
ಮಡಿಕೇರಿ ಏ.15 NEWS DESK : ಬಿಜೆಪಿ ಎಂದಿಗೂ ಸಂವಿಧಾನ ಬದಲಾಯಿಸಲ್ಲ, ಈ ಕುರಿತು ಪ್ರಧಾನಿ ನರೇಂದ್ರಮೋದಿ ಅವರೇ ಭರವಸೆ ನೀಡಿದ್ದಾರೆ. ಮತ ಗಳಿಕೆಗಾಗಿ ಕಾಂಗ್ರೆಸ್ ಈ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಸ್ಪಷ್ಟಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್, ಬಿಜೆಪಿ ಗೆಲುವು ಸಾಧಿಸಿದರೆ ಸಂವಿಧಾನ ಬದಲಾಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಮಂತ್ರಿಗಳೇ ಸಂವಿಧಾನವನ್ನು ಬದಲಾಯಿಸುವ ಪ್ರಶ್ನೇಯೇ ಇಲ್ಲ ಎಂದು ಬೃಹತ್ ಸಮಾವೇಶದಲ್ಲೇ ಹೇಳಿದ್ದಾರೆ. ಡಾ.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷವೇ ಅಗೌರವದಿಂದ ನೋಡಿಕೊಂಡಿತ್ತು, ಚುನಾವಣೆಗಳಲ್ಲಿ ಸೋಲಿಸಿತ್ತು ಎಂದು ಟೀಕಿಸಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎನ್ನುವುದಕ್ಕೆ ಭಾನುವಾರ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಉಪಸ್ಥಿತಿಯಲ್ಲಿ ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶವೇ ಸಾಕ್ಷಿಯಾಗಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿ ಮನೆ ಮನೆ ಪ್ರಚಾರ ಆರಂಭಿಸಿದ್ದು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ. ಏ.18 ರವರೆಗೆ ಮನೆ ಭೇಟಿ ಪ್ರಚಾರ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಅವರು ಇಂದು ಒಕ್ಕಲಿಗ ಗೌಡ ಎಂದು ಹೇಳಿಕೊಳ್ಳುತ್ತಿದ್ದಾರೆ. ಪ್ರತಾಪಸಿಂಹ ಅವರ ವಿರುದ್ಧ ಟೀಕೆ ಮಾಡುವಾಗ ಅವರು ಕೂಡ ಒಕ್ಕಲಿಗ ಗೌಡ ಎನ್ನುವುದು ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದ ಕಿಶೋರ್ ಕುಮಾರ್, ಬಿಜೆಪಿಗೆ ಯಾವುದೇ ಜಾತಿ ಇಲ್ಲವೆಂದು ಸ್ಪಷ್ಟಪಡಿಸಿದರು.
ಮತ್ತೊಬ್ಬ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ ಸಂವಿಧಾನವನ್ನು 62 ಬಾರಿ ತಿದ್ದುಪಡಿ ಮಾಡಿದವರು ಕಾಂಗ್ರೆಸ್ ನವರು, ಸಂವಿಧಾನಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿಯ ಮೂಲಕ ಜನರ ಸ್ವತಂತ್ರö್ಯವನ್ನು ಕಸಿದುಕೊಂಡವರು ಇಂದಿರಾಗಾಂಧಿ ಎಂದು ಟೀಕಿಸಿದರು.
ಸಂವಿಧಾನಕ್ಕೆ ಕಾಂಗ್ರೆಸ್ ನಿಂದ ಕುತ್ತು ಎದುರಾಗಲಿದೆಯೇ ಹೊರತು ಬಿಜೆಪಿಯಿಂದ ಯಾವುದೇ ಅಪಾಯವಿಲ್ಲ. ಸಂವಿಧಾನದ ವಿಚಾರದಲ್ಲಿ ಸುಳ್ಳು ಹೇಳಿ ಮತ ಗಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
150 ಕೋಟಿ ಜನರ ನಾಯಕ ಮೋದಿಯವರನ್ನು 5 ಕೋಟಿ ಜನರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಹೇಳನ ಮಾಡುವುದನ್ನು ಖಂಡಿಸುವುದಾಗಿ ತಿಳಿಸಿದ ಅವರು ಈ ಬಾರಿ 400 ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದರು.
ಇಡೀ ವಿಶ್ವವೇ ಮೋದಿಯವರನ್ನು ಒಪ್ಪಿಕೊಂಡಿದೆ ಮತ್ತು ಮೆಚ್ಚಿಕೊಂಡಿದೆ. ಭಾರತ ದೇಶಕ್ಕೆ ಅವರಿಂದ ದೊಡ್ಡ ಕೀರ್ತಿ ಬಂದಿದೆ. ಆದರೆ ಕಾಂಗ್ರೆಸ್ಸಿಗರಿಗೆ ಮಾತ್ರ ಅವರ ಶಕ್ತಿ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಗೆ ಮೋದಿಯವರನ್ನು ಕಂಡರೆ ಭಯವಿದೆ ಎಂದು ವ್ಯಂಗ್ಯವಾಡಿದರು.
ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಡ ಅನುದಾನವನ್ನು ಬೇರೆಡೆ ಬಳಕೆ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಪರಿಶಿಷ್ಟರ ಬಗ್ಗೆ ಮಾತನಾಡುವ ಮತ್ತು ಕಾಳಜಿ ತೋರುವ ನೈತಿಕ ಹಕ್ಕಿಲ್ಲ ಎಂದು ಸುಬ್ರಮಣ್ಯ ಉಪಾಧ್ಯಾಯ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಭಾಗದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷಣ್ ಯಾರೆಂದೇ ಯಾರಿಗೂ ತಿಳಿದಿಲ್ಲ, ಕೊಡಗಿನಲ್ಲಿ ಮಾತ್ರ ಅವರು ಓಡಾಡುತ್ತಿದ್ದಾರೆ. ಅತ್ಯಂತ ಕಡಿಮೆ ಮತಗಳನ್ನು ಗಳಿಸುವ ಮೂಲಕ ಲಕ್ಷö್ಮಣ್ ಹೀನಾಯ ಸೋಲು ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಮತಗಳಿಕೆಗಾಗಿ ಆಮಿಷಗಳನ್ನು ಒಡ್ಡುತ್ತಿದೆ ಎಂದು ಆರೋಪಿಸಿದ ಅವರು, ಇದನ್ನು ತಡೆಯಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕ್ತಾರ ಬಿ.ಕೆ.ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್ ಹಾಗೂ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.








