



ವಿರಾಜಪೇಟೆ ಜೂ.23 NEWS DESK : ಸಂತ ಅನ್ನಮ್ಮ ಪಿ.ಯು.ಕಾಲೇಜು, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಸ್ನಾತಕೋತ್ತರ ವಿಭಾಗ, ಎನ್. ಎಸ್.ಎಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿ.ಯು.ಕಾಲೇಜು ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಯೋಗವು ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದೆ. ವಿಶ್ವಕ್ಕೆ ಭಾರತವು ನೀಡಿದ ಕೊಡುಗೆಯಾಗಿದೆ. ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ. ಇಂದಿನ ಯುವ ಜನತೆಯು ಮೊಬೈಲ್ ಗೀಳಿಗೆ ಬೀಳದೆ ಯೋಗವನ್ನು ತಮ್ಮ ಜೀವನದ ಒಂದು ಭಾಗ ಎಂಬುದಾಗಿ ಅಳವಡಿಸಿಕೊಳ್ಳಿ ಎಂದು ಕಿವಿಮಾತನ್ನು ಹೇಳಿದರು. ಆ ಮೂಲಕ ಆರೋಗ್ಯವಂತ ಪರಿಸರ ನಿರ್ಮಿಸಿ ಎಂದು ಹೇಳಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಯೋಗಾಭ್ಯಾಸವು ಸುಂದರ ಬದುಕಿಗೆ ಅತ್ಯಗತ್ಯವಾಗಿದೆ. ಅದರಲ್ಲಿಯೂ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಬೇಕು. ನಕಾರಾತ್ಮಕ ಚಿಂತನೆಗಳನ್ನು ತೊಡೆದು ಹಾಕಿ ಜೀವನದಲ್ಲಿ ಸಕಾರಾತ್ಮಕ ಚಿಂತನೆ ಮೂಡುವಂತೆ ಮಾಡಲು ಯೋಗದ ಪಾತ್ರ ಬಹಳಷ್ಟಿದೆ ಎಂದು ಹೇಳಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ.ರಾಜ ರೈ ನೇತೃತ್ವದಲ್ಲಿ ಯೋಗಾಭ್ಯಾಸವು ನಡೆಯಿತು. ಸರ್ವಂಗಾಸನ, ಆಲಸನ, ಪದ್ಮಾಸನ, ವಜ್ರಸಾನ, ಶಶಂಕಾಸನ, ತಾಡಸನ, ವೃಕ್ಷಾಸನ, ಮಕಾರಾಸನ, ಸೂರ್ಯ ನಮಸ್ಕಾರ ಇನ್ನೂ ಮುಂತಾದ ಯೋಗಾಭ್ಯಾಸವನ್ನು ಮಾಡಲಾಯಿತು. ಈ ಸಂದರ್ಭ ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಎನ್. ಎಸ್. ಎಸ್. ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಯುವ ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಪಿ.ಯು.ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಹೇಮಂತ್ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.









