

ಸುಂಟಿಕೊಪ್ಪ NEWS DESK ಜೂ.22 : ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಅಪಾರ ಬೆಳೆ ನಷ್ಟವಾಗಿದೆ. ಕಾಡಾನೆಗಳು ತೋಟಗಳಲ್ಲೇ ಬೀಡುಬಿಟ್ಟಿದ್ದು, ಕಾಫಿ, ಬಾಳೆ ಗಿಡ, ಕರಿಮೆಣಸು ಬಳ್ಳಿಗಳನ್ನು ನಾಶಪಡಿಸಿವೆ. ಎಮ್ಮೆಗುಂಡಿ ಗ್ರಾಮದ ಲೈನ್ ಮನೆ ಸಮೀಪ ಬೆಳೆದಿದ್ದ ಬಾಳೆ ಗಿಡಗಳನ್ನು ಕೂಡ ಧ್ವಂಸಗೊಳಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕಾರ್ಮಿಕರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಸುಂಟಿಕೊಪ್ಪದಿಂದ ಎಮ್ಮೆಗುಂಡಿ, ನಾಕೂರು ಶಿರಂಗಾಲ, ಮಳೂರು, ಕಾನ್ ಬೈಲ್, ಅಂದಗೋವೆ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ಸವಾರರು ಕೂಡ ಭಯದಿಂದ ಮುಂದೆ ಸಾಗಬೇಕಾಗಿದೆ. ವಿದ್ಯಾರ್ಥಿಗಳು ಕೂಡ ಆತಂಕವನ್ನು ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.








