
ಮಡಿಕೇರಿ ಏ.13 NEWS DESK : ಕೊಡಗಿನ ಸೈನಿಕ ಶಾಲೆಯಲ್ಲಿ ನಡೆದ 2024-25ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಶಾಲಾ (ಗುಂಪು-ಹೆಚ್) ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಲಿಕಿರಿ, ಕಜಕೂಟಂ ಮತ್ತು ಅಮರಾವತಿನಗರ ಸೈನಿಕ ಶಾಲೆ ತಂಡಗಳು ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿದವು.
ವಿದ್ಯಾರ್ಥಿನಿಯರ ತಂಡದಿಂದ ಕಲಿಕಿರಿ ಸೈನಿಕ ಶಾಲೆಯ ಕೆಡೆಟ್ ಎಂ.ಜಿ.ದೀಕ್ಷಿತಾ, ಕಿರಿಯರ ವಿಭಾಗದಿಂದ ಕಜಕೂಟಂನ ಸೈನಿಕ ಶಾಲೆ ಕೆಡೆಟ್ ಕೃಷ್ಣಕಾಂತ್ ಹಾಗೂ ಉಪ ಕಿರಿಯರ ತಂಡದಿಂದ ಅಮರಾವತಿನಗರದ ಸೈನಿಕ ಶಾಲೆ ಕಡೆಟ್ ಎಂ.ಪಿ.ದೀಪಕ್ ಅತ್ಯುತ್ತಮ ಆಟಗಾರರಾಗಿ ಆಯ್ಕೆಯಾದರು.
ಪಂದ್ಯಾವಳಿಯಲ್ಲಿ ಭಾರತದ ದಕ್ಷಿಣ ವಲಯದ ಕಜಕೂಟಂ (ಕೇರಳ) ಸೈನಿಕ ಶಾಲೆ, ಅಮರಾವತಿನಗರ (ತಮಿಳುನಾಡು) ಸೈನಿಕ ಶಾಲೆ, ಕಲಿಕೇರಿ (ಆಂಧ್ರ ಪ್ರದೇಶ) ಸೈನಿಕ ಶಾಲೆ, ಅಮರಾವತಿನಗರ (ತಮಿಳುನಾಡು) ಸೈನಿಕ ಶಾಲೆ ಹಾಗೂ ಆತಿಥೇಯ ಶಾಲೆ, ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಸೈನಿಕ ಶಾಲೆಯ ಪ್ರಭಾರೆ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಕ್ರೀಡಾಕೂಟದ ಅಂತಿಮ ಘಟ್ಟದವರೆಗೂ ಕೌಶಲ್ಯ, ಸಾಂಘಿಕ ಹೋರಾಟ ಮತ್ತು ಕ್ರೀಡಾ ಮನೋಭಾವವನ್ನು ಉತ್ಸಾಹದಿಂದ ಪ್ರದರ್ಶನಗೈದ ಎಲ್ಲಾ ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕ್ರೀಡಾಪುಟಗಳು ಕ್ರೀಡಾ ಮನೋಭಾವ, ಸಮಗ್ರತೆ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಮುಂದುವರಿಸಲು ಕರೆ ನೀಡಿದರು.
ಈ ಸಂದರ್ಭ ಕೊಡಗಿನ ಸೈನಿಕ ಶಾಲೆಯ ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಭಾಗವಹಿಸಿದ ಎಲ್ಲಾ ಶಾಲೆಗಳ ತಂಡದ ವ್ಯವಸ್ಥಾಪಕರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರೂ, ಎನ್ಸಿಸಿ ಸಿಬ್ಬಂದಿಗಳು, ದೈಹಿಕ ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಶಾಲೆಯ ಭಾವಿ ನಾಯಕ ಕಡೆಟ್ ಶರಣಬಸು ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪಥಸಂಚಲನ ಗಮನ ಸೆಳೆಯಿತು.








