
ಮಡಿಕೇರಿ ಫೆ.12 NEWS DESK : ಕಾವೇರಿ ನದಿ ಪಾತ್ರದ ನೆಲ್ಯಹುದಿಕೇರಿಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಬಡವರು, ಕೂಲಿ ಕಾರ್ಮಿಕರಿಗೆ ‘ಸ್ಮಶಾನ’ ಜಾಗವಿಲ್ಲದೆ, ಮೃತರ ಗೌರವಯುತ ಸಂಸ್ಕಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಮಶಾನ ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್.ಭರತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಮಲೆಯಾಳಿ, ತಮಿಳು ಬಾಂಧವರು, ವಿವಿಧ ಜಾತಿ ಜನಾಂಗದ ಬಡ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಸುಮಾರು ಹದಿನೈದು ಸಾವಿರ ಮಂದಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರ ಕುಟುಂಬದಲ್ಲಿ ಸಂಭವಿಸುವ ಯಾವುದೇ ‘ಸಾವು’ ತೀವ್ರ ಆತಂಕವನ್ನು ಹುಟ್ಟು ಹಾಕುತ್ತದೆ. ಕಾರಣ, ಮೃತ ವ್ಯಕ್ತಿಗೆ ಗೌರವಯುತವಾಗಿ ಸಂಸ್ಕಾರಗಳನ್ನು ಮಾಡುವ ವ್ಯವಸ್ಥೆ ಗ್ರಾಮದಲ್ಲಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ನದಿ ಪಾತ್ರದಲ್ಲಿ ಸುಮಾರು ಅರ್ಧ ಏಕರೆ ಜಾಗ ಸ್ಮಶಾನವಾಗಿ ಪ್ರಸ್ತುತ ಬಳಕೆಯಾಗುತ್ತಿದೆ. ವರ್ಷಂಪ್ರತಿ ಮಳೆಗಾಲದಲ್ಲಿ ಸ್ಮಶಾನದ ಜಾಗದ ಮಣ್ಣು ಕೊಚ್ಚಿ ಹೋಗುವುದರೊಂದಿಗೆ, ಅಲ್ಲಿ ದಫನ ಮಾಡಿದವರ ಅಸ್ಥಿಗಳು ನದಿಯಲ್ಲಿ ಕೊಚ್ಚಿ ಹೋಗುವ ಭೀಕರ ಸ್ಥಿತಿ ಇದೆ. ಲಭ್ಯ ಸಣ್ಣ ಜಾಗದಲ್ಲಿ ಮೃತ ವ್ಯಕ್ತಿಯನ್ನು ದಫನ ಮಾಡುವ ಹಂತದಲ್ಲಿ ಹಲವಾರು ಬಾರಿ, ಅದಾಗಲೆ ದಫನ ಮಾಡಲ್ಪಟ್ಟವರ ಅಸ್ಥಿಗಳು ಸಿಗುತ್ತವೆ ಮತ್ತು ಅದರ ಮೇಲೆಯೇ ಮತ್ತೆ ಸಂಸ್ಕಾರಾದಿಗಳನ್ನು ಮಾಡುವ ಶೋಚನೀಯ ಪರಿಸ್ಥಿತಿ ಇರುವುದಾಗಿ ಹೇಳಿದರು. ದಾಖಲೆಗಳನ್ನು ಈ ಹಿಂದೆ ಪರಿಶೀಲಿಸಿದಾಗ ಗ್ರಾಮ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆಂದು ಕಾಯ್ದಿರಿಸಿದ 1.08 ಏಕರೆ ಜಾಗ ಕಂಡು ಬಂದಿತ್ತು. ಆದರೆ, ಈ ಜಾಗವನ್ನು ಸ್ಮಶಾನವಾಗಿ ಪರಿವರ್ತಿಸಬಾರದು ಎಂದು ಪಂಚಾಯ್ತಿಯಾದಿಯಾಗಿ ಗ್ರಾಮದ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಬದಲಿ ಜಾಗವನ್ನು ಗುರುತಿಸಿ ಸ್ಮಶಾನಕ್ಕೆ ಒದಗಿಸಲು ನಾವು 3 ತಿಂಗಳ ಗಡುವನ್ನು ನೀಡಿದ್ದೆವು. ಅದರಂತೆ ಕಂದಾಯ ಇಲಾಖೆ ಬೆಟ್ಟದಕಾಡು ಎಂಬಲ್ಲಿ 1 ಏಕರೆ ಜಾಗವನ್ನು ಗುರುತಿಸಿದ್ದು, ಈ ಜಾಗ ಕೂಡ ಒತ್ತುವರಿಯಾಗಿದೆ ಎಂದು ಆರೋಪಿಸಿದರು. ನೆಲ್ಯಹುದಿಕೇರಿ ಗ್ರಾಮಸ್ಥರಿಗೆ ಈಗಾಗಲೆ ಸ್ಮಶಾನವೆಂದು ಗುರುತಿಸಲ್ಪಟ್ಟ ಜಾಗವನ್ನು ನೀಡಬೇಕು. ಇಲ್ಲವೆ, ಇದಕ್ಕೆ ಬದಲಿಯಾಗಿ ಕಂದಾಯ ಇಲಾಖೆ ಸೂಚಿಸಿರುವ ಜಾಗಕ್ಕೆ ಆರ್ಟಿಸಿ ಮಾಡಿ ನೀಡಬೇಕೆಂದು ಆಗ್ರಹಿಸಿದ ಭರತ್, ತಮ್ಮ ಬೇಡಿಕೆ ಈಡೇರಿಕೆಗೆ ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ ನೀಡಲಾಗುವುದು. ಇದಕ್ಕೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಮಾರ್ಚ್ ಅಂತ್ಯಕ್ಕೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸ್ಮಶಾನ ಹೋರಾಟ ಸಮಿತಿಯ ಪ್ರಮುಖರಾದ ಪಿ.ಜಿ.ಸುರೇಶ್, ಪಿ.ಬಿ.ಅಂತಪ್ಪ, ಟಿ.ಟಿ.ಉದಯಕುಮಾರ್ ಹಾಗೂ ಎನ್.ನಾರಾಯಣ ಉಪಸ್ಥಿತರಿದ್ದರು.









