
ವಿರಾಜಪೇಟೆ ಆ.31 NEWS DESK : ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮವೂ ಜನಮುಖಿಯಾಗಿದ್ದು, ಸಾಮುದಾಯಿಕ ಕಳಕಳಿಯಿಂದ ಕೂಡಿರುತ್ತದೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನೋತ್ಸವದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಸೀರತ್ ಅಭಿಯಾನ’ದ ಅಂಗವಾಗಿ ವಿರಾಜಪೇಟೆಯ ಶ್ರೀ ವಿರಕ್ತ ದೊಡ್ಡಮಠದಲ್ಲಿ ಆಯೋಜಿಸಲಾಗಿದ್ದ ಎರಡು ಪ್ರಮುಖ ಸಾಹಿತ್ಯ ಕೃತಿಗಳ ಬಿಡುಗಡೆ ಹಾಗೂ ಧಾರ್ಮಿಕ ಸೌಹಾರ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಹಿತ್ಯದ ಮೂಲಕ ಪ್ರವಾದಿ ಮುಹಮ್ಮದ್ (ಸ) ಅವರ ಉನ್ನತ ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳನ್ನು ಜನಮಾನಸಕ್ಕೆ ತಲುಪಿಸುವುದರ ಜೊತೆಗೆ, ಅವು ಜನರ ನೆನಪಿನಲ್ಲಿ ಸದಾ ಉಳಿಯುವಂತೆ ಮಾಡುವ ಉದ್ದೇಶದಿಂದ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು. ಇತ್ತೀಚೆಗಷ್ಟೇ ನಿರಾಶ್ರಿತರಿಗೆ ಮನೆಗಳನ್ನು ಹಸ್ತಾಂತರಿಸುವಂತಹ ಉತ್ತಮ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ನಾವು ಕಂಡಿದ್ದೇವೆ. ಶಾಂತಿ ಪ್ರಕಾಶನ ಸಂಸ್ಥೆಯು ಕಳೆದ ಹಲವು ದಶಕಗಳಿಂದ ಕನ್ನಡ ಭಾಷೆಯಲ್ಲಿ ಪ್ರವಾದಿಯವರ ಉನ್ನತ ಚಿಂತನೆಗಳನ್ನು ನಿರಂತರವಾಗಿ ಪ್ರಕಟಿಸುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿದೆ. ಜನರ ಮನಸ್ಸಿನಲ್ಲಿರುವ ಹಲವು ಸಂಶಯಗಳು ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಇಂತಹ ಸಾಹಿತ್ಯಿಕ ಪ್ರಯತ್ನಗಳು ಸಹಕಾರಿಯಾಗಿವೆ ಎಂದು ಹೇಳಿದರು. ಬಿಡುಗಡೆಗೊಂಡ ಪುಸ್ತಕಗಳಲ್ಲಿ ಪ್ರವಾದಿಯವರ ಮೌಲ್ಯಯುತ ಜೀವನ ಸಂದೇಶಗಳು ಹಾಗೂ ಚಿಂತನೆಗಳನ್ನು ಅತ್ಯಂತ ಸರಳವಾಗಿ ನಿರೂಪಿಸಲಾಗಿದೆ. ‘ಸತ್ಕಾರ್ಯವನ್ನು ಕೇವಲ ಆರಂಭಿಸಿ ಮಧ್ಯದಲ್ಲೇ ಬಿಟ್ಟುಬಿಡುವುದಕ್ಕಿಂತ ಅದನ್ನು ಪೂರ್ಣಗೊಳಿಸುವುದು ಉತ್ತಮ’ ಎಂಬ ಪ್ರವಾದಿಯವರ ಮೌಲ್ಯಯುತ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶತಮಾನದ ಇತಿಹಾಸ ಹೊಂದಿರುವ ಶ್ರೀ ವಿರಕ್ತ ಮಠದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ಇಂತಹ ಉತ್ತಮ ಕಾರ್ಯಗಳಿಗೆ ಶ್ರೀಮಠವು ಸದಾ ಬೆಂಬಲವಾಗಿ ಇರಲಿದೆ ಎಂದು ಸ್ವಾಮೀಜಿ ಹೇಳಿದರು. ಉಪನ್ಯಾಸಕ ಅರ್ಜುನ್ ಮೌರ್ಯ ಮಾತನಾಡಿ, ಯಾವುದೇ ವ್ಯಕ್ತಿಯನ್ನು ಕೇವಲ ಬಾಹ್ಯವಾಗಿ ವೈಭವೀಕರಿಸದೆ, ಅವರೊಳಗಿರುವ ದೈವೀಕ ಗುಣಗಳು ಹಾಗೂ ಅಂತರಂಗವನ್ನು ಅರಿಯಲು ಪುಸ್ತಕಗಳ ಓದು ಸಹಕಾರಿಯಾಗಿದೆ. ಜೀವನ ಕ್ರಮವನ್ನು ತಿದ್ದುವ ಉತ್ತಮ ಸಾತ್ವಿಕ ವಿಚಾರಗಳು ಮತ್ತು ಮೌಲ್ಯಗಳು ಎಲ್ಲಿಂದ ಬಂದರೂ ಅವುಗಳನ್ನು ಮುಕ್ತವಾಗಿ ಸ್ವೀಕರಿಸುವ ಅಗತ್ಯ ಇಂದಿನ ಪ್ರಸ್ತುತ ಸಮಾಜದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಗೇಶ್ ಮಾಸ್ಟರ್ ಬರೆದ ‘ಮಾನವ ಮನಸ್ಸಿನ ಕೃಷಿಕ, ಮನದೊಡೆಯ ಪ್ರವಾದಿ ಮುಹಮ್ಮದ್’ ಹಾಗೂ ಅಬ್ದುಲ್ ಸಲಾಂ ಪುತ್ತಿಗೆ ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಎಂಬ ಎರಡು ಕೃತಿಗಳನ್ನು ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್, ಪ್ರಮುಖರಾದ ಕೆ.ಟಿ. ಬಶೀರ್, ಗೋಣಿಕೊಪ್ಪ ಘಟಕದ ಅಧ್ಯಕ್ಷ ತನ್ವೀರ್ ಅಹಮದ್, ಮೌಲಾನ ಸಗೀರ್ ಅಝಾರಿ, ಎ.ಎ. ಉಮ್ಮರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.









