
ಮಡಿಕೇರಿ ಏ.15 NEWS DESK : ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ -ನಿರ್ದೇಶನದ ಕೊಡವ ಚಲನಚಿತ್ರ “ಕಾಂಗತ ಮೂಡ್” (The shadow) ಚಿತ್ರದ ಮುಹೂರ್ತ ಮೂರ್ನಾಡಿನ ಬಿದ್ದಂಡ ಪೊನ್ನಪ್ಪ ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿ ಮಾತನಾಡಿದ ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ, ನಾವು ಎಷ್ಟು ಓದುತ್ತೇವೆ ಎಂಬುದು ಮುಖ್ಯವಲ್ಲ. ನಾವು ಜೀವನದಲ್ಲಿ ಎಷ್ಟರ ಮಟ್ಟಿಗೆ ಮನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುತ್ತಿದ್ದೇವೆ ಎಂಬುದು ಮುಖ್ಯ ಗ್ರಂಥಾಲಯಕ್ಕೆ ಎಲ್ಲರೂ ಹೋಗುತ್ತಾರೆ. ಅಲ್ಲಿರುವ ಪ್ರತಿ ಪುಸ್ತಕಗಳನ್ನು ಓದುತ್ತಾರೆ. ಆದರೆ ಅದನ್ನು ಓದುವಿಕೆಗೆ ಅಷ್ಟೇ ಸೀಮಿತ ಪಡಿಸದೇ ಅದರಿಂದ ಪಡೆದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿಕೊಳ್ಳಬೇಕು ಎಂದು ಹೇಳಿದರು.
ಬಾಹ್ಯಕ್ಕಿಂತಲೂ ಅಂತರಾಳದಲ್ಲಿ ನೋಡುವ ದೃಷ್ಠಿಕೋನ ಬಾಳನ್ನು ಅಭ್ಯಾಸ ಮಾಡುತ್ತದೆ. ನಮ್ಮ ಒಳಗಿನ ಬಾಳನ್ನು ನಮ್ಮ ಮನಸ್ಸನ್ನು ನಾವು ಓಡಾಡುವ ನೆಲ, ಜಲ ಹಾಗೂ ಪರಿಸರವನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕ ಎಂದರು.
ಕಲೆಯನ್ನು ಬೆಳಕಿಗೆ ತರುವವರು ಎಲ್ಲಾ ಇರಿಸುಮುರಿಸುಗಳನ್ನು ಸರಿಪಡಿಸಿಕೊಂಡು ನಗುಮುಖದಲ್ಲಿ ಮುಂದುವರೆಯುವುದು ಶ್ಲಾಘನೀಯ ಎಂದು ಹೇಳಿದರು.
ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಈಗಾಗಲೇ ಹಲವು ಸಿನಿಮಾಗಳನ್ನು ನಿರ್ಮಿಸಿದ್ದು ಅದರಲ್ಲಿ ಹಲವು ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ತಮ್ಮ ಚಿತ್ರಗಳ ಮೂಲಕ ಕೊಡಗಿನ ಆಚಾರ, ವಿಚಾರ, ಸಂಪ್ರದಾಯಗಳನ್ನು ಪ್ರಚಾರ ಪಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಚಿತ್ರದ ನಿರ್ದೇಶಕರಾದ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರತಂಡಕ್ಕೆ ಕೊಡವಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಿನಿಮಾ ನಿರ್ಮಿಸುವುದಾಗಿ ತಿಳಿಸಿದರು.
ಕೊಡಗಿನ ವಿವಿಧೆಡೆ ಹತ್ತು ದಿನಗಳ ವರೆಗೆ ಚಿತ್ರೀಕರಣ ನಡೆಯಲಿದ್ದು, ಸಿನಿಮಾದ ಚಿತ್ರೀಕರಣಕ್ಕೆ ಪೂರ್ಣ ದಿನಗಳವರೆಗೆ ಮನೆಯನ್ನು ನೀಡಿ ಸಹಕರಿಸಿದ ಬಿದ್ದಂಡ ಪೊನ್ನಪ್ಪ ಅವರಿಗೆ ಧನ್ಯವಾದ ಸಲ್ಲಿಸಿದರು.
