ಮಡಿಕೇರಿ ಏ.22 NEWS DESK : ವಾಲ್ನೂರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದವರ ವಿರುದ್ಧ ಹೂಡಲಾಗಿರುವ ಐಪಿಸಿ 302, 307 ಕಲಂಗಳಡಿಯ ಕೇಸ್ ಗಳನ್ನು ವಾಪಾಸ್ ಪಡೆಯದಿದ್ದಲ್ಲಿ ಎಸ್ಪಿ ಕಚೇರಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಘಟಕ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಆಕಸ್ಮಿಕವಾಗಿ ನಡೆದ ಅಪಘಾತ ಪ್ರಕರಣದ ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನದಂತಹ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸುವ ಮೂಲಕ ಪೊಲೀಸ್ ಇಲಾಖೆ ದ್ವಿಮುಖ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.
ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಭಾನುವಾರ ಇದೇ ಮಾದರಿಯಲ್ಲಿ ಅಪಘಾತವೊಂದು ನಡೆದು ಕಾಸರಗೋಡಿನ ರಾಬಿಯ ಎಂಬ ಮಹಿಳೆ ಮೃತಪಟ್ಟು, ಉಳಿದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 302, 307 ಕಲಂಗಳಡಿಯ ಕೇಸ್ ಯಾಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯ ನೇಹ ಹತ್ಯೆ ಪ್ರಕರಣವನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ, ತಪ್ಪಿತಸ್ಥರಿಗೆ ಶಿಕ್ಷಯಾಗಬೇಕೆಂದು ಒತ್ತಾಯಿಸುತ್ತದೆ. ಆದರೆ ರಾಜಕೀಯ ಲಾಭಕ್ಕಾಗಿ ಈ ಘಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಪ್ರಧಾನಿಯಾದಿಯಾಗಿ ಎಲ್ಲಾ ಬಿಜೆಪಿಗರು ನೇಜಾರಿನ ತ್ರಿವಳಿ ಕೊಲೆ, ತುಮಕೂರಿನಲ್ಲಿ ನಡೆದ ಕೊಲೆಗಳು, ದಕ್ಷಿಣ ಕನ್ನಡದ ಸೌಜನ್ಯ ಪ್ರಕರಣದ ಬಗ್ಗೆ ಯಾಕೆ ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತಗಳಿಕೆಗಾಗಿ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಮೊದಲು ಬಿಡಲಿ ಎಂದು ಅಬ್ದುಲ್ ಅಡ್ಕರ್ ಒತ್ತಾಯಿಸಿದರು.
ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಷೀರ್ ಅಹಮ್ಮದ್ ಮಾತನಾಡಿ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನಡೆದಿರುವ ಅಪಘಾತ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ವಾಲ್ನೂರು ಮಾದರಿಯಲ್ಲೇ ಈ ಅಪಘಾತ ನಡೆದಿದ್ದರೂ ಪೊಲೀಸರು 302, 307 ಕಲಂಗಳಡಿಯ ಕೇಸ್ ದಾಖಲಿಸದೆ 304 ಮಾತ್ರ ಹಾಕಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕರ ಹಿಂಬಾಲಕರು ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕೆಲವು ನಾಯಕರುಗಳು ಘಟನೆ ನಡೆದಾಗ ಹಾದಿ ತಪ್ಪಿಸಿದ್ದೇ ಈ ರೀತಿ ಕೇಸ್ ದಾಖಲಿಸಿಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದರು.
ಸದಸ್ಯ ರಿಜ್ವಾನ್ ಮಡಿಕೇರಿ ಮಾತನಾಡಿ ಗದ್ದೆಹಳ್ಳ ಅಪಘಾತ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು ಮತ್ತು ಮೃತ ಮಹಿಳೆ ರಾಬಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯ ಉಸ್ಮಾನ್ ಸುಂಟಿಕೊಪ್ಪ ಉಪಸ್ಥಿತರಿದ್ದರು.








