
ಮಡಿಕೇರಿ ಜ.31 NEWS DESK : ವಿವಿಧ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡಬೇಕೆಂದು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಸರಕಾರವನ್ನು ಆಗ್ರಹಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಕೃತಿ ಸಿರಿಬಳಗ ಟ್ರಸ್ಟ್ನ ಟ್ರಸ್ಟಿ ಕೆ.ಎಂ.ಗಣೇಶ್ ಒಂದು ಕಾಲದಲ್ಲಿ ಕೊಡಗು ರಾಜ್ಯವಾಗಿತ್ತು. ಬಳಿಕ ವಿಶಾಲ ಕರ್ನಾಟಕದೊಂದಿಗೆ ವಿಲೀನವಾಗಿ ಜಿಲ್ಲೆಯಾಗಿ ಪರಿವರ್ತಿತವಾಯಿತು. ಇಂತಹ ಪುಟ್ಟ ಕೊಡಗು, ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ, ವಿಧಾನ ಪರಿಷತ್ತಿಗೆ ನಾಯಕರನ್ನು ನೀಡಿದ ಜಿಲ್ಲೆಯಾಗಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲ ಘಟ್ಟದಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಾಗಿತ್ತು. ನಂತರದ ವರ್ಷಗಳಲ್ಲಿ ಮೂರು ವಿಧಾನ ಸಭಾ ಕ್ಷೇತ್ರ ಎರಡಕ್ಕೆ ಇಳಿದು, ಕಳೆದ ಒಂದೂವರೆ ದಶಕಗಳಿಂದ ಜಿಲ್ಲೆಯ ಯಾವೊಬ್ಬ ಶಾಸಕರಿಗು ಸಚಿವ ಸ್ಥಾನವನ್ನು ಯಾವುದೇ ಸರ್ಕಾರ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲು ನಾವು ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನದೊಂದಿಗೆ ಉಸ್ತುವಾರಿ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಸಿದ್ದರು ಸ್ಪಂದನ ದೊರಕಿರಲಿಲ್ಲ. ಸ್ಥಳೀಯರೆ ಸಚಿವರು ಮತ್ತು ಉಸ್ತುವಾರಿ ಸಚಿವರಾದರೆ, ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನ ಪ್ರಯತ್ನಗಳನ್ನು ನಡೆಸಬಹುದೆಂದು ಕೆ.ಎಂ.ಗಣೇಶ್ ಅಭಿಪ್ರಾಯಿಸಿದರು. ಪ್ರಸ್ತುತ ಕೊಡಗು ಅತಿವೃಷ್ಠಿ ಸೇರಿದಂತೆ ಹಲವಾರು ಸಂಕಷ್ಟಗಳೊಂದಿಗೆ ಜನಾಂಗಗಳ ನಡುವಿನ ಭಿನ್ನಾಭಿಪ್ರಾಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಶಾಂತಿ ಮತ್ತು ಸೌಹಾರ್ಧಯುತ ವಾತಾವರಣ ನಿರ್ಮಿಸುವ ಜವಾಬ್ದಾರಿ ಹೊತ್ತವರು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಟೀಕಿಸಿದ ಅವರು, ಈ ಎಲ್ಲಾ ಕಾರಣಗಳ ಹಿನ್ನೆಲೆ ಕೊಡಗಿನ ನಮ್ಮೆಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈಗಿನ ರಾಜ್ಯ ಸರ್ಕಾರ ಸ್ಥಳೀಯ ಶಾಸಕರೊಬ್ಬರಿಗೆ ಸಚಿವ ಸ್ಥಾನದೊಂದಿಗೆ ಉಸ್ತುವಾರಿ ಜವಾಬ್ದಾರಿಯನ್ನು ನೀಡಬೇಕೆಂದು ಒತ್ತಾಯಿಸಿದರು. ಸಂಸ್ಕೃತಿ ಸಿರಿ ಬಳಗದ ಉಪಾಧ್ಯಕ್ಷರಾದ ಕೋಲೆಯಂಡ ನಿಶಾ ಮೋಹನ್ ಮಾತನಾಡಿ, ಬಳಗ ಕಳೆದ ಒಂದು ವರ್ಷದ ಹಿಂದೆ ರಚನೆಯಾಗಿದ್ದು, ಇದರ ಮೂಲ ಉದ್ದೇಶ ಈ ನೆಲದ ಸಂಸ್ಕೃತಿಯ ಸಂರಕ್ಷಣೆ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದೇ ಆಗಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಳಗದ ಖಜಾಂಚಿ ಕೂಡಂಡ ಸೀಮಾ ಕಾವೇರಪ್ಪ, ಸದಸ್ಯರಾದ ಡೆನ್ನಿ ಬರೋಸ್, ಸುಶೀಲಾ ಮಧು ಹಾಗೂ ಮಂಜುಳ ಶಿವಕುಮಾರ್ ಉಪಸ್ಥಿತರಿದ್ದರು.









