
ಮಡಿಕೇರಿ ಆ.19 NEWS DESK : ಪ್ರತಿಯೊಬ್ಬರು ಛಾಯಾಗ್ರಾಹಕರೇ ಆಗಿರುವ ಪ್ರಸ್ತುತ ಕಾಲ ಘಟ್ಟದಲ್ಲಿ, ತೆಗೆಯುವ ಫೋಟೋಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ “ಮೌಲ್ಯ”ವನ್ನು ತುಂಬುವ ಪ್ರಯತ್ನ ಮಾಡಬೇಕಾಗಿದೆಯೆಂದು ಖ್ಯಾತ ಛಾಯಾಗ್ರಾಹಕರು, ಪಕ್ಷಿ ತಜ್ಞರು ಆದ ಡಾ.ಎಸ್.ವಿ.ನರಸಿಂಹನ್ ಕರೆ ನೀಡಿದರು. ಕೊಡಗು ಪತ್ರಕರ್ತರ ಸಂಘ ಮತ್ತು ವೀರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜು ಸಭಾಂಗಣದಲ್ಲಿ ಆಯೋಜಿತ “ವಿಶ್ವ ಛಾಯಾಗ್ರಹಣ ದಿನಾಚರಣೆ-2026″ನ್ನು ಕ್ಯಾಮೆರಾದಿಂದ ಛಾಯಾಚಿತ್ರವನ್ನು ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಫಿಲ್ಮ್ ರೋಲ್ ಗಳನ್ನು ಳಸಿ ಛಾಯಾಗ್ರಹಣ ಮಾಡುತ್ತಿದ್ದ ಹಳೆಯ ಕಾಲ ಘಟ್ಟದಲ್ಲಿ ಛಾಯಾಗ್ರಾಹಕ ಮತ್ತು ಪತ್ರಕರ್ತರು ಬೇರೆ ಬೇರೆಯಾಗಿ ಗುರುತಿಸಲ್ಪಡುತ್ತಿದ್ದರು. ಡಿಜಿಟಲ್ ಛಾಯಾಗ್ರಹಣ ಬಂದ ಬಳಿಕ ಒಟ್ಟು ಛಾಯಾಗ್ರಹಣದ ಆಯಾಮವೇ ಬದಲಾವಣೆಯನ್ನು ಕಂಡು ಕೊಂಡಿದೆ. ಪ್ರಸ್ತುತ ಅತ್ಯುನ್ನತ ತಂತ್ರಜ್ಞಾನದ ಮೊಬೈಲ್ಗಳ ಮೂಲಕ ಗುಣಮಟ್ಟದ ಛಾಯಾಗ್ರಹಣ ಸಾಧ್ಯವಾಗಿದೆಯೆಂದು ನರಸಿಂಹನ್ ತಿಳಿಸಿದರು. :: ಮೈಕ್ರೋ ಪೋಟೋಗ್ರಾಫಿಯತ್ತ ಆಸಕ್ತರಾಗಿ :: ಛಾಯಾಗ್ರಹಣದತ್ತ ಆಸಕ್ತಾಗಿರುವವರು ಸೂಕ್ಷಾತಿಸೂಕ್ಷ್ಯವಾದ “ಮೈಕ್ರೋ ಫೋಟೋಗ್ರಾಫಿ”ಯತ್ತ ಆಸಕ್ತರಾಗುವಂತೆ ತಿಳಿಸಿದ ಅವರು, ಕೀಟಗಳು, ಚಿಟ್ಟೆಗಳು, ಕಪ್ಪೆ ಹೀಗೆ ನೂರಾರು ಬಗೆಯ ಸಣ್ಣ ಗಾತ್ರದ ಜೀವ ಜಗತ್ತೆ ಅತ್ಯಂತ ಅಚ್ಚರಿದಾಯಕವಾದದ್ದು. ಮೈಕ್ರೋ ಫೋಟೋ ಗ್ರಾಫಿಯ ಮೂಲಕ ಅತ್ಯಾಕರ್ಷಕವಾದ ಅಚ್ಚರಿಯ ಜೀವಜಗತ್ತನ್ನು ಕಾಣಲು ಸಾಧ್ಯವಿದೆ. ಇಂತಹ ಫೋಟೋ ಗ್ರಾಫಿಯಲ್ಲಿ ಜಿಲ್ಲೆೆಯವರೇ ಆದ ವಿಪಿನ್ ಬಾಳಿಗ ಮೊದಲಾದವರು ವಿಶ್ವ ಪ್ರಸಿದ್ಧಿಯನ್ನು ಪಡೆದಿರುವುದನ್ನು ಅವರು ಉಲ್ಲೇಖಿಸಿದರು. :: ಕನ್ನಡದಲ್ಲೆ ಅಡಿಬರಹ ಬರೆಯಿರಿ..! :: ಛಾಯಾಗ್ರಹಣದತ್ತ ಆಸಕ್ತಿ ಉಳ್ಳವರಿಗೆ ಪ್ರಸ್ತುತ ಕ್ಯಾಮೆರಾಗಳೆ ಬೇಕೆಂದಿಲ್ಲ. ಮೊಬೈಲ್ಗಳ ಮೂಲಕವೆ ಸಾಧನೆ ಮಾಡಬಹುದು. ಈ ರೀತಿ ಛಾಯಾಗ್ರಹಣ ಮಾಡುವ ಸಂದರ್ಭ ಅದರಲ್ಲಿ ಮೌಲ್ಯವನ್ನು ತುಂಬುವ ಕೆಲಸವನ್ನು ಮಾಡುವಂತೆ ಡಾ.