ಬೆರೂರಲು ಸಾಧ್ಯವೆಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿಪ್ರಾಯಪಟ್ಟರು. ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘ ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭ ಹಾಗೂ ಮೂರು ಸಂಘಗಳ ಜಾಗದ ದಾಖಲೆ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಪ್ರಶ್ನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಗ್ರಾಮೀಣ ಭಾಗದ ಜನತೆ ಹೈನುಗಾರಿಕೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಇಲ್ಲಿನ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಾಗೂ ಸಚಿವಾಲಯದಿಂದ ಯಾವುದೇ ರೀತಿಯ ಸಹಕಾರ ಕೊಡಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಲೆಯ ಆಮಿಷಕ್ಕೆ ಒಳಗಾಗಿ ಯಾರೂ ತಮ್ಮ ಜಮೀನುಗಳನ್ನು ಮಾರಾಟ ಮಾಡದಂತೆ ರೈತರಲ್ಲಿ ಮನವಿ ಮಾಡಿದರು. :: ಅನುದಾನ ಘೋಷಣೆ :: ಇದೇ ಸಂದರ್ಭದಲ್ಲಿ ಶಾಸಕರು ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ತಲಾ 5 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘದ ಅಧ್ಯಕ್ಷರಾದ ಎ.ಎಂ.ಲೋಕನಾಥ್ ಅವರು, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2235ಕ್ಕೂ ಹೆಚ್ಚು ಸದಸ್ಯರು, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 448 ಸದಸ್ಯರು ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರದಲ್ಲಿ 335ಕ್ಕೂ ಹೆಚ್ಚು ಸದಸ್ಯರು ಸಹಕಾರಿ ತತ್ವದಡಿಯಲ್ಲಿ ಒಂದಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಸಂಘಗಳ ಬೆಳವಣಿಗೆಯ ವಿವರ ನೀಡಿದರು. ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮುರುಳಿ ಮಾದಯ್ಯ ಅಧ್ಯಕ್ಷತೆ ವಹಿಸಿದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಾದ ಬಿ.ಎಂ.ಸಾಗರ್ ಅವರು ಸಂಘಗಳ ಜಾಗದ ದಾಖಲಾತಿಗಳನ್ನು ಸರಿದೂಗಿದ ಒದಗಿಸಿಕೊಟ್ಟ ಅಧಿಕಾರಿಗಳನ್ನು ಸ್ಮರಿಸಿದರು. ಇದೇ ಸಂದರ್ಭ 3 ಸಹಕಾರ ಸಂಘಗಳ ವತಿಯಿಂದ ಶಾಸಕ ಡಾ.ಮಂಥರ್ ಗೌಡ ಹಾಗೂ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಶಾಲು ಹೊದೆಸಿ ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 3 ಸಹಕಾರ ಸಂಘಗಳ ಉಪಾಧ್ಯಕ್ಷರುಗಳು, ಸರ್ವ ನಿರ್ದೇಶಕ ಮಂಡಳಿಯ ಸದಸ್ಯರುಗಳು, ನೂರಾರುಸಂಖ್ಯೆಯಲ್ಲಿ ಸಹಕಾರಿ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ದವಸ ಭಂಡಾರದ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿದರು, ಬಿ.ಎಸ್.ಧನಪಾಲ್ ವಂದಿಸಿದರು.









