ಬೆಂಗಳೂರು ಮಾ.4 NEWS DESK : ಚುನಾವಣೆ ಘೋಷಣೆ ಆಗುತಿದ್ದಂತೆಯೇ ಮಾಧ್ಯಮಗಳಲ್ಲಿ ವಾಟ್ಸ್ ಅಪ್ ಅಥವಾ ಫೇಸ್ ಬುಕ್ ನಲ್ಲಿ ಯಾರೂ ಪ್ರಚಾರ ಮಾಡಬಾರದು ಎಂದು ಪದೇ ಪದೇ ಪ್ರಸಾರ ಮಾಡಲಾಯಿತು. ಬಹುಶಃ ಇದು ಅವರ ಮಾಹಿತಿಯ ಕೊರತೆ ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ.
ಪ್ರಚಾರ ಮಾಡದೇ ಯಾವುದೇ ಅಭ್ಯರ್ಥಿ ಗೆಲ್ಲುವುದು ಅಸಾಧ್ಯ. ಕನಿಷ್ಟ ಪಕ್ಷ ತಾನು ಅಥವಾ ತಮ್ಮ ಪಕ್ಷ ಮಾಡಿರುವ ಕೆಲಸಗಳ ಬಗ್ಗೆ ಮತದಾರರಿಗೆ ತಿಳಿಸುವುದಕ್ಕಾದರೂ ಪ್ರಚಾರ ಮಾಡಲೇಬೇಕಾಗುತ್ತದೆ. ಅಭ್ಯರ್ಥಿಯೊಬ್ಬರು ಸಾರ್ವಜನಿಕ ಸಭೆ ನಡೆಸಿ ಲಕ್ಷಾಂತರ ಜನರನ್ನು ಸೇರಿಸಿ ಭಾಷಣ ಮಾಡಿ ಪ್ರಚಾರ ಮಾಡುತ್ತಾರೆ. ಇದು ಲಕ್ಷಾಂತರ ಜನರು ನೋಡುವ ಟಿವಿ ಚಾನೆಲ್ , ವೃತ್ತ ಪತ್ರಿಕೆಗಳಲ್ಲಿ ವರದಿ ಆಗುವ ಮೂಲಕ ಮತ್ತೆ ಲಕ್ಷಾಂತರ ಜನರನ್ನು ತಲುಪುತ್ತದೆ. ಬಹಿರಂಗವಾಗಿಯೇ ಪ್ರಚಾರ ಮಾಡುವ ಮೂಲಕ ರಾಜಕೀಯ ಪ್ರಚಾರಕ್ಕೆ ಅವಕಾಶ ಇರುವಾಗ ವಾಟ್ಸ್ ಅಪ್ , ಫೇಸ್ ಬುಕ್ ನಲ್ಲಿ ಏಕೆ ಕೂಡದು ?
ಅನೇಕ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಈಗಾಗಲೇ ಗಾಳಿ ಸುದ್ದಿಗೆ ಬೆದರಿ ಅಡ್ಮಿನ್ ಗೆ ಮಾತ್ರ ಮಾಹಿತಿ ಶೇರ್ ಮಾಡುವ ಅವಕಾಶ ಮಾಡಿಕೊಂಡಿದ್ದಾರೆ. ಆದರೆ ಚುನಾವಣಾ ಆಯೋಗದ ಕಾನೂನು ಏನು ಹೇಳುತ್ತದೆ ಗೊತ್ತೇ ? ಲೋಕಸಭಾ ಅಭ್ಯರ್ಥಿಗಳಿಗೆ ಪ್ರಚಾರಕ್ಕಾಗಿ 75 ರಿಂದ 95 ಲಕ್ಷ ( ಕ್ಷೇತ್ರಗಳ ವಿಸ್ತೀರ್ಣ , ಜನಸಂಖ್ಯೆ ಮತ್ತು ಭೌಗೋಳಿಕತೆಯನ್ನು ಆಧರಿಸಿ) ರೂಪಾಯಿಗಳನ್ನು ವೆಚ್ಚ ಮಾಡಲು ಅವಕಾಶ ಇದೆ. ಆದರೆ ಇದನ್ನು ಮತದಾರರಿಗೆ ಅಮಿಷ ಒಡ್ಡಲು ಅಥವಾ ಲಂಚ ನೀಡಿ ಮತ ಗಳಿಸಲು ಬಳಸಲು ಅವಕಾಶವಿಲ್ಲ. ಪ್ರತಿ ವೆಚ್ಚವನ್ನೂ ದಾಖಲಿಸಿಕೊಂಡು ಚುನಾವಣಾ ಅಧಿಕಾರಿಗಳಿಗೆ ಲೆಕ್ಕ ನೀಡಬೇಕಿದೆ. ಲೆಕ್ಕ ನೀಡಿ ಅಭ್ಯರ್ಥಿಗಳು ಯಾವುದೇ ವೇದಿಕೆ ಅಥವಾ ಯಾವುದೇ ರೀತಿಯ ಪ್ರಚಾರ ಮಾಡಬಹುದಾಗಿದೆ. ಹೀಗಿರುವಾಗ ವಾಟ್ಸ್ ಅಪ್ ನಲ್ಲಿ ಪ್ರಚಾರ ಯಾಕೆ ನಿಷಿದ್ದ ಆಗುತ್ತದೆ ? ಹಾಗಾದರೆ ಪತ್ರಿಕೆಗಳ ತುಣುಕು , ವೀಡಿಯೋ ತುಣುಕು ಹಂಚಿಕೊಳ್ಳುವುದೂ ಕೂಡ ಅಪರಾಧವೇ ಆಗಬೇಕಲ್ಲವೇ ?
