
ಮಡಿಕೇರಿ NEWS DESK ಆ.16 : ಹಿರಿಯ ಪತ್ರಕರ್ತ ಎಂ.ಶ್ರೀಧರ್ ಹೂವಲ್ಲಿ ಅವರು ರಚಿಸಿರುವ 2ನೇ ಕೃತಿ, ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ” ಇಂದು ಲೋಕಾರ್ಪಣೆಗೊಂಡಿತು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ “ಕಥಾಂಜಲಿ” ಪುಸ್ತಕವನ್ನು ಮಾಜಿ ಸಚಿವ ಹಾಗೂ ಸಾಹಿತಿ ಅಡಗೂರು ಹೆಚ್.ವಿಶ್ವನಾಥ್ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು “ಕಥಾಂಜಲಿ” ಪುಸ್ತಕದ ಲೇಖಕ ಶ್ರೀಧರ್ ಅವರು ತಮ್ಮ ಪುಸ್ತಕದಲ್ಲಿ ಪತ್ನಿ ತಮಗೆ ಬೆನ್ನೆಲುಬಾಗಿ ಇದ್ದ ಬಗ್ಗೆ ಬದುಕಿನ ಕಥೆಯನ್ನು ಅತ್ಯಂತ ಮನೋಜ್ಞವಾಗಿ ಉಲ್ಲೇಖಿಸಿದ್ದಾರೆ. ಆದರೆ ಇಂದಿನ ಕಾಲಘಟ್ಟದಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮಾಧ್ಯಮಗಳಲ್ಲಿ ಪತಿಯನ್ನು ಪತ್ನಿ ಕೊಲೆ ಮಾಡಿದ ಸುದ್ದಿಗಳೇ ಹೆಚ್ಚು ಹರಿದಾಡುತ್ತಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯವಾದರೆ ಪೊಲೀಸ್ ಠಾಣೆಗಳಲ್ಲಿ ತಕ್ಷಣ ದೂರು ದಾಖಲಾಗುತ್ತದೆ. ಆದರೆ ಮಹಿಳೆಯಿಂದ ದೌರ್ಜನ್ಯವಾಗಿದೆ ಎಂದು ಪುರುಷ ದೂರು ಸಲ್ಲಿಸಿದರೆ ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಹಿಂದೆ ಪುರುಷ ಪ್ರಧಾನ ಸಮಾಜವಿತ್ತು, ಆದರೆ ಇಂದು ಪುರುಷ ಮತ್ತು ಮಹಿಳಾ ಶಕ್ತಿ ಶೇ.50 ರ ಅನುಪಾತದಲ್ಲಿದ್ದು, ಸಮಾನ ಪ್ರಾತಿನಿಧ್ಯವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ಕಾನೂನು ಇರುವಂತೆ ಪುರುಷರ ರಕ್ಷಣೆಗೂ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಈ ಬೇಡಿಕೆ ತಮಾಷೆ ಎನಿಸಿದರೂ ಪರಿಸ್ಥಿತಿ ಕಟುವಾಗಿದೆ ಎಂದರು. ಸಾಹಿತ್ಯ ಓದುಗನಿಗೆ ಸಂತೋಷವನ್ನು ನೀಡುತ್ತದೆ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಒಂದೊAದು ಕಥೆಗಳಿರುತ್ತವೆ. ಈ ಕಥೆಗಳು ಬರವಣಿಗೆಯ ರೂಪದಲ್ಲಿ ಸಾಹಿತ್ಯವಾಗಿ ಮಾರ್ಪಡಬೇಕು. ಇಂದು ಬರೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬರಹಗಾರರಿಗೆ ಶಕ್ತಿ ತುಂಬುವವರು ಬೇಕಾಗಿದ್ದಾರೆ, ಓದುಗರ, ಪ್ರಕಾಶಕರ ಹಾಗೂ ದಾನಿಗಳ ಪ್ರೋತ್ಸಾಹದ ಅಗತ್ಯವಿದೆ. ಕೊಡಗಿನಲ್ಲಿ ಬರಹಗಾರರಿಗೆ ನಿರಂತರ ಶಕ್ತಿ ತುಂಬುತ್ತಾ ಬರುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಕಾರ್ಯ ಶ್ಲಾಘನೀಯವೆಂದು ಅಡಗೂರು ಹೆಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಪ್ರತಿಯೊಬ್ಬರು