
ಮಡಿಕೇರಿ, ಆ.29 NEWS DESK : ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟು, ವ್ಯಾಕರಣದ ಶಿಸ್ತನ್ನು ರೂಢಿಸಿದವರು ಭಾಷಾ ವಿಜ್ಞಾನಿ ಡಾ. ಕೋಡಿ ಕುಶಾಲಪ್ಪ ಗೌಡರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ, ಸುಳ್ಯ ಹಾಗೂ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು, ಸುಳ್ಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಕೋಡಿ ಕುಶಾಲಪ್ಪ ಗೌಡರ ನೆಂಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರೆಭಾಷೆಯನ್ನು ಕೇವಲ ಆಡುಭಾಷೆ ಎಂದು ಪರಿಗಣಿಸದೆ, ಅದರ ಭಾಷಿಕ ಸ್ವರೂಪ ಹಾಗೂ ವೈಶಿಷ್ಟ್ಯಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕೆಂಬ ದೃಷ್ಟಿಕೋನವನ್ನು ಬೆಳೆಸಿದವರಲ್ಲಿ ಕೋಡಿ ಕುಶಾಲಪ್ಪ ಗೌಡರು ಪ್ರಮುಖರು. ಕನ್ನಡದ ಸಹೋದರ ಭಾಷೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಅವರು ಹೇಳಿದರು. ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮಾತನಾಡಿ, ಗೌಡ ವಿದ್ಯಾ ಸಂಘವು ಹಲವಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದು, ಕೋಡಿ ಕುಶಾಲಪ್ಪ ಗೌಡರು ಅಂತಹ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದರು ಎಂದು ತಿಳಿಸಿದರು. ಹಿಂದಿನ ಕಾಲದಲ್ಲಿ ಅರೆಭಾಷಿಕರ ಬದುಕು, ಶಿಸ್ತು, ಸಾಮಾಜಿಕ ಸ್ಥಿತಿಗತಿ ಹಾಗೂ ಒಗ್ಗಟ್ಟನ್ನು ಮೆಲುಕು ಹಾಕಿದ ಅವರು, ಸಂಸ್ಕೃತಿ ಮತ್ತು ಸಂಸ್ಕಾರವು ಉತ್ತಮ ಸಹಜೀವನ, ಸಹಬಾಳ್ವೆ ಹಾಗೂ ಅಭಿವೃದ್ಧಿಯ ಮೂಲವಾಗಿದೆ ಎಂದು ವಿವರಿಸಿದರು. ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿಯು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಎಲ್ಲ ಭಾಷೆಗಳಲ್ಲಿಯೂ ಮಾತೃಭಾಷೆಯೇ ಶ್ರೇಷ್ಠ. ಸಂಸ್ಕಾರ ಮತ್ತು ಸಂಸ್ಕೃತಿಯೇ ನಮ್ಮ ತಂದೆ-ತಾಯಿ ಇದ್ದಂತೆ. ಅವುಗಳನ್ನು ತೊರೆದು ನಾವು ಮುಂದೆ ಸಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾರದಾ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಹಾಗೂ ಕಾಲೇಜಿನ ಪ್ರಾಂಶುಪಾಲೆ ಸ್ವರ್ಣಕಲಾ ಅವರು ಕೋಡಿ ಕುಶಾಲಪ್ಪ ಗೌಡರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿ, ಅದರ ಮಹತ್ವವನ್ನು ವಿವರಿಸಿದರು. ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೋಡಿ ಕುಶಾಲಪ್ಪ ಗೌಡರ ಶಿಷ್ಯ ಹಾಗೂ ಸಾಹಿತಿ ಸಂಜೀವ ಕುದ್ಪಾಜೆ ಅವರು ತಮ್ಮ ಗುರುಗಳೊಂದಿಗಿನ ಒಡನಾಟವನ್ನು ಸ್ಮರಿಸಿದರು. ಕೋಡಿಯವರ ಸರಳತೆ, ಔದಾರ್ಯ ಹಾಗೂ ಸ್ನೇಹಪರ ವ್ಯಕ್ತಿತ್ವದ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಘನತೆಯ ವ್ಯಕ್ತಿತ್ವ ಹೊಂದಿದ್ದ ಕೋಡಿಯವರು ಎಲ್ಲರನ್ನೂ ಗೌರವಿಸುತ್ತಿದ್ದರು ಎಂದು ತಿಳಿಸಿದರು. ಭಾಷಾ ವಿಜ್ಞಾನಿಯಾಗಿದ್ದ ಕೋಡಿ ಕುಶಾಲಪ್ಪ ಗೌಡರು ಅರೆಭಾಷೆಯ ಕುರಿತು ಆಂಗ್ಲ ಭಾಷೆಯಲ್ಲಿ ಬರೆದು, ಈ ಭಾಷೆಯನ್ನು ವಿಶ್ವವ್ಯಾಪಿಯಾಗಿ ಪರಿಚಯಿಸಿದರು. ಕೋಡಿಯವರು ಭಾಷಾ ವಿದ್ವಾಂಸರಾಗಿದ್ದರೂ ಅವರೊಳಗಿದ್ದ ಹಾಸ್ಯಪ್ರಜ್ಞೆ, ವಿನೋದ ಮನೋಭಾವ ಹಾಗೂ ಲಾಲಿತ್ಯದ ಕುರಿತು ಸಂಜೀವ ಕುದ್ಪಾಜೆ ಅವರು ಮನೋಜ್ಞವಾಗಿ ವಿವರಿಸಿದರು. ‘ಅರೆಭಾಷೆ–ಕೋಡಿ ಕುಶಾಲಪ್ಪ ಗೌಡರ ಕೊಡುಗೆ’ ವಿಷಯದ ಕುರಿತು ಮಾತನಾಡಿದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಡಾ. ಎನ್.ವಿ. ಕರುಣಾಕರ ಅವರು, ಕೋಡಿ ಕುಶಾಲಪ್ಪ ಗೌಡರು ಪಂಪಭಾರತವನ್ನು ಆಧರಿಸಿ ಅರೆಭಾಷೆಯಲ್ಲಿ ಮಹಾಭಾರತ ಕೃತಿ ರಚಿಸಿದರೂ, ಅದರಲ್ಲಿ ತಮ್ಮದೇ ಆದ ಸ್ವಂತಿಕೆಯನ್ನು ತುಂಬಿದ್ದರು ಎಂದು ಕೊಂಡಾಡಿದರು. ತಮ್ಮ ಅರೆಭಾಷಾ ಕೃತಿಯಲ್ಲಿ ಅರೆಭಾಷಿಕರ ಜನಜೀವನದ ಹೂರಣವನ್ನು ತುಂಬಿಸಿ, ಅದನ್ನು ಮತ್ತಷ್ಟು ಆಪ್ತವಾಗಿಸಿದವರು ಕೋಡಿಯವರು ಎಂದು ಅವರು ಹೇಳಿದರು. ಇತರರ ಕೆಲಸದಲ್ಲಿ ತಪ್ಪುಗಳು ನುಸುಳಿದ್ದರೆ ಅದನ್ನು ಟೀಕಿಸುವ ಬದಲಿಗೆ, ಅದಕ್ಕಿಂತ ಉತ್ತಮವಾದ ಹಾಗೂ ಸರಿಯಾದ ಕೆಲಸವನ್ನು ನಾವು ಮಾಡಿ ತೋರಬೇಕು ಎಂಬುದು ಕೋಡಿಯವರ ಧೋರಣೆಯಾಗಿತ್ತು ಎಂದು ಅವರನ್ನು ಸಮೀಪದಿಂದ ಕಂಡು ಅರಿತಿದ್ದ ಡಾ. ಕರುಣಾಕರ ತಿಳಿಸಿದರು. ಅರೆಭಾಷೆ ವ್ಯಾಕರಣದಲ್ಲಿ ಭಾಷೆಯ ಉತ್ಪತ್ತಿ ಹಾಗೂ ಧ್ವನಿಯ ಸ್ವರೂಪವನ್ನು ವ್ಯಾಖ್ಯಾನಿಸಿ, ಉದಾಹರಣೆಗಳ ಸಹಿತ ಅವರು ಸ್ಪಷ್ಟಪಡಿಸಿದರು. ಕೋಡಿಯವರು ಹಾಕಿಕೊಟ್ಟಿರುವ ನೆಲೆಗಟ್ಟನ್ನು ಮೀರಿ ಹೋಗಲು ಸಾಧ್ಯವಿಲ್ಲ. ಅದನ್ನು ಆಧಾರವಾಗಿಟ್ಟುಕೊಂಡೇ ನಾವು ಮುಂದೆ ಸಾಗಬೇಕಿದೆ ಎಂದು ಹೇಳುವ ಮೂಲಕ ಅರೆಭಾಷೆಗೆ ಕೋಡಿಯವರು ನೀಡಿದ ಕೊಡುಗೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಗೋಪಾಲ ಪೆರಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯೆ ಚಂದ್ರಾವತಿ ಬಡ್ಡಡ್ಕ ವಂದಿಸಿದರು. ಸದಸ್ಯರಾದ ಚಂದ್ರಶೇಖರ ಪೇರಾಲು ಹಾಗೂ ಡಾ. ಎನ್.ಎ. ಜ್ಞಾನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.