ಹಿರಿಯ ಕಲಾವಿದ ವಾಂಚೀರ ವಿಠಲ್ ನಾಣಯ್ಯ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು.
ಕಾಫಿ ಬೆಳೆಗಾರ ಬಿದ್ದಂಡ ಪೊನ್ನಪ್ಪ ಕ್ಯಾಮರ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಚೌರೀರ ಉದಯ ಹಾಗೂ ಪತ್ನಿ ಚೌರೀರ ರತಿರವರ ಗದ್ದೆಯಲ್ಲಿ ಎಡ್ಮ್ಯಾರ್-1 ಆಚರಣೆ ಮಾಡುವ ದೃಶ್ಯವನ್ನು ಚಿತ್ರಿಸಲಾಯಿತು.
ಉದ್ಯಮಿ ಹಾಗೂ ಸಮಾಜ ಸೇವಕ, ಕಾಫಿ ಬೆಳೆಗಾರ ಬಡುವಂಡ ಅರುಣ್ ಹಾಗೂ ಕನ್ನು ದಂಪತಿ ಕ್ಯಾಮರಕ್ಕೆ ಪೂಜೆ ಸಲ್ಲಿಸಿ, ಚಿತ್ರದ ಯಶಸ್ಸಿಗೆ ಶುಭಹಾರೈಸಿದರು. ಚಿತ್ರದ ನಾಯಕ ಸಂತೋಷ್ ಮೇದಪ್ಪ, ನಾಯಕಿ ಅಪ್ಪಡೇರಂಡ ತೇಜು ಪೊನ್ನಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಟ್ಟುಕತ್ತೀರಾ ಯಶೋಧ ಪ್ರಕಾಶ್, ಈರಮಂಡ ವಿಜಯ್ ಉತ್ತಯ್ಯ, ಕೊಡವ ಕ್ಲಾನ್ ನ ಗುಮ್ಮಟ್ಟಿರ ಕಿಸು ಉತ್ತಪ್ಪ ಹಾಗೂ ಇತರರು ಹಾಜರಿದ್ದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ನಟ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಚಿತ್ರ ನಾಯಕನಾಗಿ ಚಡಿಯಂಡ ಸಂತೋಷ್ ಮೇದಪ್ಪ, ನಾಯಕಿಯಾಗಿ ಅಪ್ಪಡೇರಂಡ ತೇಜು ಪೊನ್ನಪ್ಪ, ಗೌರವ ಪೂರ್ವಕ ಅತಿಥಿ ನಟರಾಗಿ ಬಿ. ಜಿ.ಅನಂತಶಯನ, ಸಹ ನಟ ರಾಗಿ ಗುಮ್ಮಟ್ಟೀರ ಕಿಶು ಉತ್ತಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಅಭಿನಯಿಸುತ್ತಿದ್ದಾರೆ.
ನಿರ್ದೇಶನ-ನಿರ್ಮಾಣ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಸಹ ನಿರ್ಮಾಪಕಿಯಾಗಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಸಹ ನಿರ್ದೇಶಕಿ – ಸಂಭಾಷಣೆಕಾರ್ತಿಯಾಗಿ ಈರಮಂಡ ಹರಿಣಿ ವಿಜಯ್, ಚಿತ್ರ ಕಥೆ -ಗಾರ್ಗಿ ಕಾರೆಹಕ್ಲು, ಛಾಯಗ್ರಾಹಕರಾಗಿ ಪ್ರದೀಪ್ ಆರ್ಯನ್ ಹಾಗೂ ಸಂತೋಷ್ ಕಾರ್ಯನಿರ್ವಹಿಸುತ್ತಿದ್ದು, ಯಧುನಂದನ್ ಸಂಗೀತ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಈರಮಂಡ ವಿಜಯ್ ಉತ್ತಯ್ಯ, ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಥಮ ಹಂತದ 10ದಿನಗಳ ಚಿತ್ರೀಕರಣ ಕೊಡಗಿನ ವಿವಿಧ ಭಾಗಗಳಲ್ಲಿ ನಡೆಯಲಿದೆ.