ಉದಾಹರಣೆಗೆ ನೀವು ಮೋದಿ ಅಥವಾ ರಾಹುಲ್ ಗಾಂಧಿ ಅಭಿಮಾನಿ ಎಂದಿಟ್ಟುಕೊಳ್ಳಿ. ನಿಮ್ಮ ನಾಯಕನ ಪರ ಮತ ಚಲಾಯಿಸಿ ಎಂದು ವಾಟ್ಸ್ ಅಪ್ ಬಳಕೆದಾರರಿಗೆ ಕರೆ ನೀಡುವುದು ಯಾವುದೇ ಕಾರಣಕ್ಕೂ ಕಾನೂನಿನ ಉಲ್ಲಂಘನೆ ಆಗುವುದಿಲ್ಲ. ಏಕೆಂದರೆ ಇದು ನಿಮಗೆ ಸಂವಿಧಾನವೇ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹಕ್ಕು ಆಗಿದೆ. ಇದು ನೀವು ನಿಮ್ಮ ನಾಯಕನ ಪರ ಯಾವುದೇ ವೆಚ್ಚ ಇಲ್ಲದೆ ಮೆಸೇಜ್ ಕಳಿಸುವುದರಿಂದ ಚುನಾವಣಾ ಅಭ್ಯರ್ಥಿಯ ವೆಚ್ಚಕ್ಕೂ ಸೇರಿಸಲು ಬರುವುದಿಲ್ಲ. ನೀವು ನಿಮ್ಮ ನಾಯಕನ ಚಿತ್ರವನ್ನು ಡಿಪಿಯನ್ನಾಗಿ ಬದಲಾಯಿಸಿದರೆ ಅಥವಾ ಅರದಲ್ಲೂ ಪ್ರಚಾರ ಮಾಡಿದರೆ ಅದನ್ನು ನಿರ್ಭಂಧಿಸಲು ಆಗುವುದಿಲ್ಲ. ನಿಮ್ಮ ಮನೆಯ ಗೋಡೆಗೆ ಪೋಸ್ಟರ್ ಅಂಟಿಸಿ ಇಂತವರಿಗೆ ಮತ ನೀಡಿ ಎಂದು ಪ್ರಚಾರ ಮಾಡುವುದೂ ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ , ಆದರೆ ಇದಕ್ಕೆ ತಗಲುವ ವೆಚ್ಚ ಅಭ್ಯರ್ಥಿಯ ವೆಚ್ಚದಲ್ಲಿ ಸೇರಿಸಬೇಕು ಅಷ್ಟೇ.
ಆದರೆ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಯಾರ ವಿರುದ್ದವೂ ಅಪಪ್ರಚಾರ ಅಥವಾ ಸುಳ್ಳನ್ನು ಪ್ರಸಾರಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಚುನಾವಣಾ ನೀತಿ ಸಂಹಿತೆ ಇಲ್ಲದಿದ್ದರೂ ಕೂಡ ಇದು ಅಪರಾಧವೇ ಎಂಬುದನ್ನು ಮರೆಯಬಾರದು.
ಇತ್ತೀಚೆಗೆ ಚುನಾವಣಾ ಆಯೋಗವು ಕೇಂದ್ರ ಪ್ರಚಾರ ಇಲಾಖೆ ಪ್ರತಿಯೊಬ್ಬರ ಮೊಬೈಲ್ ಗೂ ವೀಕ್ಷಿತ್ ಭಾರತ್ ಮೆಸೇಜ್ ಕಳಿಸುವುದನ್ನು ನಿರ್ಬಂಧಿಸಿದೆ. ಸರ್ಕಾರದ ವೆಚ್ಚದಲ್ಲಿ ಚುನಾವಣಾ ಸಂದರ್ಭದಲ್ಲಿ ಸಾಧನೆಯನ್ನು ಜನರಿಗೆ ತಿಳಿಸುವುದು ನೀತಿ ಸಂಹಿತೆಯ ಉಲ್ಲಂಘನೆ ಎಂಬ ಕಾರಣಕ್ಕಾಗಿ ಇದನ್ನು ನಿರ್ಬಂಧಿಸಲಾಗಿದೆ.
ಚುನಾವಣಾ ಆಯೋಗದ ನಿರ್ಬಂಧಗಳು ಏನೇ ಇದ್ದರೂ ಆನ್ ಲೈನ್ ಅಥವಾ ಡಿಜಿಟಲ್ ಜಾಲತಾಣದಲ್ಲಿ ಪ್ರಚಾರಕ್ಕಾಗಿ ಮಾಡಿದ ವೆಚ್ಚವು ಅಭ್ಯರ್ಥಿಯ ಚುನಾವಣಾ ವೆಚ್ಚದಲ್ಲಿ ಸೇರಿರಬೇಕು ಅಷ್ಟೇ. ಇದನ್ನು ಗಮನದಲ್ಲಿಟ್ಟುಕೊಂಡು ನೀವು ಯಾರ ಪರವಾಗಿಯಾದರೂ ಪ್ರಚಾರ ಮಾಡಿಕೊಳ್ಳಿ. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಅದನ್ನು ಅಂಜಿಕೆ ಅಳುಕಿಲ್ಲದೇ ಚಲಾಯಿಸಿ.
ವರದಿ : ಕೋವರ್ ಕೊಲ್ಲಿ ಇಂದ್ರೇಶ್








