ಮಡಿಕೇರಿ ನ.2 : ನಮ್ಮ ಸಂಸ್ಕೃತಿಯೊಳಗಿನ ಮೂಲಾಂಶಗಳು ದಾಖಲಾತಿಗೊಳ್ಳುವ ಅಗತ್ಯ ಇದೆ. ಆದರೆ ಕೇಡನ್ನು ಮುಂದಿಡುವ ಸಂಸ್ಕೃತಿಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಅಂತಹ ಪ್ರಯತ್ನವನ್ನು ಸಂಶೋಧಕಿ ಪೂರ್ಣಿಮಾ ರವಿ ಅವರು ತಮ್ಮ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್” ಎಂಬ ಸಾಕ್ಷ್ಯಚಿತ್ರದ ಮೂಲಕ ಮಾಡಿ ತೋರಿಸಿದ್ದಾರೆ ಎಂದು ಖ್ಯಾತ ಚಲನಚಿತ್ರೋದ್ಯಮಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಇಂಗ್ಲೀಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇಂಗ್ಲೀಷ್ (ಯುಜಿ), ಸಮಾಜಶಾಸ್ತ್ರ, ಸಮಾಜಕಾರ್ಯ, ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಕ್ಷ್ಯಚಿತ್ರ ತಯಾರಿಸಿದ ಪೂರ್ಣಿಮಾ ರವಿ ಅವರನ್ನು ಅಭಿನಂದಿಸಿ ಅಂತರರಾಷ್ಟ್ರೀಯ ಮಟ್ಟದ ಚಿತ್ರೋತ್ಸವಕ್ಕೆ ಸಾಕ್ಷ್ಯಚಿತ್ರವನ್ನು ಕಳುಹಿಸುವಂತೆ ಸಲಹೆ ನೀಡಿದರು.
ಸಂಶೋಧನಾ ಮಾರ್ಗದರ್ಶಕರಾದ ಡಾ.ನಯನ ಕಶ್ಯಪ್ ಮಾತನಾಡಿ ಪೂರ್ಣಿಮಾ ರವಿ ಅವರು ಇಂಗ್ಲೀಷ್ ಸಾಹಿತ್ಯ ಕೃತಿಗಳಲ್ಲಿ ದೇವದಾಸಿಗಳ ಬದುಕಿನ ಕುರಿತು ಸಾಹಿತ್ಯಕ ಅಧ್ಯಯನ ಕೈಗೊಳ್ಳುವ ಸಂದರ್ಭ ದಾಖಲಾತಿ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಸಾಕಷ್ಟು ಸಮಯ ಮತ್ತು ಹಣವನ್ನು ವ್ಯಯಿಸಿದ್ದಾರೆ ಎಂದರು.
ಪೂರ್ಣಿಮಾ ರವಿ ಮಾತನಾಡಿ ಪಿ.ಎಚ್.ಡಿ ಸಂಶೋಧನೆಯಿಂದ ಆಗಬಹುದಾದ ಪ್ರಯೋಜನ ಏನು ಎಂಬ ಪ್ರಶ್ನೆಯೇ ನನ್ನಲ್ಲಿ ಈ ಸಾಕ್ಷ್ಯಚಿತ್ರ ತಯಾರಿಕೆಗೆ ಅನುವು ಮಾಡಿಕೊಟ್ಟಿತು. ಸಾಕ್ಷ್ಯಚಿತ್ರದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಆಯ್ಕೆ ಮಾಡಿಕೊಂಡ ವಿಷಯ ಸೂಕ್ಷ್ಮವಾದ ಕಾರಣ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಳ್ಳಲಾಯಿತು. ಈ ಸಾಕ್ಷ್ಯಚಿತ್ರದ ಮೂಲಕ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು ಎಂಬ ಅಭಿಲಾಷೆ ನನ್ನದು. ದೇವದಾಸಿಯರ ಬದುಕಿಗೆ ಸರಕಾರ ಮತ್ತು ಸಮಾಜ ಆಶಾಕಿರಣವಾಗಬೇಕಾದ ಅಗತ್ಯವಿದೆ ಎಂದು ಪೂರ್ಣಿಮಾ ರವಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ಪ್ರತಿಯೊಬ್ಬರಿಗೂ ಸಾಮಾಜಿಕ ಅರಿವಿನ ಅಗತ್ಯವಿದೆ, ಇಲ್ಲದಿದ್ದರೆ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಸಮಾಜದಲ್ಲಿ ಮಾತೆ, ಮಾತೃತ್ವಕ್ಕೆ ಹೆಚ್ಚಿನ ಬೆಲೆ ನೀಡಲಾಗಿದೆ. ಆದರೂ ಹೆಣ್ಣಿನ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಆಗಬೇಕಾಗಿದೆ. ಆರ್ಥಿಕವಾಗಿ ಸುಧಾರಣಾವಾದಿ ನೆಲೆಗಳು ರೂಪುಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ದೇವದಾಸಿ ಪದ್ಧತಿಯ ಚಾರಿತ್ರಿಕ ಹಿನ್ನೆಲೆಯನ್ನು ಕಾಲೇಜ್ ನ ಇಂಗ್ಲೀಷ್ ವಿಭಾಗದ ಸಂಯೋಜಕ ಪೂಣಚ್ಚ ಕೆ.ಎಂ ವಿವರಿಸಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ ಹಾಗೂ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಕಾಂಚನ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ಎ.ಎನ್ ವಂದಿಸಿದರು.








