
ವಿರಾಜಪೇಟೆ ಜು.31 NEWS DESK : ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಕೆ.ಜಿ.ವಿಭಾಗದ ನೂತನ ಬಾಲ ನಾಯಕರ ‘ಪದಗ್ರಹಣ ಸಮಾರಂಭ’ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಬಾಲ ನಾಯಕರಿಗೆ ಬ್ಯಾಡ್ಜ್ ನೀಡಿ ಮಾತನಾಡಿದ ಲೇಖಕಿ ರಜಿತಾ ಕಾರ್ಯಪ್ಪ, ನಾಯಕತ್ವ ಬಾಲ್ಯದಲ್ಲೇ ಮೊಳಕೆಯೊಡೆಯಬೇಕು, ನಾಯಕತ್ವ ಎಂಬುದು ಕೇವಲ ದೊಡ್ಡವರ ಆಸ್ತಿಯಲ್ಲ; ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಜವಾಬ್ದಾರಿ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿದಾಗ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ರೋಟರಿ ಶಾಲೆಯ ಈ ಪ್ರಯತ್ನ ಶ್ಲಾಘನೀಯ ಎಂದರು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ನಾಯಕತ್ವ, ಶಿಸ್ತು ಮತ್ತು ಜವಾಬ್ದಾರಿಯ ಗುಣಗಳನ್ನು ಬೆಳೆಸುವುದು ಅವರ ಭವಿಷ್ಯಕ್ಕೆ ಬಲವಾದ ಬುನಾದಿ ಹಾಕುತ್ತದೆ. ಪ್ರತಿಯೊಬ್ಬ ಮಗುವಿನಲ್ಲೂ ಅಪಾರ ಶಕ್ತಿಯಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಮತ್ತು ಶಿಕ್ಷಕರಿಂದಾಗಬೇಕು”. ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬಾಲ್ಯದಲ್ಲೇ ಬಿತ್ತಿ, ಅವರನ್ನು ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ನಿಲ್ಲುವಂತೆ ರೂಪಿಸಿದ ಕೆ.ಜಿ. ವಿಭಾಗದ ಶಿಕ್ಷಕಿಯರ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಸರೋಜ್ ಕಾರ್ಯಪ್ಪ ಮಾತನಾಡಿ, ಶಾಲಾ ಹಂತದಲ್ಲೇ ಇಂತಹ ಜವಾಬ್ದಾರಿಗಳನ್ನು ನೀಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ಮಗುವೂ ಅನನ್ಯ, ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ವಿಶೇಷ ಪ್ರತಿಭೆ ಇರುತ್ತದೆ. ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ, ಮಗುವಿನಲ್ಲಿ ಅಡಗಿರುವ ಸಾಮಥ್ರ್ಯವನ್ನು ಗುರುತಿಸಿ, ಅದಕ್ಕೆ ವೇದಿಕೆ ಕಲ್ಪಿಸಿಕೊಡುವುದು ನಿಜವಾದ ಶಿಕ್ಷಣ ಎಂದರಲ್ಲದೆ ರೋಟರಿ ಸಂಸ್ಥೆಯು ಸದಾ ಶಿಕ್ಷಣ ಮತ್ತು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡುತ್ತಾ ಬಂದಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಇಂತಹ ಸಂಸ್ಕಾರಯುತ ಕಾರ್ಯಕ್ರಮಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿವೆ ಎಂದರು. ರೋಟರಿ ಶಾಲೆಯ ಮುಖ್ಯೋಪದ್ಯಾಯರಾದ ವಿಶಾಲಾಕ್ಷಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮೊದಲ ಶಾಲೆ ಮನೆ, ಶಾಲೆಯಲ್ಲಿ ಶಿಕ್ಷಕರು ನೀಡುವ ಶಿಸ್ತಿನ ಜೊತೆಗೆ, ಮನೆಯಲ್ಲಿ ಪೋಷಕರು ನೀಡುವ ಪ್ರೋತ್ಸಾಹ ಮಗುವಿನ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸುತ್ತದೆ. ಇಂದು ಅಧಿಕಾರ ಸ್ವೀಕರಿಸಿದ ಪುಟ್ಟ ನಾಯಕರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ಸಹಪಾಠಿಗಳಿಗೆ ಮಾದರಿಯಾಗಿ ನಡೆಯಲಿ ಎಂದರು. :: ಪ್ರಮಾಣ ವಚನ ಸ್ವೀಕರಿಸಿದ ಬಾಲ ನಾಯಕರು :: ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಬಾಲ ನಾಯಕರಿಗೆ ಅಧಿಕೃತ ಬ್ಯಾಡ್ಜ್ ಧರಿಸಿ, ಜವಾಬ್ದಾರಿ ಹಸ್ತಾಂತರಿಸಿ ಪ್ರಮಾಣ ವಚನ ಬೋಧಿಸಲಾಯಿತು. ಸ್ಟಾರ್ ನಾಯಕಿಯಾಗಿ ಯುಕ್ತಾ ಕೆ.ಜಿ., ಸಾಂಸ್ಕೃತಿಕ ನಾಯಕಿ ಸನ್ಮಯ ಪಿ.ಎಸ್., ಶಿಸ್ತು ನಾಯಕ: ಮೊಹಮ್ಮದ್ ನಿಹಾಲ್, ಕ್ರೀಡಾ ನಾಯಕ ಚಂದನಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.