ಮನೆಯನ್ನು ನಿರ್ಮಿಸುವಾಗ ಎಲ್ಲಾ ಕೋಣೆಗಳ ವ್ಯವಸ್ಥೆಯನ್ನು ಮಾಡುತ್ತಾರೆ. ಆದರೆ ಜ್ಞಾನಾರ್ಜನೆಯ ಪುಸ್ತಕಗಳನ್ನಿಡಲು ಮನೆಗೊಂದು ಗ್ರಂಥಾಲಯವಿರುವುದಿಲ್ಲ. ಮನೆಗೊಂದು ಗ್ರಂಥಾಲಯ ಇಂದಿನ ಅಗತ್ಯತೆಯಾಗಿದೆ, ಮನೆಯಲ್ಲೇ ಗ್ರಂಥಾಲಯವಿದ್ದರೆ ಯಾರು, ಯಾವಾಗ ಬೇಕಾದರು ಓದಬಹುದು. ಪುಸ್ತಕಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ, ಮನೆಗೊಂದು ಗ್ರಂಥಾಲಯ ವ್ಯವಸ್ಥೆ ಮಾಡಿದರೆ ಬರಹಗಾರರಿಗೂ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಪ್ರತಿದಿನ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದರಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಿಂದೆ ಮಹಿಳೆಯರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕಡ್ಡಾಯವಾಗಿತ್ತು. ಆದರೆ ಇಂದು ಓದುಗರ ಸಂಖ್ಯೆಯೇ ಕಡಿಮೆಯಾಗಿದೆ, ಪುಸ್ತಕ ಅಂಗಡಿಗಳಲ್ಲಿ ಪುಸ್ತಕವನ್ನೇ ಕೊಳ್ಳುವವರಿಲ್ಲದಾಗಿದೆ. ಬರಹಗಾರರಿಗೆ ಪ್ರೋತ್ಸಾಹ ನೀಡಲು ಪುಸ್ತಕಗಳನ್ನು ಮುದ್ರಿಸಲು ದಾನಿಗಳೇ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟ ಕಳೆದ 13 ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರಸ್ತೆಗಳಿಗೆ ಸಾಧಕರ ಹೆಸರುಗಳನ್ನು ಇಡಲಾಗಿದೆ, ಸೈನಿಕರ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಇದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿ ಯಾವುದೇ ಜಾತಿ, ಧರ್ಮ, ಭಾಷೆ, ಭೇದವಿಲ್ಲದೆ ಎಲ್ಲರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಯಾವುದೇ ಲಾಭವನ್ನು ನಿರೀಕ್ಷೆ ಮಾಡದೆ ಇಲ್ಲಿಯವರೆಗೆ ದಾಖಲೆಯ 126 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಶ್ರೀಧರ್ ಹೂವಲ್ಲಿ ಅವರು “ಕಥಾಂಜಲಿ” ಪುಸ್ತಕದಲ್ಲಿ ತಮ್ಮ ಬದುಕಿನ ಚಿತ್ರಣವನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಅಲ್ಲದೆ ಸಾಮಾಜಿಕ ಕಳಕಳಿಯ ಉತ್ತಮ ಕಥೆಗಳನ್ನು ರಚಿಸಿದ್ದಾರೆ. ಇನ್ನು ಮುಂದೆಯೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ರಚಿಸಲಿ ಎಂದು ಬೊಳ್ಳಜಿರ ಅಯ್ಯಪ್ಪ ಶುಭ ಹಾರೈಸಿದರು. ಸಮಾಜ ಸೇವಕ ಕೆ.ಎಂ.