
ಮಡಿಕೇರಿ NEWS DESK ಜು.30 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಆ.2 ರಂದು 31ನೇ ಸಾರ್ವತ್ರಿಕ ಕಕ್ಕಡ ಪದ್ನೆಟ್ ಆಚರಣೆ ನಡೆಯಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಮಾಧ್ಯಮ ವರದಿಗಾರರು ಹಾಗೂ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸಾರ್ವಜನಿಕವಾಗಿ “ಕಕ್ಕಡ ಪದ್ನೆಟ್” ಆಚರಣೆ ಆರಂಭವಾಗಿ ಈ ವರ್ಷಕ್ಕೆ ಮೂರು ದಶಕಗಳು (31 ವರ್ಷಗಳು) ಪಾದಾರ್ಪಣೆ ಮಾಡುತ್ತಿದೆ. ಈ ಪರಂಪರೆಯನ್ನು ಮೂಲತಃ ಕೊಡವ ಕಾರಣವರು (ಪೂರ್ವಜರು) ಪ್ರಾರಂಭಿಸಿದ್ದು, ಅದನ್ನು ಸಿಎನ್ಸಿ ಸಾರ್ವತ್ರಿಕ ಆಚರಣೆಯ ಮೂಲಕ ಅತ್ಯಂತ ಗೌರವದಿಂದ ಮುಂದುವರಿಸಿಕೊಂಡು ಬರುತ್ತಿದೆ. “ಕಕ್ಕಡ ಪದ್ನೆಟ್” ಕಾವೇರಿ ಮಾತೆ, ಪ್ರಕೃತಿ ಮಾತೆ, ಪವಿತ್ರ ಕೋವಿ (ತೋಕ್), ಕೊಡವ ವಂಶಾವಳಿಯ ಪವಿತ್ರ ಸ್ಥಳಗಳಾದ ‘ಮಂದ್’ ಮತ್ತು ‘ದೇವಕಾಡು’ ಹಾಗೂ ಕೊಡವ ಜನರ ನಡುವಿನ ಅವಿನಾಭಾವ ಸಂಬಂಧವನ್ನು ಸಂಕೇತಿಸುತ್ತದೆ. ಆದಿಮಸಂಜಾತ ಕೊಡವರ ಪ್ರಕೃತಿ ಆರಾಧನೆ, ಯೋಧ ಪರಂಪರೆ ಮತ್ತು ಕೃಷಿ ಸಂಸ್ಕೃತಿಯನ್ನು ಸಾಕ್ಷೀಕರಿಸುತ್ತದೆ. ಇದು ಕೊಡವ ಜಾನಪದ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ ಎಂದು ತಿಳಿಸಿರುವ ಎನ್.ಯು.ನಾಚಪ್ಪ ಅವರು, “ಕಕ್ಕಡ ಪದ್ನೆಟ್” ಸಂಭ್ರಮವನ್ನು ಯಶಸ್ವಿಗೊಳಿಸಲು ಕೊಡವ ಹಾಗೂ ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಆಗಮಿಸುವಂತೆ ಕೋರಿದ್ದಾರೆ.
*ಹಕ್ಕೊತ್ತಾಯಗಳು* ಸಿಎನ್ಸಿ ಸಂಘಟನೆ ಕಳೆದ 36 ವರ್ಷಗಳಿಂದ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತ ಮತ್ತು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. “ಕಕ್ಕಡ ಪದ್ನೆಟ್” ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳೊಂದಿಗೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ-ಆಡಳಿತ. ಈಶಾನ್ಯ ಭಾರತದ ರಾಜ್ಯಗಳ ಮಾದರಿಯಲ್ಲಿ ಭಾರತದ ಸಂವಿಧಾನದಡಿ ಕೊಡವ ಭೂಮಿ, ಜೀವ ನದಿಗಳು, ಜೀವವೈವಿಧ್ಯತೆ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ. ಯುಎನ್ ಅಂತಾರಾಷ್ಟ್ರೀಯ ಘೋಷಣೆ ಮತ್ತು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಪ್ರತಿಪಾದಿಸಲಾದಂತೆ ಕೊಡವರ ಆದಿಮ ಸಂಜಾತತೆಯ ಪಾರಂಪರಿಕ ಗುರುತಿಗೆ ಸಾಂವಿಧಾನಿಕ ವಿಶೇಷ ರಕ್ಷಣೆ.
