ಕುಶಾಲನಗರ ಜ.25 : ದೇಶದಲ್ಲಿ ರಾಜ್ಯ ಪ್ರಾಂತ್ಯಗಳ ವಿಂಗಡಣೆಯಾಗಿದ್ದು, ನಿಯಮಾನುಸಾರ, ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ, ಪ್ರತಿಯೊಬ್ಬ ಪ್ರಜೆ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಟಿ.ಎಂ ಪ್ರಕಾಶ್ ತಿಳಿಸಿದರು.
ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನಾತ್ಮಕವಾಗಿ ದೇಶದ ಅಭಿವೃದ್ಧಿ ಮತ್ತು ಬದಲಾವಣೆ ಸಾಧ್ಯ, ಪ್ರತಿಯೊಬ್ಬರು ಸಂವಿಧಾನದ ಅರಿವು ಮೂಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಡಿಕೇರಿ ವಿಧಾನಸಭಾ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಮಾತನಾಡಿ, ಪ್ರತಿಯೊಬ್ಬರು ಶಾಸನಬದ್ಧವಾಗಿ, ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು. ಪ್ರಜ್ಞಾವಂತ ಸರ್ಕಾರ ನಿರ್ಮಾಣ ಮಾಡುವ ಜವಾಬ್ದಾರಿ ಪ್ರಜೆಗಳ ಮೇಲಿದೆ ಎಂದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವಂತಾಗಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ದಿನದ ಮಹತ್ವದ ಬಗ್ಗೆ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಟಿ.ಶ್ರೀಕಾಂತ್, ಸಂವಿಧಾನದ ಪರಿಕಲ್ಪನೆ, ಹಕ್ಕು ಮತ್ತಿತರ ವಿಷಯಗಳ ಬಗ್ಗೆ ವಿವರ ಒದಗಿಸಿದರು. ಸಂವಿಧಾನದ ಕಟ್ಟಲೆಗಳ ನಡುವೆ ವ್ಯಕ್ತಿಯಜವಾಬ್ದಾರಿ, ಹಕ್ಕು ಚಲಾವಣೆ ಮತ್ತಿತರ ವ್ಯವಸ್ಥೆಗಳ ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಾಜಿ ಸೈನಿಕರಾದ ಕೆ.ಸಿ ಸೋಮಣ್ಣ, ಕ್ರೀಡಾಪಟು ಎಸ್. ಪುನೀತ್, ಪೌರಕಾರ್ಮಿಕರಾದ ಮಹದೇವ್, ಹಿರಿಯ ಪತ್ರಕರ್ತರಾದ ಎಂ.ಎನ್.ಚಂದ್ರಮೋಹನ್, ಗ್ರಾಮ ಒನ್ ನಿರ್ವಾಹಕಾರದ ಪಿ.ಕೆ ಧರ್ಮರಾಜ್, ಹೆಚ್.ಪಿ ಶ್ರೀಕಾಂತ್, ಕರ್ನಾಟಕರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಬಿ.ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಯೋಜನಾ ಪ್ರಾಧಿಕಾರದಅಧ್ಯಕ್ಷ ಎಂ.ಎಂ.ಚರಣ್, ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪನಾಯಕ್, ಪೊಲೀಸ್ ಉಪ ಅಧೀಕ್ಷಕ ಆರ್.ವಿಗಂಗಾಧರಪ್ಪ, ಉಪ ತಹಶೀಲ್ದಾರ್ ಮಧುಸೂದನ್, ಮಾಜಿ ಸೈನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.
ಸ್ಥಳೀಯ ಶಾಲಾ- ಕಾಲೇಜು, ಪೊಲೀಸ್, ಎನ್ಸಿಸಿ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಧ್ವಜವಂದನೆ ಸ್ವೀಕರಿಸಿದರು. ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಎಂ.ಡಿ.ಅಪ್ಪಾಜಿ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಂಡಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ಮೌಲಾನಾ ಆಜಾದ್ ಶಿಕ್ಷಣ ಸಂಸ್ಥೆ ಶಿಕ್ಷಕರ ತಂಡ ನಾಡಗೀತೆ, ಬಸವರಾಜ್ ತಂಡದಿಂದ ರೈತಗೀತೆ ಹಾಗೂ ಮಹೇಶ್ ಅಮೀನ್ ಅವರು ವಂದೇ ಮಾತರಂಗೀತೆ ಹಾಡಿದರು. ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಪುಷ್ಪ ಸ್ವಾಗತಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.







