
ಕುಶಾಲನಗರ ಫೆ.6 NEWS DESK : ಕುಶಾಲನಗರ ಪಟ್ಟಣ ಹೃದಯ ಭಾಗದಲ್ಲಿ ನೆಲೆ ಕಂಡಿರುವ ಐತಿಹಾಸಿಕ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಹಿನ್ನಲೆಯಲ್ಲಿ ಭೂಮಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಫೆ.9 ಮತ್ತು 10 ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 6 ಕೋಟಿ ವೆಚ್ಚದಲ್ಲಿ ದೇವಾಲಯ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ ಫೆ. 9 ರಂದು ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರಣ,12 ಕಾಯಿ ಗಣ ಹೋಮ, ಮುಷ್ಠಿ ಕಾಣಿಕೆ ಸಮರ್ಪಣೆ, ನಂತರದಲ್ಲಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ರಾತ್ರಿ ಪ್ರೇತಾ ಆಕರ್ಷಣೆ ಉಚ್ಚಾಟನೆ, ಅಘೋರ ಬಲಿ ನಡೆಯಲಿದೆ. ಫೆ. 10 ರಂದು ಶತ ರುದ್ರಾಭಿಷೇಕ ಬೆಳಿಗ್ಗೆ 7 ರಿಂದ 10ವರೆಗೆ, ನವಗ್ರಹ ಸಹಿತ ಭೂವರಾಹ ಸ್ವಾಮಿ ಹೋಮ ಬೆಳಿಗ್ಗೆ 9 ರಿಂದ 11.30ವರೆಗೆ, ಮಧ್ಯಾಹ್ನ 12 ರಿಂದ 12.30 ಒಳಗೆ ನಡೆಯುವ ವೃಷಭ ಲಗ್ನ ಶುಭಾಂಶದಲ್ಲಿ ಭೂಮಿ ಪೂಜೆ ನೆರವೇರಲಿದೆ. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಅದೇ ದಿನ ಬೆಳಿಗ್ಗೆ 10.30 ಗಂಟೆಗೆ ಜೀರ್ಣೋದ್ಧಾರ ನಿಮಿತ್ತ ದೇವಸ್ಥಾನ ಆವರಣದಲ್ಲಿ ಭಕ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಮಹಾಶಯರು, ಕೊಡುಗೈ ದಾನಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು. ದೇವಾಲಯ ಆಡಳಿತ ಮಂಡಳಿಯ ಖಾಯಂ ಆಹ್ವಾನಿತರಾದ ಟಿ.ಆರ್.ಶರವಣಕುಮಾರ್ ಮಾತನಾಡಿ ನೂತನ ದೇವಾಲಯ ನಿರ್ಮಾಣ ಸಂಬಂಧ ಎಲ್ಲ ಭಕ್ತಾದಿಗಳ ಹಾಗೂ ದಾನಿಗಳ ಸಹಕಾರ ಕೋರಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ಚಂದ್ರು ಇದ್ದರು.