ಭಾರತೀಯ ಸಂವಿಧಾನದ ವಿಧಿ 25, 26 ಮತ್ತು 28ರ ಅಡಿಯಲ್ಲಿ ಕೊಡವರ ಪವಿತ್ರ ಕೋವಿ/ತೋಕ್ (ಕೋವಿ ಹಕ್ಕು) ರಕ್ಷಣೆಯನ್ನು ಅಗತ್ಯ ಧಾರ್ಮಿಕ ಆಚರಣೆಯಾಗಿ ಕಾಯ್ದುಕೊಳ್ಳುವುದು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ ಕ್ಷೇತ್ರ”ದ ಮಾದರಿಯಲ್ಲಿ, ಕರ್ನಾಟಕ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡುವುದು. ತೆರಿಗೆ ಪಾವತಿಸದ ನೆಪ ಒಡ್ಡಿ ಹೊರಗಿನ ಪಾಲೇರಿ ರಾಜರು ಮತ್ತು ಬ್ರಿಟಿಷರು ಕೊಡವರಿಂದ ವಶಪಡಿಸಿಕೊಂಡು, ಹೊರಗಿನ ಲೇವಾದೇವಿಗಾರರು ಮತ್ತು ಬಂಡವಾಳ ಶಾಹಿಗಳಿಗೆ ಹರಾಜು ಮಾಡಲಾದ, ಅಡವಿಡಲಾದ ಹಾಗೂ ಬೋಗ್ಯಕ್ಕೆ ನೀಡಲಾದ ಕೊಡವರ ಪಾರಂಪರಿಕ ಆಸ್ತಿಗಳನ್ನು ಯುಎನ್ ಮೂಲನಿವಾಸಿಗಳ ಹಕ್ಕುಗಳ ಕಾಯ್ದೆಯಡಿ ಮರಳಿ ಕೊಡವರ ಪರಂಪರೆಗೆ ಒಪ್ಪಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಡವ ಮಂದ್, ದೇವಕಾಡು ಮತ್ತು ವಂಶಪಾರಂಪರ್ಯ ಭೂಮಿಗಳು ಯುಗಯುಗಗಳಿಂದಲೂ ಕೊಡವರ ಆಸ್ತಿಯಾಗಿದ್ದವು. ಕೊಡವರಿಗೆ ರಾಜಕೀಯ ಅಧಿಕಾರ ತಪ್ಪಿದಾಗ ಇವುಗಳನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲಾಯಿತು. ಇದನ್ನು ಮರಳಿ ನೀಡುವುದು ಯಾವುದೇ ಭಿಕ್ಷೆಯಲ್ಲ, ಅದು ಅಂತಾರಾಷ್ಟ್ರೀಯ ಕಾನೂನು. ವಿಶ್ವ ರಾಷ್ಟ್ರ ಸಂಸ್ಥೆಯ ನಿಯಮಾವಳಿಗಳ ಪ್ರಕಾರ, ಆದಿಮಸಂಜಾತಗಳಿಗೆ ತಮ್ಮ ಸಾಂಪ್ರದಾಯಿಕ ಭೂಮಿ ಮತ್ತು ಸಂಪನ್ಮೂಲಗಳ ಮೇಲೆ ಸಂಪೂರ್ಣ ಹಕ್ಕಿದೆ. ಸರಕಾರ ಇದನ್ನು ಮರುಪರಿಶೀಲಿಸಿ ಪರಿಹಾರ ಅಥವಾ ಮರು-ಒಪ್ಪಂದ ರೂಪದಲ್ಲಿ ಒದಗಿಸಬೇಕು ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.