ಗಣೇಶ್ ಅವರು ಮಾತನಾಡಿ ಮೊಬೈಲ್ ಫೋನ್ ಗಳಿಂದಾಗಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸಿದೆ. ಪುಸ್ತಕ ಮತ್ತು ಪತ್ರಿಕೆಗಳಿಂದ ಅರಿವು ಹೆಚ್ಚಾಗಲಿದ್ದು, ಕನಿಷ್ಠ ವಾರಕ್ಕೆ ಎರಡು ದಿನವಾದರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ. ಅವರು ಮಾತನಾಡಿ ಇತ್ಥಿಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಂದಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹವಾಗಿದೆ. ಶಿಕ್ಷಕರು ಕೂಡ ಸಾಹಿತ್ಯ ರಚಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಮತ್ತು ಸ್ವತ: ತಾವೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಬೇಕು ಎಂದರು. ಕೊಡವ ಮಕ್ಕಡ ಕೂಟ ಕಳೆದ 13 ವರ್ಷಗಳಲ್ಲಿ 126 ಪುಸ್ತಕಗಳನ್ನು ಬಿಡುಗಡೆ ಮಾಡಿ ದಾಖಲೆಯನ್ನೇ ಬರೆದಿದೆ ಎಂದು ಶ್ಲಾಘಿಸಿದರು. “ಕಥಾಂಜಲಿ” ಪುಸ್ತಕದ ಬರಹಗಾರ ಎಂ.ಶ್ರೀಧರ್ ಹೂವಲ್ಲಿ ಅವರು ಮಾತನಾಡಿ ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜ್ಞಾನಾರ್ಜನೆಗೆ ಪೂರಕವಾಗಿರುವ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.
ಸಮಾಜ ಸೇವಕರು ಮತ್ತು ದಾನಿಗಳಾದ ಆಯಲಪಂಡ ಪುಷ್ಪ ಪೂಣಚ್ಚ ಹಾಗೂ ದಮಯಂತಿ ಪೊನ್ನಪ್ಪ ಉಪಸ್ಥಿತರಿದ್ದರು.
ಪತ್ರಕರ್ತ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು ಹಾಗೂ ಲೇಖಕರ ಪರಿಚಯ ಮಾಡಿದರು. ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಸ್ವಾಗತಿಸಿದರು. ವಿದ್ಯಾರ್ಥಿನಿ ಮಿನ್ನಂಡ ಚೋಂದಮ್ಮ ಪ್ರಾರ್ಥಿಸಿದರು.
ಇದೇ ಸಂದರ್ಭ ಕೊಡವ ಮಕ್ಕಡ ಕೂಟ ಹೊರ ತಂದಿರುವ “ಆಟ್ ಪಾಟ್ ಪಡಿಪು” ಪುಸ್ತಕದ ಏಳನೇ ಆವೃತ್ತಿಯನ್ನು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಉಚಿತವಾಗಿ ವಿತರಿಸಿದರು. *ಕಥಾಂಜಲಿ* ಇಂದು ಬಿಡುಗಡೆಯಾದ “ಕಥಾಂಜಲಿ” ಎಂ.ಶ್ರೀಧರ್ ಹೂವಲ್ಲಿ ಅವರು ರಚಿಸಿರುವ ಎರಡನೇ ಕೃತಿಯಾಗಿದ್ದು, ಇದರಲ್ಲಿ ಒಟ್ಟು 11 ಕಥೆಗಳಿವೆ. ಸಾಮಾಜಿಕ ಮತ್ತು ಸಾಂಸಾರಿಕ ಕಥಾ ವಸ್ತು ಅಡಕವಾಗಿದೆ.
*ಲೇಖಕರ ಪರಿಚಯ*
ಹಿರಿಯ ಪತ್ರಕರ್ತ ಎಂ.ಶ್ರೀಧರ್ ಹೂವಲ್ಲಿ ಅವರು ಪತ್ರಿಕೋದ್ಯಮಕ್ಕೆ ಬರುವ ಮೊದಲು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ರಂಗಭೂಮಿ, ಸಿನಿಮಾ ಮತ್ತು ಕಿರುಚಿತ್ರಗಳಲ್ಲಿ ಕಲಾವಿದರಾಗಿ ಅಭಿನಯಿಸಿದ್ದಾರೆ. ದಿ.ಆರ್.ಕೆ.ಮುತ್ತಪ್ಪ ಹಾಗೂ ಪದ್ಮಿನಿ ದಂಪತಿಯ ಪ್ರಥಮ ಪುತ್ರರಾಗಿರುವ ಇವರು ಮೇಕೇರಿ, ಮಕ್ಕಂದೂರು ಶಾಲೆ ಮತ್ತು ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಪೂರೈಸಿದ್ದಾರೆ.