ನರಸಿಂಹನ್ ಮನವಿ ಮಾಡಿದರಲ್ಲದೆ, ತಾವು ತೆಗೆದ ಪೋಟೋಗಳಿಗೆ ಅಂದವಾದ ಅಡಿಬರಹವನನ್ನು ಕನ್ನಡದಲ್ಲೆ ಬರೆದು ಮಾಧ್ಯಮಗಳಿಗೆ ಕಳುಹಿಸಿಕೊಟ್ಟರೆ ಅವು ಪ್ರಕಟವಾಗುತ್ತದೆಂದು ತಿಳಿಸಿದರಲ್ಲದೆ, ತೆಗೆದ ಛಾಯಾಚಿತ್ರಗಳನ್ನು ಶೇಖರಿಸಿಡುವಂತೆ ಕಿವಿಮಾತುಗಳನ್ನಾಡಿ, ಪ್ರಸ್ತುತ ಯಾರು ಬೇಕಾದರೂ ವೃತ್ತಿಪರರ ಬದಲಾಗಿ ಹವ್ಯಾಸಿ ಛಾಯಾಗ್ರಾಹಕರಾಗಿ ರೂಪುಗೊಳ್ಳುವ ಹೆಚ್ಚಿನ ಅವಕಾಶವಿರುವುದಾಗಿ ತಿಳಿಸಿದರು. ವಿರಾಜಪೇಟೆ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ ಮಾತನಾಡಿ, ಛಾಯಾಚಿತ್ರಗಳು ಸಮಾಜದ ಆಗು ಹೋಗುಗಳನ್ನು ತಿಳಿಸುವ ಪ್ರಭಾವಿ ಮಾಧ್ಯಮವೇ ಆಗಿದೆ. ದಿಡ್ಡಳ್ಳಿ ಹೋರಾಟದ ಸಂದರ್ಭ ಪ್ರಕಟವಾದ ಕೆಲ ಛಾಯಾಚಿತ್ರಗಳು ಅಲ್ಲಿನ ನಿರಾಶ್ರಿತರಿಗೆ ಸೂರು ಒದಗಿಸಿಕೊಡಲು ಸಹಕಾರಿಯಾಗಿತ್ತೆಂದು ತಿಳಿಸಿದರು. ಮಾಜಿ ಯೋಧ ಎನ್.ಕೆ.ಸಲಾಂ ಮಾತನಾಡಿ, ಕಾರ್ಗಿಲ್ ಸೆಕ್ಟರ್ನಲ್ಲಿ ಯೋಧರಾಗಿ ಸೇರ್ಪಡೆಗೊಂಡ ಬಳಿಕ ಸೈನ್ಯದಲ್ಲಿ ಸಲ್ಲಿಸಿದ್ದ ಸೇವೆಯನ್ನು ಸ್ಮರಿಸಿ, ತಮ್ಮ ಸೇವಾವಧಿಯಲ್ಲಿ ಸೈನ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಛಾಯಾಗ್ರಹಣ ಮಾಡಿದ್ದೆ. ಅಲ್ಲಿ ಯಾವುದೇ ರೀ ಟೇಕ್ಗಳು ಇರಲಿಲ್ಲವೆಂದು ಅಂದಿನ ದಿನಗಳನ್ನು ಸ್ಮರಿಸಿಕೊಂಡರು. , ಇಂತಹ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ ಎನ್ನುವ ಆಶಯವನ್ನು ಎನ್.ಕೆ. ಸಲಾಂ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತರಾದ ಮಂಡಿಬೆಲೆ ರಾಜಣ್ಣ ಮಾತನಾಡಿ, ಈ ಹಿಂದೆ ಪತ್ರಿಕೆಗಳಿಗೆ ಸುದ್ದಿ ಮಾಡುವ ಸಂದರ್ಭ ಛಾಯಾಗ್ರಾಹಕರ ಅವಶ್ಯಕತೆ ಹೆಚ್ಚಾಗಿ ಕಂಡು ಬರುತಿತ್ತು. ಪ್ರಸ್ತುತ ಕಾಲ ಘಟ್ಟದಲ್ಲಿ ಮೊಬೈಲ್ ಇರುವವರೆಲ್ಲರು ಪತ್ರಕರ್ತರಾಗುತ್ತಿದ್ದಾರೆಂದು ಅಭಿಪ್ರಾಯಪಟ್ಟರಲ್ಲದೇ, , ವಿದ್ಯಾರ್ಥಿಗಳು ಹವ್ಯಾಸಿ ಪತ್ರಕರ್ತರಾಗಿ ಗುರುತಿಸಿಕೊಳ್ಳಲು ಅವಕಾಶವಿದೆಯೆಂದು ತಿಳಿಸಿದರು. ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೆ.