ಕುಶಾಲನಗರ, NEWS DESK ಸೆ. 18: ಜನಪದ ಸಾಹಿತ್ಯ ಎಲ್ಲಾ ಸಾಹಿತ್ಯದ ತಾಯಿಬೇರು. ಸಮಾಜದಲ್ಲಿ ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯದಲ್ಲಿ ನಿಜವಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳು ಅಡಕವಾಗಿವೆ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ, ಸಾಹಿತಿಯೂ ಆದ ಡಾ. ಜೆ. ಸೋಮಣ್ಣ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.), ಕುಶಾಲನಗರ ತಾಲೂಕು ಕ.ಸಾ.ಪ. ಘಟಕ ಹಾಗೂ ಹೆಬ್ಬಾಲೆ ವಲಯದ ಕ.ಸಾ.ಪ. ಘಟಕದ ವತಿಯಿಂದ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಕನ್ನಡ ಭಾಷಾ ಸಂಘದ ಆಶ್ರಯದಲ್ಲಿ ‘ಗ್ರಾಮೀಣ ಜನಪದ ಸೊಗಡು’ ಎಂಬ ವಿಷಯದ ಕುರಿತು ಪಟೇಲ್ ಸಣ್ಣಯ್ಯ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ಜೆ. ಸೋಮಣ್ಣ ಅವರು ಜನಪದ ಸಾಹಿತ್ಯ, ಧಾರ್ಮಿಕ ಆಚರಣೆಗಳು, ಸಂಸ್ಕೃತಿ ಹಾಗೂ ಪರಿಸರದ ಕುರಿತು ಅವಲೋಕನ ನಡೆಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಜಾನಪದ ಕಲೆ ಹಾಗೂ ಸಾಹಿತ್ಯವನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳ ಕುರಿತು ಸವಿಸ್ತಾರವಾಗಿ ವಿವರಿಸಿದ ಅವರು, ಕನ್ನಡ ಜನಪದ ಸಾಹಿತ್ಯವು ಗ್ರಾಮೀಣ ಜನರ ಜೀವನದ ಸಹಜ ಅನುಭವಗಳು, ಗ್ರಾಮೀಣ ಸೊಗಡು, ಕಲೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಶ್ರೀಮಂತ ನೆಲದ ಸೊಗಡಾಗಿದೆ ಎಂದು ಬಣ್ಣಿಸಿದರು.
ಜನಪದದಲ್ಲಿ ಗ್ರಾಮೀಣ ಕೃಷಿಕರ ಶ್ರಮಿಕ ಸಂಸ್ಕೃತಿಯನ್ನು ಹಾಗೂ ಸ್ತ್ರೀಯರ ಸಂಭ್ರಮದ ಆಚರಣೆಗಳನ್ನು ಪ್ರತಿನಿಧಿಸುವ ಕಲೆ ಮತ್ತು ವಿಶಿಷ್ಟ ಹಾಡುಗಳು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಆಡುಭಾಷೆಯಲ್ಲಿನ ಪದಗಳ ಜೋಡಣೆಯನ್ನಾಧರಿಸಿ ತಮ್ಮ ದೈನಂದಿನ ಬದುಕಿನ ಕಷ್ಟ, ಸುಖ, ಸಂಬಂಧ ಮತ್ತು ಅನುಭವಗಳನ್ನೇ ಜನಪದರು ಪದವಾಗಿಸಿದರು. ಅವರು ಅಕ್ಷರ ಜ್ಞಾನ ಹೊಂದಿರದಿದ್ದರೂ ಸಾರ್ವಕಾಲಿಕವಾದ ಪದಗಳನ್ನು ಕಟ್ಟಿ ಹಾಡಿದವರು ಎಂದು ಡಾ. ಸೋಮಣ್ಣ ಹೇಳಿದರು.
ಪ್ರಕೃತಿಯ ಮಡಿಲಿನಲ್ಲಿರುವ ಹಸಿರು ಪರಿಸರದಲ್ಲಿನ ಈ ಶಾಲಾ ವಾತಾವರಣವು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದ ಅವರು, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದವು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಉತ್ತಮ ಶಾಲಾ ವನ ಹಾಗೂ ಶಾಲಾ ವಾತಾವರಣ ನಿರ್ಮಿಸಲು ಕಾರಣರಾದವರನ್ನು ಅಭಿನಂದಿಸಿದರು.
