
ಗೋಣಿಕೊಪ್ಪ ಜು.4 NEWS DESK : ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಮಳೆಯಿಂದ ಉಂಟಾಗಬಹುದಾದ ಅನಾಹುತವನ್ನು ಎದುರಿಸಲು ಪೊಲೀಸರೊಂದಿಗೆ ಸ್ವಯಂಸೇವಕರು ಸಹ ಕೈಜೋಡಿಸಬೇಕು ಎಂದು ವಿರಾಜಪೇಟೆ ತಾಲ್ಲೂಕು ಡಿವೈಎಸ್ಪಿ ಮಹೇಶ್ಕುಮಾರ್ ಕರೆ ನೀಡಿದರು. ಗೋಣಿಕೊಪ್ಪ ಕೂರ್ಗ್ ಇಂಟರ್ನ್ಯಾಷನ್ ಸಭಾಂಗಣದಲ್ಲಿ ನಡೆದ ಪೊಲೀಸ್ ಠಾಣೆ ಮತ್ತು ಗ್ರಾಮ ಬೀಟ್ ವ್ಯಾಪ್ತಿಯ ಸ್ವಯಂಸೇವಕರ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಮೇ ತಿಂಗಳಲ್ಲಿ ಮಳೆ ಪ್ರಾರಂಭವಾಗಿ ಆಂತಕ್ಕವನ್ನು ಸೃಷ್ಟಿಸಿದೆ, ಮುಂದುವರೆದ ಭಾಗವಾಗಿ ಜುಲೈ ತಿಂಗಳಲ್ಲಿಯೂ ಮಳೆಯ ಪ್ರಮಾಣ ಅಧಿಕವಾಗಬಹುದು, ಈ ಹಿನ್ನೆಲೆ ಹೆಚ್ಚು ಅನಾಹುತಗಳು ಸಂಭವಿಸಬಹುದಾದ ಸಾಧ್ಯತೆಗಳಿದ್ದು, ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಮುನ್ನೆಚ್ಚರಿಕೆಯ ಕ್ರಮ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಪೊಲೀಸರ ಈ ಕಾರ್ಯಕ್ಕೆ ಸಹಕಾರವಾಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಯಂಸೇವಕರು ಸಹಕಾರದ ಮನೋಭಾವವನ್ನು ವ್ಯಕ್ತಪಡಿಸಿ ಧೈರ್ಯ ಸೌರ್ಯದಿಂದ ಮೆರೆಯಬೇಕು ಎಂದು ಮನವಿ ಮಾಡಿದರು. ಗೋಣಿಕೊಪ್ಪ ವ್ಯಾಪ್ತಿಯಲ್ಲಿ, ಸಾಕಷ್ಟು ಹಳೆಯ ಕಟ್ಟಡಗಳು ಇವೆ ಅವುಗಳು ಶಿಥಿಲಗೊಂಡು ಆತಂಕಕಾರಿ ಬೆಳವಣಿಗೆಯಲ್ಲಿದೆ. ಈ ವಿಚಾರವಾಗಿ ಸ್ವಯಂಸೇವಕರು ಮುಂಜಾಗೃತರಾಗಬೇಕು ಎಂದು ಕರೆ ನೀಡಿದರು. ಪ್ರಾಕೃತಿ ವಿಕೋಪದ ತುರ್ತು ಸಂದರ್ಭ ಸಾರ್ವಜನಿಕ ರಕ್ಷಣೆಗೆ ಸಿದ್ದರಾಗುವ ಸ್ವಯಂಸೇವಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಸೂಕ್ತ ಸಲಹೆಗಳನ್ನು ಸ್ವಯಂಸೇವಕರಿಂದ ಪಡೆಯಲಾಯಿತು. ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘಟನೆಯ ಸ್ವಯಂಸೇವಕರು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕ ಸೇವೆ ಮಾಡಲು ಇಚ್ಚಿಸುವವರು ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ ತಮ್ಮ ಹೆಸರು ದೂರವಾಣಿ ಸಂಖ್ಯೆ ನೀಡುವಂತೆ ಮನವಿ ಮಾಡಿದರು. ವಲಸೆ ಕಾರ್ಮಿಕರಿಂದ ದಾಂಧಲೆ :: ಇತ್ತೀಚಿನ ಬೆಳವಣಿಗೆಯಲ್ಲಿ ವಲಸೆ ಕಾರ್ಮಿಕರ ದಾಂಧಲೆ ಹೆಚ್ಚಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ತೋಟದ ಮಾಲೀಕರು ಪೊಲೀಸರಿಗೆ ಸಹಕಾರ ನೀಡಬೇಕಾಗಿದೆ. ತಮ್ಮಲ್ಲಿಗೆ ಕಾರ್ಮಿಕರಾಗಿ ಬರುವವರ ದಾಖಲಾತಿಗಳನ್ನು ಠಾಣೆಗಳಿಗೆ ನೀಡುವ ಮೂಲಕ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸುವ ಪ್ರಯತ್ನ ಮಾಡಬೇಕಾಗಿದೆ. ಗ್ರಾಮ ವ್ಯಾಪ್ತಿಯ ಸ್ವಯಂ ಸೇವಕರು ವಲಸೆ ಕಾರ್ಮಿಕರು ಕಂಡು ಬಂದಾಗ ಮತ್ತು ಅವರ ಮಾಲೀಕರ ವಿಚಾರ ತಿಳಿದು ಬಂದಾಗ ಅವರಿಗೆ ಕಾರ್ಮಿಕರಿಂದ ನಡೆಯುತ್ತಿರುವ ಅನಾಹುತಗಳ ಬಗ್ಗೆ ಎಚ್ಚರಿಸಿ, ಸ್ಥಳಿಯ ಪೊಲೀಸ್ ಠಾಣೆಗೆ ಕಾರ್ಮಿಕರ ಪೂರ್ಣ ದಾಖಲೆ ನೀಡುವಂತೆ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್, ಠಾಣಾಧಿಕಾರಿ ಬಿ.ಕೆ.ಪ್ರದೀಪ್ ಕುಮಾರ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ಅಪ್ಜಲ್ ಸೇರಿದಂತೆ ವಿವಿಧ ಸಂಘಟನೆಯ ಸ್ವಯಂಸೇವಕರು ಸಭೆಯಲ್ಲಿ ಪಾಲ್ಗೊಂಡಿದ್ದರು.