ಫಾ. ಮದಲೈ ಮುತ್ತು ಮಾತನಾಡಿ, 1839 ರ ಆ.19 ರಿಂದ ಮೊಟ್ಟ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಆರಂಭಗೊAಡಿತು. ಇಂತಹ ದಿನಾಚರಣೆಯ ಮೂಲಕ ಛಾಯಾಗ್ರಾಹಕರು ತಮ್ಮ ಛಾಯಾಚಿತ್ರಗಳ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ತರುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮಹತ್ತರವಾದ ಚಿಂತನೆ ಅಡಗಿದೆ. ಇಂದಿನ ದಿನಮಾನಗಳಲ್ಲಿ ಕೃತಕ ಬುದ್ಧಿ ಮತ್ತೆ(ಎಐ) ಎಲ್ಲಾ ವಿಚಾರಗಳಲ್ಲು ಹಾಸು ಹೊಕ್ಕಾಗುತ್ತಿದೆ. ಹೀಗಿದ್ದೂ ಮನುಷ್ಯನ ಕ್ರಿಯಾಶೀಲತೆಗೆ ಎಐ ಸರಿಸಾಟಿಯಾಗಲಾರದೆಂದು ತಿಳಿಸಿ, ಮೌಲ್ಯಯುತವಾದ ಚಿತ್ರ ಮತ್ತು ಬರಹಗಳ ಮೂಲಕ ಉತ್ತಮ ಸಮಾಜ ಕಟ್ಟುವ ಕಾರ್ಯ ಎಲ್ಲರಿಂದ ನಡೆಯುವಂತಾಗಲೆ0ದು ಹಾರೈಸಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಸಂಘದಿ0ದ ಮೂರನೇ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಆಚರಿಸಲಾಗಿತ್ತೆಂದು ತಿಳಿಸಿ, ಇಂದಿನ ದಿನಗಳಲ್ಲಿ ಪತ್ರಕರ್ತರೆಲ್ಲರು ಛಾಯಾಗ್ರಾಹಕರೆ ಆಗಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಯಾವುದೇ ಸುದ್ದಿ ಅದಕ್ಕೆ ಪೂರಕವಾದ ಛಾಯಾಚಿತ್ರದ ಮೂಲಕ ಮತ್ತಷ್ಟು ಮಹತ್ವವನ್ನು ಪಡೆದುಕೊಕೊಳ್ಳುತ್ತದೆ ಎಂದರು. ಸಭಾಧ್ಯಕ್ಷತಗೆ ವಹಿಸಿದ್ದ ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಧೋಷ್ ಪೂವಯ್ಯ ಮಾತನಾಡಿ, ಬದುಕಿನ ಸುಂದರ ಕ್ಷಣಗಳನ್ನು ಛಾಯಾಚಿತ್ರಗಳು ಸದಾ ಜೀವಂತವಾಗಿರಿಸುತ್ತದೆ ಎಂದು ಅಭಿಪ್ರಾಯಪಟ್ಟರು. :: ಪ್ರಶಸ್ತಿ ಪ್ರದಾನ :: ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರ ಪುತ್ರಿ ಡಾ.ಅನುಶ್ರೀ ಅವರ “ಹ್ಯಾಪಿಟೀತ್ ಡೆಂಟಲ್ ಕ್ಲಿನಿಕ್” ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳನ್ನು ಒಳಗೊಂಡ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಯನ್ನು ಶಕ್ತಿಯ ಉಪಸಂಪಾದಕ ಉಜ್ವಲ್ ರಂಜಿತ್ ಅವರಿಗೆ, ಸಮಾಜಸೇವಕ ಮಂಡಿಬೆಲೆ ರಾಜಣ್ಣ ಅವರು ತಮ್ಮ ಪೋಷಕರಾದ ಮಂಡಿಬೆಲೆ ದ್ಯಾವಮ್ಮ ಮತ್ತು ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ , ಆದಿವಾಸಿಗಳಿಗೆ ಬದುಕಿಗೆ ಸಂಬಂಧಿಸಿದ ಮಾನವೀಯ ವರದಿಯ ಪ್ರಶಸ್ತಿಗೆ ಶಕ್ತಿ ಪತ್ರಿಕೆಯ ಎನ್.