ಶನಿವಾರಸಂತೆ : ರೋಟರಿ ಕ್ಲಬ್ ನಿಂದ ಆರೋಗ್ಯ ಸೇತು ಕಾರ್ಯಕ್ರಮ

ಶನಿವಾರಸಂತೆ ಫೆ.6 : ಶನಿವಾರಸಂತೆ ರೋಟರಿ ಕ್ಲಬ್ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ “ಆರೋಗ್ಯ ಸೇತು” ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹಾಗೂ ವರ್ಕ್ ಶಾಪ್ ಕಾರ್ಮಿಕರಿಗೆ ಟಿ.ಟಿ ಚುಚ್ಚುಮದ್ದು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿವಹಿಸ ಬೇಕಾಗಿದೆ. ಇಂದು ಆಹಾರ ಪದ್ಧತಿ ಬದಲಾಗಿರುವುದರಿಂದ ನಮ್ಮ ಆರೋಗ್ಯ ಯಾವಾಗ ಹದಗೆಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಬ್ಬಿಣದ ಸರಳುಗಳು ತಗುಲಿ ಗಾಯವಾದರೆ ಮುಂದೆ ಪ್ರಾಣಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಟಿಟಿ ಚುಚ್ಚುಮದ್ದನ್ನು ಮುಂಜಾಗೃತಾ ಕ್ರಮವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಶೃತಿ ಮಾತನಾಡಿ, ರೋಗ ನಿರೋಧಕ ಚುಚ್ಚು ಮದ್ದು ಇಂದು ಅತ್ಯವಶ್ಯಕವಾಗಿದೆ. ದೇಹದಲ್ಲಿ ಯಾವುದೇ ಸಣ್ಣ ಬದಲಾವಣೆಯಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರಾದರೆ ನಿರ್ಲಕ್ಷ್ಯವಹಿಸಬೇಡಿ, ಆಗಿಂದಾಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ ಜಯಕುಮಾರ್ , ರೋಟರಿ ಸಂಸ್ಥೆಯಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ. ಸಮಾಜ ಸೇವೆ ಮಾಡುವ ಗುರಿಯನ್ನು ರೋಟರಿ ಸಂಸ್ಥೆ ಹೊಂದಿದೆ ಎಂದು ತಿಳಿಸಿದರು. ರೋಟರಿ ಕ್ಲಬ್ ಸಹಾಯಕ ಗೌವರ್ನರ್ ಸತೀಶ್, ಮಂಜುನಾಥ್ ಆಚಾರ್ಯ, ವಲಯ ಸೇನಾನಿ ಹೆಚ್.ವಿ.ದಿವಾಕರ್, ಚಂದ್ರಕಾಂತ್, ವಸಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ವರದಿಃ ದಿನೇಶ್ ಮಾಲಂಬಿ. ಸೊಮವಾರಪೇಟೆ
