
ಮಡಿಕೇರಿ NEWS DESK ಆ.23 : ಹಿರಿಯ ನಾಗರಿಕರು ಸಮಾಜಕ್ಕೆ ನೀಡಿರುವ ಅಮೂಲ್ಯ ಸೇವೆ, ಅನುಭವ ಹಾಗೂ ಕೊಡುಗೆಗಳನ್ನು ಗೌರವಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮ ನಾಪೋಕ್ಲುವಿನಲ್ಲಿ ನಡೆಯಿತು. ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಕಲ್ಲೇಂಗಡ ದೇವಯ್ಯ, ಪಾಡಿಯಮಂಡ ಎಂ.ಮುತ್ತಮ್ಮಯ್ಯ ಹಾಗೂ ಟಿ.ಎ.ಆನಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳು ತಮ್ಮ ಜೀವನಾನುಭವ ಹಾಗೂ ಅಮೂಲ್ಯ ವಿಚಾರಗಳನ್ನು ವಿವರಿಸಿದರು. ರೋಟರಿ ಸಂಸ್ಥೆಯ ಪದಾಧಿಕಾರಿ ರೊ.ಕುಲ್ಲೇಟಿರ ಅಜಿತ್ ನಾಣಯ್ಯ ಅವರು ಸ್ಫೂರ್ತಿದಾಯಕ ಸಂದೇಶ ನೀಡಿದರು. ಎಕ್ಸೆಲ್ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಚೋಕಿರ ತಿಮ್ಮಯ್ಯ ಅವರು ಮಾತನಾಡಿ ಹಿರಿಯ ನಾಗರಿಕರನ್ನು ಗೌರವಿಸುವ ಇಂತಹ ಕಾರ್ಯಕ್ರಮದ ಮಹತ್ವವನ್ನು ಶ್ಲಾಘಿಸಿದರು. 8ನೇ ತರಗತಿಯ ಸಫಾ ಫಾತಿಮಾ ಹಿರಿಯ ನಾಗರಿಕರ ಮಹತ್ವದ ಕುರಿತು ಮಾತನಾಡಿದರೆ, 8ನೇ ತರಗತಿಯ ಮಾನಸ ಬಿ.ವಿ. ತಮ್ಮ ಅಭಿಪ್ರಾಯ ಹಂಚಿಕೊ0ಡರು. ಪ್ರಿಯಾಂಕಾ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಟ್ಟಂಜೆಟ್ಟಿರ ಮಾದಪ್ಪ, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ನಿಶಾಂತ್, ಕಾರ್ಯದರ್ಶಿ ಹಾಗೂ ಸಂಯೋಜಕಿ ಕೆಲ್ಲೇಟಿರ ಸಂಧ್ಯಾ ದೇವಯ್ಯ ಸೇರಿದಂತೆ ರೋಟರಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಭಾಗವಹಿಸಿದ್ದರು. 3ನೇ ತರಗತಿಯ ದೇವಸ್ಮಿತಾ ಪ್ರಾರ್ಥಿಸಿದರು, 9ನೇ ತರಗತಿಯ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ನಿಶಾಂತ್ ಸ್ವಾಗತಿಸಿದರು, 9ನೇ ತರಗತಿಯ ಅನಮ್ ಫಾತಿಮಾ ವಂದಿಸಿದರು.