ಕೆ.. ಸುಕುಮಾರ್ ಅವರಿಗೆ, , ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಅತ್ಯುತ್ತಮ ವೀಡಿಯೋಗ್ರಫಿಗಾಗಿ ನೀಡಲಾಗುವ ಪ್ರಶಸಿಯನ್ನು ಕೊಡಗು ಚಾನೆಲ್ನ ಕ್ಯಾಮೆರಾಮನ್ ಹನೀಫ್ ಅವರಿಗೆ, ಗುಂಡುಕುಟ್ಟಿ ಎಸ್ಟೇಟ್ ಮಾಲೀಕ ಜಿ.ಎಂ.ಮಹೇಂದ್ರ ಅವರು ತಮ್ಮ ತಂದೆ ಜಿ.ಎಂ.ಮೋಹನ್ ಹೆಸರಿನಲ್ಲಿ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ವಿನೋದ್ ಮೂಡಗದ್ದೆ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ತನ್ನ 40ನೇ ಛಾಯಾಚಿತ್ರ ಪ್ರದರ್ಶನ ನಡೆಸಿದ ಛಾಯಾಗ್ರಾಹಕ ವಿಶ್ವ ಗುಡ್ಡೆಮನೆ ಹಾಗೂ ಡಿಜಿಟಲ್ ಫೋಟೋ ಮೂಲಕ ವನ್ಯಜೀವಿಗಳ ವಿಶೇಷವಾಗಿ ಚಿಟ್ಟೆಗಳ ಪೋಟೋ ಪ್ರದಶಿ೯ಸಿದ ವಿರಾಜಪೇಟೆಯ ಛಾಯಾಗ್ರಾಹಕಿ ಹವ್ಯಾಸಿ ಮುಕ್ಕಾಟಿರ ಡೀನಾ ಪೂವಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. :: ಗೌರವಾರ್ಪಣೆ :: ಸಮಾರಂಭದಲ್ಲಿ ರೆ.ಫಾ. ಮದಲೈ ಮುತ್ತು, ಮಂಡಿಬೆಲೆ ರಾಜಣ್ಣ, ಅಬ್ದುಲ್ ಸಲಾಂ, ಎನ್.ಕೆ.ಸಲಾಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್, ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಉಪಸ್ಥಿತರಿದ್ದರು. ವಿರಾಜಪೇಟೆ ತಾಲೂಕು ಸಂಘದ ಕಾರ್ಯದರ್ಶಿ ಉಷಾಪ್ರೀತಮ್ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಎಚ್.ಟಿ. ಸ್ವಾಗತಿಸಿದರು. ಸನ್ಮಾನಿತರನ್ನು ಅನೂಷಾ, ಟೋಮಿ ಥೋಮಸ್, ರೆಹಮಾನ್, ನವೀನ್ ಚಿಣ್ಣಪ್ಪ, ಶಶಿ ಮಗ್ಗುಲ ಕೆ.ಎಸ್.ಅನಿಲ್ ಕುಮಾರ್ ಪರಿಚಯಿಸಿದರು. ಉಪನ್ಯಾಸಕ ಶಾಂತಿ ಭೂಷಣ್ ವಂದಿಸಿದರು.ಕುಸಾಲನಗರ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಪೊನ್ನಂಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ರಾಜ್ ಕುಶಾಲಪ್ಪ, ಸೋಮವಾರಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಹರೀಶ್ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಬಾಗಗಳಿಂದ ಪತ್ರಕತ೯ರು, ಛಾಯಾಗ್ರಹಕರು ಹಾಜರಿದ್ದರು.









