ಮಡಿಕೇರಿ, NEWS DESK ಆ. 29: ಕೊಡಗು ವಿದ್ಯಾಲಯದ ಶ್ರೀ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ–2026 ಅನ್ನು ಆಯೋಜಿಸಲಾಯಿತು.
ಭರತನಾಟ್ಯ ಕಲಾವಿದೆ ಹಾಗೂ ಸಾಂಸ್ಕೃತಿಕ ರಾಯಭಾರಿ ಮುಕ್ಕಾಟಿರ ಶಿಲ್ಪಾ ನಂಜಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಬ್ರಹ್ಮಗಿರಿ ಸಹೋದಯ ಸಿ.ಬಿ.ಎಸ್.ಇ. ಶಾಲೆಗಳ ವ್ಯಾಪ್ತಿಯ 7 ಶಾಲೆಗಳ 12 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಹಾಡು ಮತ್ತು ನೃತ್ಯ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಅಂಕುರ್ ಪಬ್ಲಿಕ್ ಶಾಲೆ, ನಾಪೋಕ್ಲು; ಎಸ್.ಎಂ.ಎಸ್. ಶಾಲೆ, ವಿರಾಜಪೇಟೆ; ಕೆ.ವಿ.ಜಿ. ಶಾಲೆ, ಸುಳ್ಯ; ಸೇಯಿಂಟ್ ಅನ್ಸ್ ಶಾಲೆ, ಸಿದ್ದಾಪುರ; ಎ.ಎಲ್.ಜಿ. ಕ್ರೇಸೆಂಟ್ ಶಾಲೆ, ಮಡಿಕೇರಿ; ನ್ಯಾಷನಲ್ ಅಕಾಡೆಮಿ, ಗೋಣಿಕೊಪ್ಪ ಹಾಗೂ ಕೊಡಗು ವಿದ್ಯಾಲಯ, ಮಡಿಕೇರಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳ ಮನಮೋಹಕ ನೃತ್ಯ ಹಾಗೂ ಸುಮಧುರ ಗಾಯನ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಮುಖ್ಯ ಅತಿಥಿ ಮುಕ್ಕಾಟಿರ ಶಿಲ್ಪಾ ನಂಜಪ್ಪ ಮಾತನಾಡಿ, “ಸ್ಪರ್ಧೆಯಲ್ಲಿ ಗೆಲುವೊಂದೇ ಮುಖ್ಯವಲ್ಲ. ಸಾಕಷ್ಟು ಸೋಲುಗಳನ್ನು ತಾನೂ ಅನುಭವಿಸಿದ ನಂತರವೇ ಉನ್ನತ ಮಟ್ಟಕ್ಕೇರಿದ್ದೇನೆ. ನೀವು ಉತ್ತಮವಾಗಿ ಪರಿಶ್ರಮಪಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.
ಬಹುಮಾನ ದೊರಕದ ವಿದ್ಯಾರ್ಥಿಗಳು ನಿರಾಶರಾಗದೆ ನಿರಂತರ ಪರಿಶ್ರಮದಿಂದ ಮುನ್ನಡೆಯುವಂತೆ ಅವರು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ರಮ್ಯಶ್ರೀ ಡಿ.ಆರ್. ಅತಿಥಿ ಪರಿಚಯ ನೆರವೇರಿಸಿ, ಬಿಂದು ಸ್ವಾಗತಿಸಿ, ಕೃಪಾ ಮುದ್ದಪ್ಪ, ಶರತ್ ನಿರೂಪಿಸಿದರು.
ಸ್ಪರ್ಧೆಯ ತೀರ್ಪುಗಾರರ ಪರಿಚಯವನ್ನು ಸೌಂದರ್ಯ ಹಾಗೂ ರಾಜೇಶ್ವರ್ ನೆರವೇರಿಸಿದರು.
ವಿಜೇತ ತಂಡಗಳು-
ನೃತ್ಯ ವಿಭಾಗದಲ್ಲಿ ಕೊಡಗು ವಿದ್ಯಾಲಯ ಪ್ರಥಮ, ಎಸ್.ಎಂ.ಎಸ್. ಶಾಲೆ ದ್ವಿತೀಯ ಹಾಗೂ ಕೆ.ವಿ.ಜಿ. ಶಾಲೆ, ಸುಳ್ಯ ತೃತೀಯ ಸ್ಥಾನ ಪಡೆದುಕೊಂಡವು.
ಹಾಡಿನ ಸ್ಪರ್ಧೆಯಲ್ಲಿ ಕೆ.ವಿ.ಜಿ. ಶಾಲೆ, ಸುಳ್ಯ ಪ್ರಥಮ, ಎಸ್.ಎಂ.ಎಸ್. ಶಾಲೆ ದ್ವಿತೀಯ ಹಾಗೂ ಕೊಡಗು ವಿದ್ಯಾಲಯ ತೃತೀಯ ಸ್ಥಾನ ಗಳಿಸಿದವು.
ಹಾಡಿನ ಸ್ಪರ್ಧೆಗೆ ಡಿ .ಎಂ. ಮೇಘಾ ಸುಜಯ್, ಪೂರ್ಣಿಮಾ ವಿನಯ್ ಅವರು ತೀರ್ಪುಗಾರರಾಗಿ, ನೃತ್ಯ ಸ್ಪರ್ಧೆಗೆ ಸುಧಾ ಪಿ.ಡಿ., ಪ್ರಗತಿ ಕೆದನಾ ಹಾಗೂ ಕೌಶಿಕ್ ಪಿ.ಎಲ್. ತೀರ್ಪುಗಾರರಾಗಿದ್ದರು.







