ಮಡಿಕೇರಿ ಏ.11 NEWS DESK : ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಸಮಾಗಮ ಹೆಸರಿನ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಸಡಗರ ಸಂಭ್ರಮದಿಂದ ಜರುಗಿತು.
ಗಾಳಿಯಲ್ಲಿ ಬಲೂನ್ ಗಳ ಗುಚ್ಛವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳು ಹಾಗೂ ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಪಾಲ್ಗೊಂಡು ಶಿಬಿರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕೊಡಗು ವಿದ್ಯಾಲಯದ ಕ್ರೀಡಾ ಅಧ್ಯಕ್ಷ ಕೋಡಿಮಣಿಯಂಡ ರಘು ಮಾದಪ್ಪ ಅವರನ್ನು ಶಾಲಾ ಮಕ್ಕಳ ಬ್ಯಾಂಡ್ ತಂಡದಿಂದ ಬರಮಾಡಿಕೊಳ್ಳಲಾಯಿತು.
ನಂತರ ಮಾತನಾಡಿದ ಅವರು, ಕ್ರೀಡಾ ಸೌಲಭ್ಯದ ಬಗ್ಗೆ ವ್ಯಾಖ್ಯಾನ ನೀಡಿ ಅದರ ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಕ್ರೀಡೆಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಕಿವಿ ಮಾತು ಹೇಳಿದರು.
ಶಾಲೆಯ ಕ್ರೀಡಾ ಮೈದಾನದಲ್ಲಿ ಬೇಸಿಗೆ ಕ್ರೀಡಾ ಶಿಬಿರಕ್ಕೆ ಶಾಲಾ ಆಡಳಿತ ಮಂಡಳಿಯ ಸದಸ್ಯೆ ನಿಯತ ದೇವಯ್ಯ ಚಾಲನೆ ನೀಡಿದರು. ನುರಿತ ತರಬೇತುದಾರರಿಂದ ಕ್ಯಾಲಿಗ್ರಾಫಿ ಹಾಗೂ ಚಿತ್ರಕಲಾ ಪ್ರದರ್ಶನ ನಡೆಯಿತು.
ಮೇ 1 ರವರೆಗೆ ನಡೆಯುವ ಸಮಾಗಮ ಶಿಬಿರದಲ್ಲಿ 250 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಸಮಾಗಮ : ಶಿಬಿರದಲ್ಲಿ ಚಿತ್ರಕಲೆ, ಕ್ಲೇ ಮೋಡ್ಲಿಂಗ್, ಟ್ರಡಿಷನಲ್ ವಾಲ್ ಪೇಂಟಿಂಗ್ ಲ್ಯಾಂಡ್ ಸ್ಕೇಪ್, ಗಾಳಿಪಟ ರಚನೆ, ಮಾಸ್ಕ್ ಮೇಕಿಂಗ್,ಪಾಟ್ ಪೇಂಟಿಂಗ್, ಬೆಸ್ಟ್ ಔಟ್ ಒಫ್ ವೇಸ್ಟ್, ಸ್ಟಿಲ್ ಲೈಫ್ ವರ್ಕ್ಸ್, ಕಾವಿ೯ ಆರ್ಟ್ , ನೃತ್ಯ: ಭರತನಾಟ್ಯ, ಮೋಹಿನಿ ಆಟಮ್, ,ಕ್ಯಾಲಿಗ್ರಾಫಿ, ಸಂಗೀತ, ಹಾಕಿ, ಕ್ರಿಕೆಟ್, ಹ್ಯಾಂಡ್ ಬಾಲ್, ಚೆಸ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಟೇಬಲ್ ಟೆನಿಸ್ ಮತ್ತು ಅಥ್ಲೇಟಿಕ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ.







