*25 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿ ತೋರಿಸುವೆ*

ಸುಂಟಿಕೊಪ್ಪ ಏ.30 : ಕಳೆದ 25 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಶಾಸಕನಾದರೆ ಮಾಡಿ ತೋರಿಸುತ್ತೇನೆ ಎಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಡಾ.ಮಂಥರ್ಗೌಡ ತಿಳಿಸಿದ್ದಾರೆ.
ಸುಂಟಿಕೊಪ್ಪದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದ ಪ್ರಗತಿಗಾಗಿ ಶ್ರಮಿಸುತ್ತಿದೆ. ಆರೋಗ್ಯ ಸೇವೆ, ಯುವ ಸಮೂಹಕ್ಕೆ ಉದ್ಯೋಗ, ಮಹಿಳಾ ಸಬಲೀಕರಣ ನಮ್ಮ ಗುರಿಯಾಗಿದೆ. ಎಲ್ಲಾ ಜಾತಿ, ಧರ್ಮದವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದ್ದೇನೆ ಎಂದು ಹೇಳಿದರು.
ಹಿರಿಯ ಮುಖಂಡ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ ಕಿರಿಯ ವಯಸ್ಸಿನಲ್ಲಿ ಶಾಸಕನಾಗಲು ಮಂಥರ್ ಗೌಡರಿಗೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡಿದೆ. ಬಡವರ ಕಲ್ಯಾಣಕ್ಕಾಗಿ ಅವರು ನೀಡಿದ ಕೊಡುಗೆ ಇದಕ್ಕೆ ಕಾರಣವಾಗಿದೆ. ಅವರು ಈ ಬಾರಿ ಗೆದ್ದರೆ 30 ವರ್ಷಗಳವರೆಗೆ ಬೇರೆ ಶಾಸಕರು ಇಲ್ಲಿ ಗೆದ್ದು ಬರಲು ಸಾಧ್ಯವಿಲ್ಲ ಎಂದರು.
ಮಾಜಿ ಶಾಸಕರಾದ ಕೆ.ಎಂ.ಇಬ್ರಾಹಿo, ಕಾಂಗ್ರೆಸ್ ಮುಖಂಡರಾದ ಬ್ಲಾಕ್ ಅಧ್ಯಕ್ಷ ವಿ.ಪಿ.ಶಶಿಧರ್, ಜಿ.ಪಂ. ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್, ಎಂ.ಎ. ವಸಂತ, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯೆ ಸುನೀತಾ, ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ರಫೀಕ್ಖಾನ್, ಪಿ.ಆರ್.ಸುಕುಮಾರ್, ರಜಾಕ್, ಹಕೀಂ, ಬೆಟ್ಟಗೇರಿ ತೋಟದ ಮಾಲೀಕರಾದ ವಿನೋದ್ ಶಿವಪ್ಪ ಅವರ ಪುತ್ರ ವಿಶಾಲ್ ಶಿವಪ್ಪ, ಸಂಜಯ್ ಜೀವಿಜಯ ಇದ್ದರು.
ಅನಂತರ ರೋಡ್ ಶೋ ನಡೆಸಿ ಮತಯಾಚನೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆಭ್ಯರ್ಥಿ ಡಾ.ಮಂಥರ್ಗೌಡ ಪಕ್ಷದ ಮುಖಂಡರು ಕಾರ್ಯಕರ್ತರು ಮತಯಾಚಿಸಿದರು.
