
ಮಡಿಕೇರಿ ಜು.3 NEWS DESK : ಕೊಡಗು ಜಿಲ್ಲೆಯ ವಿವಿಧ ಗ್ರಾ.ಪಂ ವ್ಯಾಪ್ತಿಯ ಸಂತೆಗಳಲ್ಲಿ ಅಸ್ಸಾಂ ನವರು ಹಾಗೂ ಅಸ್ಸಾಂ ಜನರೆಂದು ಹೇಳಿಕೊಳ್ಳುತ್ತಿರುವ ಅಪರಿಚಿತರು ವ್ಯಾಪಾರ ಮಾಡುತ್ತಿದ್ದು, ಈ ಬೆಳವಣಿಗೆ ವಿರುದ್ಧ ಗ್ರಾ.ಪಂ ಗಳು ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆರಂಭದಲ್ಲಿ ಕಾರ್ಮಿಕರ ಹೆಸರಿನಲ್ಲಿ ಕೊಡಗು ಜಿಲ್ಲೆಯನ್ನು ಪ್ರವೇಶಿಸಿದ ಅಸ್ಸಾಂ ನವರು ಎಂದು ಹೇಳಿಕೊಳ್ಳುತ್ತಿರುವ ಜನರು ಇಂದು ವ್ಯಾಪಾರಿಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ಮನೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿರುವ ಅಪರಿಚಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಕೊಡಗಿನ ವ್ಯಾಪಾರ ಕ್ಷೇತ್ರದಲ್ಲಿ ಆತಂಕವನ್ನು ಮೂಡಿಸಿದ್ದು, ಗ್ರಾಹಕರು ಕೂಡ ಎಚ್ಚೆತ್ತುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕಾರ್ಮಿಕರಾಗಿ ಬಂದವರು ವ್ಯಾಪಾರಿಗಳಾಗಿ ಪರಿವರ್ತನೆಯಾದ ಹಿಂದಿನ ಮರ್ಮವೇನು ಮತ್ತು ಇವರಿಗೆ ಹಣ ಹಾಗೂ ಸಾಮಾಗ್ರಿಗಳನ್ನು ನೀಡುತ್ತಿರುವವರು ಯಾರು ಎನ್ನುವ ವಿಚಾರ ಬಹಿರಂಗಗೊಳ್ಳಬೇಕಾಗಿದೆ. ಗ್ರಾ.ಪಂ, ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆ ಈ ಬಗ್ಗೆ ಹೆಚ್ಚು ನಿಗಾ ವಹಿಸುವ ಅಗತ್ಯವಿದೆ. ಸ್ಥಳೀಯರೇ ಬಂಡವಾಳ ಹಾಕಿ ಅಸ್ಸಾಂ ಅಪರಿಚಿತರನ್ನು ಮಾರಾಟಗಾರರನ್ನಾಗಿ ನಿಯೋಜಿಸಿಕೊಂಡಿದ್ದರೆ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಾರಿಗಳ ಸೋಗಿನ ಅಪರಿಚಿತರಿಂದ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಸ್ಸಾಂ ಜನರ ಹೆಸರಿನಲ್ಲಿ ಬಾಂಗ್ಲಾ ನುಸುಳುಕೋರರು ಕಾರ್ಮಿಕರ ರೂಪದಲ್ಲಿ ಕೊಡಗು ಜಿಲ್ಲೆಗೆ ಬಂದಿರುವ ಶಂಕೆ ಇದೆ. ವಲಸೆ ಕಾರ್ಮಿಕರು ಕಾಫಿನಾಡು ಕೊಡಗಿಗೆ ಅನಿವಾರ್ಯವಾಗಿರುವುದರಿಂದ ಬೆಳೆಗಾರರ ಹಿತ ಕಾಯಲು ಈಗಾಗಲೇ ಕಾರ್ಮಿಕರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ನೀಡುವಂತೆ ಪೊಲೀಸ್ ಅಧಿಕಾರಿಗಳು ಬೆಳೆಗಾರರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಬಹುತೇಕ ಬೆಳೆಗಾರರು ವಲಸೆ ಕಾರ್ಮಿಕರು ಬಂದಾಗ ಅವರ ಮಾಹಿತಿಯನ್ನು ಪೊಲೀಸ್ ಠಾಣೆಗೆ ಒದಗಿಸುತ್ತಿದ್ದಾರೆ. ಆದರೆ ವ್ಯಾಪಾರಿಗಳ ರೂಪದಲ್ಲಿ ಸಂತೆಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಅಪರಿಚಿತರ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ಬೇಕಾಗಿದೆ. ಯಾರೇ ವ್ಯಾಪಾರ ಮಾಡಿದರೂ ಗ್ರಾ.ಪಂ ಯಿಂದ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ. ಅಸ್ಸಾಂ ಜನರ ಹೆಸರಿನ ಅಪರಿಚಿತರು ಯಾರ ಅನುಮತಿ ಪಡೆದು ವ್ಯಾಪಾರ ಮಾಡುತ್ತಿದ್ದಾರೆ ಎನ್ನುವ ಬಗ್ಗೆಯೂ ಸ್ಪಷ್ಟನೆ ಬೇಕಾಗುತ್ತದೆ. ಪರವಾನಗಿ ನೀಡುವ ಸಂದರ್ಭ ವ್ಯಾಪಾರ ಮಾಡುವವರ ಆಧಾರ್ ಕಾರ್ಡ್, ವಾಸ ದೃಢೀಕರಣ ಪತ್ರ, ಸ್ವಂತ ಊರಿನ ಮೂಲದ ಕುರಿತು ದಾಖಲೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ದಾಖಲೆಗಳ ಪ್ರತಿಯನ್ನು ಗ್ರಾ.ಪಂ ಗಳು ಪಡೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಗ್ರಾ.ಪಂ ಗಳಿಗೆ ಜಿಲ್ಲಾಡಳಿತ ಹಾಗೂ ಜಿ.ಪಂ ಸ್ಪಷ್ಟ ನಿರ್ದೇಶನವನ್ನು ನೀಡಬೇಕು. ಇದೀಗ ಜಿಲ್ಲೆಯ ವಿವಿಧೆಡೆ ವ್ಯಾಪಾರ ನಡೆಸುತ್ತಿರುವ ಅಸ್ಸಾಂ ಜನರು ಹಾಗೂ ಅಸ್ಸಾಂ ನವರೆಂದು ಹೇಳಿಕೊಳ್ಳುತ್ತಿರುವ ಅಪರಿಚಿತರ ಕುರಿತು ಗ್ರಾ.ಪಂ ಗಳು ಪೊಲೀಸರ ಸಹಕಾರ ಪಡೆದು ಮಾಹಿತಿ ಸಂಗ್ರಹಿಸಬೇಕು ಮತ್ತು ದಾಖಲೆಗಳನ್ನು ಪರಿಶೀಲಿಸಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಯಾವುದೇ ದಾಖಲೆಗಳ ಆಧಾರವಿಲ್ಲದೆ ಗ್ರಾಮಗಳಿಗೆ ಬಂದ ಅಪರಿಚಿತರಿಗೆಲ್ಲ ಸಂತೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದರೆ ಮುಂದೊಂದು ದಿನ ಕೊಡಗು ಜಿಲ್ಲೆಗೆ ತಿರುಗುಬಾಣವಾಗುವ ಸಾಧ್ಯತೆಗಳಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.