ಸಾಹಿತ್ಯ ದತ್ತಿ ಕಾರ್ಯಕ್ರಮಗಳ ಮಹತ್ವ ಹಾಗೂ ಗ್ರಾಮೀಣ ಜನಪದ ಕಲೆಗಳ ಸಂರಕ್ಷಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕನ್ನಡ ಸಾಹಿತ್ಯದ ಬೆಳವಣಿಗೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಜಾನಪದ ಕೃಷಿ ಜೀವನವೇ ನಿಜವಾದ ಗ್ರಾಮೀಣ ಜನಪದ ಸಂಸ್ಕೃತಿಯ ಪ್ರತೀಕವಾಗಿದೆ. ಇಂದಿನ ಯುವಜನಾಂಗಕ್ಕೆ ಜನಪದ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಜನಪದ ಸಾಹಿತ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಜನಪದ ಸಂಸ್ಕೃತಿಯ ರಕ್ಷಣೆಗೆ ಇಂತಹ ದತ್ತಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಸಾವಿರಾರು ವರ್ಷಗಳಿಂದ ಕನ್ನಡ ನಾಡಿನ ನೆಲದ ಜನಪದ ಸೊಗಡು ಸಾಹಿತ್ಯಕ್ಕೆ ಪ್ರೇರಣೆಯಾಗಿದೆ. ಕನ್ನಡ ಜನಪದ ಸಾಹಿತ್ಯವು ಗ್ರಾಮೀಣ ಜನರ ಜೀವನದ ಸಹಜ ಅನುಭವಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಶ್ರೀಮಂತ ನೆಲದ ಸೊಗಡಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯೋಪಾಧ್ಯಾಯ ಬಿ.ಆರ್. ಸತ್ಯನಾರಾಯಣ ಮಾತನಾಡಿ, ಇಂತಹ ಸಾಹಿತ್ಯ ಕಾರ್ಯಕ್ರಮಗಳು ಗ್ರಾಮೀಣ ಶ್ರೀಮಂತ ಜನಪದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿಗಳು ಜನಪದ ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ಬಹುಮಾನ ವಿತರಿಸಿ ಮಾತನಾಡಿದ ಕುಶಾಲನಗರ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಎಚ್.ಬಿ. ಚಂದ್ರಪ್ಪ, ಜನಪದ ಸಂಸ್ಕೃತಿಯ ಪ್ರತೀಕವಾದ ಈ ಶಾಲಾ ಪರಿಸರವು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಗೋಷ್ಠಿಗಳ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಹಿತ್ಯಾಭಿರುಚಿ ಬೆಳೆಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ತೊರೆನೂರು ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರಂಗ ಮಾತನಾಡಿ, ಇಂತಹ ದತ್ತಿ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶದ ಜನರಲ್ಲಿ ಜನಪದ ಸಾಹಿತ್ಯದ ಬಗ್ಗೆ ಪರಿಚಯ ಮೂಡಿಸಲು ಸಹಕಾರಿಯಾಗಿವೆ. ಸಾಹಿತ್ಯದ ಬೆಳವಣಿಗೆ ಹಾಗೂ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಇಂತಹ ದತ್ತಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಟಿ.ಎಂ. ಮೋಹನ್ ರಾಜ್ ಮಾತನಾಡಿ, ಬಯಲುಸೀಮೆಯ ಜನಪದ ಸಂಸ್ಕೃತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಸಾಹಿತ್ಯ ಗೋಷ್ಠಿಗಳು ಸಹಕಾರಿಯಾಗಿವೆ ಎಂದರು.
ಕನ್ನಡ ಭಾಷಾ ಶಿಕ್ಷಕ ಟಿ.ಬಿ. ಮಂಜುನಾಥ್ ಮಾತನಾಡಿ, ದತ್ತಿ ಉಪನ್ಯಾಸಗಳಿಂದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದರು.
ವಿರಾಜಪೇಟೆ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಮಧೋಶ್ ಪೂವಯ್ಯ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಎಂ. ರಘು, ಕುಶಾಲನಗರ ತಾಲೂಕು ಕೋಶಾಧಿಕಾರಿ ಕೆ.ವಿ. ಉಮೇಶ್, ಹೆಬ್ಬಾಲೆ ವಲಯದ ಕ.ಸಾ.ಪ. ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಎಚ್.ಎನ್. ಸುಬ್ರಮಣ್ಯ, ಜಾನಪದ ಕಲಾವಿದ ಭರಮಣ್ಣ ಟಿ. ಬೇಟಗೇರಿ, ಸಿ.ಆರ್.ಪಿ. ಎಂ.ಕೆ. ದಯಾನಂದ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಟಿ.ಎಚ್. ಗಣೇಶ್, ಸದಸ್ಯೆ ಗೌರಮ್ಮ ಮಂಜುನಾಥ್, ಕನ್ನಡ ಭಾಷಾ ಶಿಕ್ಷಕ ಟಿ.ಬಿ. ಮಂಜುನಾಥ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕ ಜಿ. ಶ್ರೀಹರ್ಷ ಸ್ವಾಗತಿಸಿದರು. ಶಿಕ್ಷಕ ಟಿ.ಬಿ. ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ಜಾನಪದ ಕಲಾವಿದ ಭರಮಣ್ಣ ಟಿ. ಬೇಟಗೇರಿ ಜಾನಪದ ಗೀತೆ ಹಾಡಿ ಪ್ರೇಕ್ಷಕರ ಗಮನ ಸೆಳೆದರು.
ಸನ್ಮಾನ: ದತ್ತಿ ಉಪನ್ಯಾಸ ನೀಡಿದ ಸಾಹಿತಿ ಡಾ. ಜೆ. ಸೋಮಣ್ಣ ಅವರನ್ನು ಕ.ಸಾ.ಪ. ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನ ವಿತರಣೆ: ದತ್ತಿ ಉಪನ್ಯಾಸದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.







