ಮಡಿಕೇರಿ ಆ.24 : ಕನ್ನಡ ಚಿತ್ರರಂಗದ ತಾರೆಗಳಾದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರ ವಿವಾಹ ಅಮ್ಮತ್ತಿ ಕೊಡವ ಸಮಾಜದಲ್ಲಿ ವಿಜೃಂಭಣೆಯಿಂದ ಕೊಡವ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ವಿವಾಹ ಸಮಾರಂಭಕ್ಕೆ ಬಂದು ನವವಧುವರರಿಗೆ ಶುಭ ಹಾರೈಸಿದರು.
ಹರ್ಷಿಕಾ ಹಾಗೂ ಭುವನ್ ಕಳೆದ 10 ವರ್ಷಗಳಿಂದ ಸ್ನೇಹಿತರಾಗಿದ್ದರು. ಗೆಳೆಯನನ್ನೇ ವಿವಾಹವಾಗುತ್ತಿರುವುದು ಸಂತೋಷ ತಂದಿದೆ. ಇಬ್ಬರೂ ಸಮಾನ ಮನಸ್ಕರಾಗಿದ್ದು ಹೀಗಾಗಿ ಮತ್ತಷ್ಟು ಸಂತೋಷವಾಗಿದೆ ಎಂದು ಹರ್ಷಿಕಾ ಹರ್ಷ ವ್ಯಕ್ತಪಡಿಸಿದರು.
ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹ ಕಾರ್ಯಗಳು ಜರುಗಿದವು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಚಿತ್ರಕಲಾವಿದೆಯರಾದ ಗೋಲ್ಡಲ್ ಸ್ಟಾರ್ ಗಣೇಶ್, ಅನುಪ್ರಭಾಕರ್, ತಬಲ ನಾಣಿ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮತ್ತಿತರ ಪ್ರಮುಖರು ವಧುವರನಿಗೆ ಶುಭ ಕೋರಿದರು.
ಅಮೆರಿಕಾದಲ್ಲಿ ಗೆಳೆಯನ ವಿವಾಹ ಮುಂದಿನ ವಾರ ಇದೆ. ಹೀಗಾಗಿ ಈ ವಾರವೇ ಅಮೆರಿಕಾಕ್ಕೆ ಹೋಗಲಿದ್ದೇವೆ. ಅಲ್ಲಿಂದ ಬಂದು ನಮ್ಮದೇ ಪ್ರೊಡಕ್ಷನ್ ನಲ್ಲಿ ಭುವನಂ ಶರಣಂ ಗಜ್ಜಾಮಿ ಚಿತ್ರದ ನಿರ್ಮಾಣ ಕಾರ್ಯ ಪ್ರಾರಂಭಿಸಲಿದ್ದೇವೆ ಎಂದು ಭುವನ್ ಪೊನ್ನಣ್ಣ ಹೇಳಿದರು.
ಭುವನ್ ತಂದೆ ಉಳ್ಳಿಯಡ ಪೂವಯ್ಯ ಹಾಗೂ ತಾಯಿ ಡಾಟಿ ಮಡಿಕೇರಿಯಲ್ಲಿ ಕೊಡವ ವಾರಪತ್ರಿಕೆ ಬ್ರಹ್ಮಗಿರಿಯನ್ನು 3 ದಶಕಗಳಿಂದ ನಡೆಸುತ್ತಿದ್ದು, ಹಿರಿಯ ಪತ್ರಕರ್ತರಾಗಿದ್ದಾರೆ. ಹರ್ಷಿಕಾ ಪೂಣಚ್ಚ ಅಮ್ಮತ್ತಿ ಗ್ರಾಮದವರಾಗಿದ್ದು, ಕನ್ನಡ ಸೇರಿದಂತೆ ಗುಜರಾತಿ, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.












