
ಮಡಿಕೇರಿ NEWS DESK ಆ.6 : ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ರಾಜಕೀಯ ಪಕ್ಷಗಳು ಕೊಡಗು ಜಿಲ್ಲೆಯನ್ನು ಕಡೆಗಣಿಸುತ್ತಲೇ ಬಂದಿವೆ. ಪ್ರಸ್ತುತ ಅಧಿಕಾರದಲ್ಲಿರುವ ಸರಕಾರ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದೆ ಎಂದು ಕೊಡಗು ಗೌಡ ಹಿತ ರಕ್ಷಣಾ ವೇದಿಕೆ ವೇದಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಗೌರವಾಧ್ಯಕ್ಷ ಪಿ.ಎಲ್.ಸುರೇಶ್ ಅವರು ಚುನಾವಣೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟಲ್ಲಿ ಸಚಿವ ಸ್ಥಾನ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದರು. ಆದರೆ ಇದೀಗ ಭರವಸೆ ಹುಸಿಯಾಗಿದ್ದು, ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೊಡಗು ಕೇವಲ ಕಾವೇರಿ ನೀರನ್ನು ನೀಡುವ ಜಿಲ್ಲೆಯಷ್ಟೆ ಎಂದು ಪರಿಗಣಿಸಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನದಿಂದ ವಂಚಿಸಲಾಗುತ್ತಿದೆ. ಪುಟ್ಟ ಜಿಲ್ಲೆ ಕೊಡಗು ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ವಿವಾದವನ್ನು ಬಗೆಹರಿಸಲು ಇಲ್ಲಿಂದ ಹರಿದು ಹೋಗುವ ನೀರು ಹೆಚ್ಚು ಸಹಕಾರಿಯಾಗಿದೆ. ಆದರೂ ಕೊಡಗನ್ನು ಯಾವುದೇ ಪಕ್ಷಗಳು ವಿಶೇಷವಾಗಿ ಪರಿಗಣಿಸುತ್ತಿಲ್ಲ ಮತ್ತು ಕೊಡುಗೆಯನ್ನು ನೀಡುತ್ತಿಲ್ಲ. ಹೊರಗಿನವರಿಗಾಗಿ ಕೊಡಗಿನವರು ಅರಣ್ಯ ಮತ್ತು ನದಿ ಸಂರಕ್ಷಣೆ ಮಾಡಿ ಕಷ್ಟಪಡಬೇಕಾಗಿದೆ ಎಂದು ಆರೋಪಿಸಿದ ಅವರು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹೈಕಮಾಂಡ್ ಗಳ ನಿರ್ಲಕ್ಷ್ಯ ಮನೋಭಾವವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಈ ಬಾರಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗುವ ಆಶಾಭಾವನೆ ಎಲ್ಲರಲ್ಲಿ ಮೂಡಿತ್ತು, ಆದರೆ ನಿರಾಶೆ ಎದುರಾಗಿದೆ. ಹೊರಗಿನವರು ಜಿಲ್ಲಾ ಉಸ್ತುವಾರಿ ಸಚಿವರಾದರೆ ಜಿಲ್ಲೆಗೆ ಯಾವುದೇ ಪ್ರಯೋಜನವಿಲ. ಸ್ಥಳೀಯರೇ ಸಚಿವರಾಗಿದ್ದರೆ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿತ್ತು. ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಕೊಡಗಿನಲ್ಲಿ ಪ್ರತ್ಯೇಕತೆಯ ಕೂಗು ಏಳಬಹುದು ಎಂದು ಪಿ.ಎಲ್.ಸುರೇಶ್ ಎಚ್ಚರಿಕೆ ನೀಡಿದರು. ಸರಕಾರ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ವೇದಿಕೆಯ ಅಧ್ಯಕ್ಷ ಪರ್ಮಾಲೆ ಗಣೇಶ್ ಮಾತನಾಡಿ ಕಾವೇರಿ ತವರು ಕೊಡಗು ಜಿಲ್ಲೆಗೆ ಮೂರೂ ರಾಜಕೀಯ ಪಕ್ಷಗಳಿಂದ ಅನ್ಯಾಯವಾಗಿದೆ ಎಂದು ಟೀಕಿಸಿದರು. ಪ್ರಭಾವಿ ಶಾಸಕರಾಗಿರುವ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿದ್ದರೆ ಆನೆ, ಮಾನವ ಸಂಘರ್ಷ ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುತ್ತಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪೂಜಾರಿರ ಪ್ರದೀಪ್ ಕುಮಾರ್, ಖಜಾಂಚಿ ಪಟ್ಟಡ ದೀಪಕ್, ಸದಸ್ಯರಾದ ಡೆಮ್ಮಲೆ ರಿತಿನ್ ಹಾಗೂ ಕೊಂಬಾಡಿ ಮೋಹಿನಿ ಉಪಸ್ಥಿತರಿದ್ದರು.









