ಮಡಿಕೇರಿ ಜ.27 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯ ಕೋಟೆ ಆವರಣ, ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್ ಪರಂಬುವಿನಲ್ಲಿ “ಅಂತರ ರಾಷ್ಟ್ರೀಯ ಹತ್ಯಾಕಾಂಡದ ಸ್ಮರಣೆ ದಿನ” ವನ್ನು ಆಚರಿಸಿತು.
ಮೂರು ಪ್ರದೇಶಗಳಿಗೆ ಭೇಟಿ ನೀಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹತ್ಯೆಗೀಡಾದ ಕೊಡವರಿಗೆ ಪುಷ್ಪ ನಮನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅರಸರ ಆಳ್ವಿಕೆಯ ಕಾಲದಲ್ಲಿ ರಾಜಕೀಯ ಷಡ್ಯಂತ್ರದಿಂದ ಕೊಡವರ ನರಮೇಧವಾಗಿದೆ. ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರು ಬಲಿಯಾಗಿದ್ದಾರೆ. ಬುಡಕಟ್ಟು ಜನಾಂಗ ಕೊಡವರ ಹತ್ಯೆ ಘೋರ ದುರಂತವಾಗಿದ್ದು, ಅಂತರ ರಾಷ್ಟ್ರೀಯ ಮಟ್ಟದ ಸ್ಮಾರಕ ನಿರ್ಮಾಣ ಮಾಡುವ ಅಗತ್ಯವಿದೆ. ಆ ಮೂಲಕ ಮಡಿದವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕು ಎಂದು ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.
ಟಿಪ್ಪು ಸೋಲಿನ ಸೇಡು ತೀರಿಸಿಕೊಳ್ಳಲು ಸಾವಿರಾರು ಅಮಾಯಕ ನಿರಾಯುಧ ಕೊಡವ ಯೋಧರನ್ನು ಕುತಂತ್ರದಿಂದ ಹತ್ಯೆ ಮಾಡಿದನು. ಬದುಕುಳಿದವರನ್ನು ಶ್ರೀರಂಗಪಟ್ಟಣಕ್ಕೆ ಎಳೆದೊಯ್ದು ಕಿರುಕುಳ ನೀಡಿದನು ಎಂದು ಆರೋಪಿಸಿದರು.
ಮಡಿಕೇರಿ ಕೋಟೆ, ನಾಲ್ ನಾಡ್ ಅರಮನೆ ಮತ್ತು ದೇವಟ್ ಪರಂಬುವಿನ ದುರಂತ ನರಮೇಧಗಳನ್ನು ಕೊಡವ ಬುಡಕಟ್ಟು ಸಮುದಾಯ ಮರೆಯಲು ಸಾಧ್ಯವಿಲ್ಲ. ಈ ಮೂರು ಕರಾಳ ಅಧ್ಯಾಯವನ್ನು ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು. ಮಡಿಕೇರಿ ಕೋಟೆ, ನಾಲ್ ನಾಡ್ ಅರಮನೆ ಮತ್ತು ದೇವಟ್ ಪರಂಬುವಿನಲ್ಲಿ ಸ್ಮಾರಕವನ್ನು ಸ್ಥಾಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಸಿಎನ್ಸಿ ಪ್ರಮುಖರಾದ ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ವಿಜು, ಆಲಮಂಡ ಜೈ, ಮಂದಪಂಡ ಮನೋಜ್, ಪುಟ್ಟಿಚಂಡ ದೇವಯ್ಯ, ಕಳ್ಳೀರ ಸುರೇಶ್, ನಂದಿನೆರವಂಡ ಸುರೇಶ್, ಕೋಡಿರ ರಥನ್ ಈ ಸಂದರ್ಭ ಹಾಜರಿದ್ದರು.







