
ಮಡಿಕೇರಿ ಜು.25 NEWS DESK : “ನೀಟ್” ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಯುವ ಸಮೂಹ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ವಾಯ್ಸ್ ಆಫ್ ಯೂತ್ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು. ನೀಟ್ ಪರೀಕ್ಷಾ ಪ್ರಕರಣದ ಹಿನ್ನೆಲೆ ವಾಟ್ಸ್ ಗ್ರೂಪ್ ಆಗಿ ವಾಯ್ಸ್ ಆಫ್ ಯೂತ್ ಗ್ರೂಪ್ ಅಸ್ತಿತ್ವಕ್ಕೆ ಬಂದಿದ್ದು, ಶನಿವಾರದಂದು ಇದರ ಸದಸ್ಯ ವಿದ್ಯಾರ್ಥಿಗಳು ಹಾಗೂ ಕೆಲ ಸಾರ್ವಜನಿಕರು ಮುಖಕ್ಕೆ “ಕೆಂಪು-ಕಪ್ಪು” ಬಣ್ಣವನ್ನು ಬಳಿದುಕೊಂಡು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಘೋಷಣೆಗಳ ಸಹಿತ ಪ್ರತಿಭಟನೆ ನಡೆಸಿದರು. ಯುವ ಸಮೂಹ ಪ್ರಶ್ನಿಸುವ ಮನೋಭಾವÀವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಾಯ್ಸ್ ಆಫ್ ಯೂತ್ನ ಸದಸ್ಯೆ ಗೌರಿ ಮಂಡೀರ ಮಾತನಾಡಿ, ವಾಯ್ಸ್ ಆಫ್ ಯೂತ್ ಎನ್ನುವುದು ಯಾವುದೇ ರಾಜಕೀಯ ಪಕ್ಷವಲ್ಲ, ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದ್ದು, ಇದು ಯುವ ಸಮೂಹವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು. ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಇರಬೇಕೆಂಬುದು ಯುವ ಸಮೂಹದ ಬೇಡಿಕೆಯಾಗಿದೆಯೆಂದು ಸ್ಪಷ್ಟಪಡಿಸಿದರು. ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ನೀಟ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ ಅವರು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮನಬಂದಂತೆ “ಕೋಚಿಂಗ್ ಸೆಂಟರ್”ಗಳು ತಲೆ ಎತ್ತುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿ, ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸುವುದಾಗಿ ತಿಳಿಸಿದರು. ಕಪ್ಪು ಮತ್ತು ಕೆಂಪು… ಸಂಘಟನೆಯ ಸದಸ್ಯ ಪ್ರಸನ್ನ ಅವರು ಮಾತನಾಡಿ, ಇಂದಿನ ಹೋರಾಟದಲ್ಲಿ ವಿದ್ಯಾರ್ಥಿಗಳು ಮುಖಕ್ಕೆ ರಾಜಕಾರಣಿಗಳ ಜನವಿರೋಧಿ ನಿಲುವು, ಭ್ರಷ್ಟಾಚಾರಗಳ ಪ್ರತೀಕವಾಗಿ “ಕಪ್ಪು” ಬಣ್ಣವನ್ನು ಹಚ್ಚಿಕೊಂಡಿದ್ದೇವೆ. “ಕೆಂಪು” ಬಣ್ಣ ಮಕ್ಕಳ ರಕ್ತವನ್ನು ಪ್ರತಿನಿಧಿಸುತ್ತದೆ. ಯುವ ಸಮೂಹ ತನ್ನ ರಕ್ತ ಬಸಿದು ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಹಂತದಲ್ಲಿ ಅದನ್ನೆ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ರಾಜಕೀಯ ಮಾಡುವುದನ್ನು ತೀವ್ರವಾಗಿ ವಿರೋಧಿಸುವ ನಿಟ್ಟಿನಲ್ಲಿ “ಕೆಂಪು” ಬಣ್ಣ ಬಳಿದುಕೊಂಡಿರುವುದಾಗಿ ಹೇಳಿದರು. ಶಿಕ್ಷಣದಿಂದ ಪ್ರಗತಿ ಎನ್ನುವ ಘೋಷ ವಾಕ್ಯಗಳಿದೆಯಾದರು, ಪ್ರಸ್ತುತ ವ್ಯವಸ್ಥೆಯಡಿ ವಿದ್ಯಾವಂತ ಯುವ ಸಮುದಾಯಕ್ಕೆ ಅಗತ್ಯ ಉದ್ಯೋಗಾವಕಾಶಗಳು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆ ಎಷ್ಟು ಸರಿ ಎಂದು ಕೇಳಿದ ಅವರು, ಸಮಾಜದಲ್ಲಿ ಕಂಡು ಬರುತ್ತಿರುವ ಇಂತಹ ಪರಿಸ್ಥಿತಿಗಳ ಬಗ್ಗೆ ಯುವ ಸಮೂಹ ಧ್ವನಿ ಎತ್ತಬೇಕು ಮತ್ತು ಪ್ರಶ್ನಿಸಬೇಕೆಂದು ಕರೆ ನೀಡಿದರು. ಹೋರಾಟ ಆರಂಭವಷ್ಟೆ- ಸಂಘಟನೆಯ ನಿತಿನ್ ಥೋಮಸ್ ಮಾತನಾಡಿ, ನಮ್ಮ ಹೋರಾಟ ಕೇವಲ ನೀಟ್ಗೆ ಮಾತ್ರ ಸೀಮಿತವಾಗಿಲ್ಲ. ಸ್ಥಳೀಯ ಸಮಸ್ಯೆಗಳು ಜನರ ಮೂಲಭೂತ ವ್ಯವಸ್ಥೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಪ್ರಶ್ನಿಸುತ್ತದೆ. ಜಿಲ್ಲಾ ಕೇಂದ್ರ ಮಡಿಕೇರಿಯ ಮಾರುಕಟ್ಟೆಯ ಅವ್ಯವಸ್ಥೆಗಳು, ಬೀದಿನಾಯಿಗಳ ಹಾವಳಿ, ಜಿಲ್ಲಾ ಆಸ್ಪತ್ರೆಯಲ್ಲಿ ಬಡ ಮಂದಿಗೆ ದೊರಕದ ಸೂಕ್ತ ಚಿಕಿತ್ಸೆಗಳ ಬಗ್ಗೆಯೂ ನಾವು ಪ್ರಶ್ನಿಸುತ್ತಿದ್ದೇವೆ. ಪ್ರಸ್ತುತ ಪ್ರಶ್ನಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳುವ ಅಗತ್ಯವಿದೆ. ಆ ಮೂಲಕ ನಮ್ಮ ಹಕ್ಕುಗಳನ್ನು, ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಹೋರಾಟ ಕೇವಲ ಆರಂಭವಷ್ಟೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ವಿವಿಧೆಡೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