ವ್ಯಾಸಂಗ ಮುಗಿಸಿದ ನಂತರ ಖಾಸಗಿ ಸಂಸ್ಥೆಯೊ0ದರಲ್ಲಿ ಉದ್ಯೋಗ ಮಾಡುತ್ತಿದ್ದ ಎಂ.ಶ್ರೀಧರ್ ಹೂವಲ್ಲಿ ಅವರು ಲೇಖನ, ಕವನ, ಕತೆ ಹಾಗೂ ಕಾದಂಬರಿ ಮತ್ತಿತರ ಬರಹಗಳನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರು. ಇವರ ಮೊಟ್ಟ ಮೊದಲ ಕಾದಂಬರಿ ‘ಪ್ರೇಮಾಮೃತ’ ವನ್ನು ಪ್ರಕಟಿಸಿ ರಾಜ್ಯದÀ ಗ್ರಂಥಾಲಯಗಳಿಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕಾ ಭವನ ಟ್ರಸ್ಟ್ ನ ಟ್ರಸ್ಟಿಯಾಗಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಧರ್ ಹೂವಲ್ಲಿ ಅವರು 2007ರಲ್ಲಿ ಕೊಡಗು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, ‘ಗಡಿನಾಡ ಸಂಚಾರಿ’ ಪತ್ರಿಕೆಯ ಬೆಳ್ಳಿಹಬ್ಬದ ಸಂದರ್ಭ ಅಂದು ಸಂಸದರಾಗಿದ್ದ ಅಡಗೂರು ಹೆಚ್.ವಿಶ್ವನಾಥ್ ಹಾಗೂ ಸಚಿವರಾಗಿದ್ದ ಎಂ.ಸಿ.ನಾಣಯ್ಯ ಅವರುಗಳು ಸನ್ಮಾನಿಸಿ ಗೌರವಿಸಿದ್ದಾರೆ. ಈ ಹಿಂದೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಶ್ರೀಧರ್ ನೆಲ್ಲಿತ್ತಾಯ ಅವರು ಅಂದಿನ ಎಸ್ಪಿ ಅನುಚೇತ್ ಅವರ ಮೂಲಕ ಸನ್ಮಾನಿಸಿ ಗೌರವಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘದ ವತಿಯಿಂದ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಸನ್ಮಾನಿಸಿ ಗೌರವಿಸಿದ್ದಾರೆ. “ಕಥಾಂಜಲಿ” ಶ್ರೀಧರ್ ಹೂವಲ್ಲಿ ಅವರ ಎರಡನೇ ಕೃತಿಯಾಗಿದೆ. ಎಲ್ಲರೂ ನಮ್ಮವರೇ ಎಂಬ ಮನೋಭಾವದ ವ್ಯಕ್ತಿತ್ವ ಹೊಂದಿರುವ ಇವರು ಉತ್ತಮ ಮನಸ್ಸಿನ ಸ್ನೇಹ ಜೀವಿಯಾಗಿದ್ದಾರೆ. ಎಲ್ಲರನ್ನು ಪ್ರೀತಿಸುವ, ಗೌರವಿಸುವ ಗುಣ ಇವರಲ್ಲಿದೆ. ಜಿಲ್ಲೆಯ ಬಹುತೇಕ ರಾಜಕಾರಣಿಗಳ, ಅಧಿಕಾರಿಗಳ, ಉದ್ಯಮಿಗಳ, ಸಾಹಿತಿಗಳ, ಜನ ಸಾಮಾನ್ಯರ ಪ್ರೀತಿ- ವಿಶ್ವಾಸವನ್ನು ಶ್ರೀಧರ್ ಹೂವಲ್ಲಿ ಗಳಿಸಿಕೊಂಡಿದ್ದಾರೆ.









