
ಮಡಿಕೇರಿ ಜು.2 NEWS DESK : ಪ್ರಸಕ್ತ 2025-26ನೇ ಸಾಲಿನಲ್ಲಿ ಜಿಲ್ಲೆಯ ಕೃಷಿಕರಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿ ಸಾಲ ವಿತರಣೆಗೆ ಯಾವುದೇ ಸಮಸ್ಯೆಗಳು ಇಲ್ಲವೆಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಬಿ.ಬಾಂಡ್ ಗಣಪತಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದ ಕೃಷಿ ಸಾಲದ ವಿತರಣೆಗಾಗಿ ರೈತರು ‘ಫ್ರ್ರೂಟ್ ತಂತ್ರಾಂಶ’ದ ಐಡಿಯನ್ನು ಪಡೆಯವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಸಂದರ್ಭ ಕೊಡಗಿನ ಜಮೀನುಗಳಲ್ಲಿನ ಜಂಟಿ, ಪೌತಿ ಖಾತೆ ಸೇರಿದಂತೆ ವಿವಿಧ ಭೂ ಹಿಡುವಳಿಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಸಾಲ ಸೌಲಭ್ಯವನ್ನು ಒದಗಿಸಿಕೊಂಡು ಬರಲಾಗುತ್ತಿದೆ ಎಂದರು. ಕಳೆದ 2024-25ನೇ ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ಮೂಲಕ 39,390 ರೈತರಿಗೆ 1066.47 ಕೋಟಿ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಇದರಲ್ಲಿ ಜಿಲ್ಲೆಯ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 36,756 ರೈತರಿಗೆ 830.32 ಕೊಟಿ ಅಲ್ಪಾವಧಿ ಬೆಳೆ ಸಾಲವನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಶೂನ್ಯ ಬಡ್ಡಿ ದರದ ಸಾಲ ವಿತರಣೆಗೆ ಸಂಬಂಧಿಸಿದಂತೆ ಕಳೆದ 2024-25ನೇ ಸಾಲಿನಲ್ಲಿ ನಬಾರ್ಡ್ನಿಂದ 105.39ಕೋಟಿ ಮಾತ್ರ ಪುನರ್ಧನ ಬಿಡುಗಡೆಯಾಗಿದೆ. ಸಹಕಾರ ಸಂಘಗಳಿಗೆ ನೀಡುವ ಅಲ್ಪಾವಧಿ ಕೃಷಿ ಸಾಲಕ್ಕೆ ನಬಾರ್ಡ್ನಿಂದ ಈ ಹಿಂದೆ ಶೇ.60 ರಷ್ಟು ರಿಯಾಯಿತಿ ಬಡ್ಡಿದರದಲ್ಲಿ ಪುನರ್ಧನ ನೀಡುತ್ತಿದ್ದು, ಇದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಒಟ್ಟು ಕೃಷಿಸಾಲದ ಪೈಕಿ ಶೇ.12.69 ರಷ್ಟು ಮಾತ್ರ ಪುನರ್ಧನ ಬಿಡುಗಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನ ಸ್ವಂತ ಬಂಡವಾಳದಿಂದ 363.58 ಕೋಟಿ ಮೊತ್ತವನ್ನು ಕೆಡಿಸಿಸಿ ಬ್ಯಾಂಕ್ ಸಾಲವಾಗಿ ಪಡೆದು ರೈತರಿಗೆ ಶೂನ್ಯ ಬಡ್ಡಿದರದ ಕೃಷಿ ಸಾಲವನ್ನು ವಿತರಿಸಲಾಗಿದೆ. ರೈತರ ಹಿತಕ್ಕೆ ಪೂರಕವಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದರು, ಸಾಲ ಸೌಲಭ್ಯದ ವಿಚಾರವಾಗಿ ಬ್ಯಾಂಕ್ನ ವಿರುದ್ಧದ ಆರೋಪಗಳನ್ನು ಖಂಡಿಸುವುದಾಗಿ ತಿಳಿಸಿದರು. ಪ್ರಸ್ತುತ ರೈತ ಬಾಂಧವರಿಗೆ ಎದುರಾಗಿರುವ ಸಮಸ್ಯೆಗಳಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಾರಣವಲ್ಲ. ಸ್ಥಳೀಯ ರೈತರು ಎದುರಿಸುತ್ತಿರುವ ಜಂಟಿ ಖಾತೆ, ಪೌತಿ ಖಾತೆ, ವಿವಿಧ ಟೆನ್ಯೂರ್ಗಳ ಸಮಸ್ಯೆಗಳ ಬಗೆಹರಿಕೆಗೆ ಸರ್ಕಾರ ಮುಂದಾಗಬೇಕು. ಕೊಡಗಿನಲ್ಲಿ ಕಂಡು ಬರುತ್ತಿರುವ ಈ ಸಮಸ್ಯೆಗಳ ಬಗೆಹರಿಕೆ ವಿಶೇಷ ಅಧಿಕಾರಿಯನ್ನು ನೇಮಿಸುವುದು ಸೂಕ್ತ ಎಂದರು. ಫ್ರೂಟ್ ಐಡಿಯನ್ನು ಪಡೆಯುವುದರೊಂದಿಗೆ, ಎಲ್ಲಾ ದಾಖಲೆಗಳ ನೋಂದಣಿಗೆ ಸರ್ಕಾರ ‘ಕಾವೇರಿ-2′ ತಂತ್ರಾಂಶವನ್ನು ಒದಗಿಸಿತ್ತು. ಆದರೆ, ಈ ತಂತ್ರಾಂಶದಲ್ಲಿ ವಾಣಿಜ್ಯ ಬೆಳೆ ಎನ್ನುವ ಕಾರಣಗಳ ಹಿನ್ನೆಲೆಯಲ್ಲಿ ‘ಕಾಫಿ’ ಬೆಳೆ ದಾಖಲಾಗುತ್ತಿಲ್ಲ. ಈ ಸಮಸ್ಯೆಗಳ ಬಗೆಹರಿಕೆಯ ಬಗ್ಗೆ ಬ್ಯಾಂಕ್ ಸರ್ಕಾರದೊಂದಿಗೆ ಅಗತ್ಯ ಪ್ರಯತ್ನಗಳನ್ನು ನಡೆಸಿದೆ. ಕೇಂದ್ರ್ರ ಸರ್ಕಾರ ಪ್ರತ್ಯೇಕವಾದ ಸಹಕಾರ ಸಚಿವಾಲಯವನ್ನು ರಚಿಸಿದೆ. ಈ ಸಚಿವಾಲಯವು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿನ ಸಹಕಾರ ಸಂಘಗಳಲ್ಲಿ ನೀಡಲಾಗುತ್ತಿರುವ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ‘ಏಕ ರೂಪದ ತಂತ್ರಜ್ಞಾನ’ ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಈಗಾಗಲೆ ಕರ್ನಾಟಕವನ್ನು ಒಳಗೊಂಡಂತೆ ಮತ್ತೆರಡು ರಾಜ್ಯಗಳನ್ನು ಒಳಗೊಂಡಂತೆ ಪೈಲಟ್ ಪ್ರಾಜೆಕ್ಟ್ ರೂಪಿಸಿ, ಇದರ ಅಳವಡಿಕೆಗೆ ಇದೇ 2025ರ ಡಿ.31 ನ್ನು ಅಂತಿಮ ದಿನಾಂಕವೆಂದು ಸೂಚಿಸಿದೆ. ಒಮ್ಮೆ ಈ ಏಕ ರೂಪದ ತಂತ್ರಜ್ಞಾನ ಅಳವಡಿಕೆಯಾದಲ್ಲಿ ಸಾಲ ಸೌಲಭ್ಯದ ವಿತರಣೆ, ಸಹಕಾರ ಸಂಘಗಳ ಆಡಿಟ್ ಎಲ್ಲವೂ ಆನ್ ಲೈನ್ನಲ್ಲಿ ನಡೆಯುತ್ತದೆ. ಆ ಸಂದರ್ಭ ಸಾಲ ಸೌಲಭ್ಯ ಹೊಂದಲು ಫ್ರೂಟ್ ತಂತ್ರಾಂಶ ಕಡ್ಡಾಯವಾಗುವುದಲ್ಲದೆ, ಸಿಂಗಲ್ ಆರ್ಟಿಸಿ, ಆಧಾರ್ ಸೇರಿದಂತೆ ಬೆಳೆಗಾರರು ಅಗತ್ಯ ದಾಖಲೆ ಒದಗಿಸಿ ಅದನ್ನು ತಂತ್ರಾಂಶದಲ್ಲಿ ಅಳವಡಿಸಿದರಷ್ಟೆ ಕೆಲಸ ಕಾರ್ಯ ನಡೆಯುತ್ತದೆ. ಆದರೆ, ಈ ಸಾಲಿನಲ್ಲಿ ಜಿಲ್ಲೆಯ ಬೆಳೆಗಾರರಿಗೆ ಸಾಲ ಸೌಲಭ್ಯ ವಿತರಿಸಲು ಯಾವುದೇ ಸಮಸ್ಯೆಗಳು ಇಲ್ಲವೆಂದು ಗಣಪತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಗಳಾದ ಶರವಣ ಕುಶಾಲನಗರ, ಕಿಲನ್ ಗಣಪತಿ, ಹೆಚ್.ಕೆ.ಮಾದಪ್ಪ ಹಾಗೂ ಹೊಸೂರು ಸತೀಶ್ ಕುಮಾರ್ ಉಪಸ್ಥಿತರಿದ್ದರು.









