ಮಡಿಕೇರಿ ಫೆ.14 : ಪುಲ್ವಾಮ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ಇಂದು ಸಂಜೆ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾಶ್ಮೀರದ ಪುಲ್ವಾಮ ಹೆದ್ದಾರಿಯಲ್ಲಿ ಭಯೋತ್ಪಾದಕರು ಆತ್ಮಾಹುತಿ ಧಾಳಿ ನಡೆಸಿ 40 ಭಾರತೀಯ ಯೋಧರನ್ನು ಕೊಂದು ಹಾಕಿ ತಮ್ಮ ವಿಕೃತಿ ಮೆರೆದರು. ಈ ಭೀಕರ ಭಯೋತ್ಪಾದಕ ಧಾಳಿಯಲ್ಲಿ ಹುತಾತ್ಮರಾದ ಎಲ್ಲಾ ಭಾರತೀಯ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ಹುತಾತ್ಮ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಣೆ ಮಾಡಿಕೊಂಡು 40 ಹಣತೆಗಳನ್ನು ಹಚ್ಚಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ಧನಂಜಯ ಆಗೋಳಿಕಜೆ ಹಾಗೂ ಹಿಂ.ಜಾ.ವೇ.ಕೊಡಗು ಜಿಲ್ಲಾ ಸಂಚಾಲಕ್ ಕುಕ್ಕೇರ ಅಜಿತ್ ಮಾತನಾಡಿದರು. ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದರು.









