

ಸುಂಟಿಕೊಪ್ಪ ಜು.5 NEWS DESK : ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗುತ್ತಿದ್ದು, ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು. ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ಅತೀವ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ವರದಿಯನುಸಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚುಮಳೆಯಾದ ಹಿನ್ನಲೆ ಭೂಮಿಯು ಸಡಿಲತೆಗೊಳ್ಳುತ್ತದೆ ಇಂತಹ ಸಂದರ್ಭಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡದೆ ಅಪತ್ತು ಸಂಭವಿಸಿದ ಸ್ಥಳದ ತುರ್ತು ಮಾಹಿತಿಯನ್ನು ಸಂಬಂಧಿಸಿದ ಇಲಾಖೆ ರವಾನಿಸಿ ತಮ್ಮಿಂದಾಗುವ ಅಮೂಲ್ಯ ಜೀವಗಳ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಈ ವ್ಯಾಪ್ತಿಯಲ್ಲಿ ಹಲವಷ್ಟು ಕುಗ್ರಾಮಗಳನ್ನು ಹೊಂದಿರುವ ಕೇಂದ್ರವಾಗಿದೆ ಈ ಹಿಂದೆಯು ಹಲವು ಕಹಿಘಟನೆಗಳು ಸಂಭವಿಸಿರುವುದನ್ನು ಮೆಲುಕು ಹಾಕುವ ಮೂಲಕ ತುರ್ತು ಸಂದರ್ಭದಲ್ಲಿ ಬರೆ ಕುಸಿತ, ರಸ್ತೆಗೆ ಮರಗಳು ಉರುಳಿದ ಸಂದರ್ಭ ಕೂಡಲೇ ರಕ್ಷಣಾ ಕಾರ್ಯಕ್ಕೆ ಧಾವಿಸಲು ಜೆಸಿಬಿ, ಕ್ರೇನ್ ಮಾಲೀಕರು ಮತ್ತು ಆಪರೇಟರ್ಗಳು, ಆಂಬುಲೆನ್ಸ್ ಮತ್ತು ಅವುಗಳ ಚಾಲಕರು ಮತ್ತು ಮಾಲೀಕರು ಮತ್ತು ಲಭ್ಯವಿರುವ ವುಡ್ ಕಟ್ಟರ್ಗಳ ಮಾಲೀಕರುಗಳು. ಸ್ವಯ ಸೇವಾ ಸಂಘಗಳು, ಮುಖಂಡರುಗಳು ತಮ್ಮೊಂದಿಗೆ ಸಹಕಾರಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು. ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್ಕುಮಾರ್ ಮಾತನಾಡಿ, ಅಪಾಯದ ಅಂಚಿನಲ್ಲಿರುವ ಸ್ಥಳಗಳ ಮಾಹಿತಿ ನೀಡುವಂತೆ ಸೂಚಿಸಿದರಲ್ಲದೆ ತಾವುಗಳು ಸಲ್ಲಿಸಿದ ಮನವಿಯನ್ನು ಸರಕಾರಕ್ಕೂ ಜಿಲ್ಲಾಡಳಿತಕ್ಕೆ ಕಳುಹಿಸುವ ಇದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲಾಗುವುದೆಂದು ಅವರು ಹೇಳಿದರು. ಇದೇ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ರಫೀಕ್ಖಾನ್, ಶಬ್ಬೀರ್, ಬಿ.ಕೆ.ಪ್ರಶಾಂತ್ ಅವರುಗಳು ಮಾತನಾಡಿ, ಸುಂಟಿಕೊಪ್ಪ ಪಟ್ಟಣದ ಪಂಪ್ ಬಡಾವಣೆಯು ಅಪಾಯದ ಅಂಚಿನಲ್ಲಿದ್ದು, ಈ ಭಾಗದಲ್ಲಿ ನೂರಾರು ಕುಟುಂಬವು ವಾಸಿಸುತ್ತಿದ್ದಾರೆ. ಅಪಾಯದ ಅಂಚಿನಲ್ಲಿರುವ ಸ್ಥಳದಲ್ಲೇ ಅಂಗನವಾಡಿ ಕೇಂದ್ರ ಕಾರ್ಯಚರಿಸುತ್ತಿದೆ ಮುಂದೆ ಅನಾಹುತ ಸಂಭವಿಸುವ ಮುನ್ನ ಇದಕ್ಕೆ ಸೂಕ್ತ ರೀತಿಯ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಿದರು. ಸಭೆಯಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಅಧ್ಯಕ್ಷ ಪಿ.ಆರ್.ಸುನಿಕುಮಾರ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಮಾತನಾಡಿದರು. ಸಭೆಯಲ್ಲಿ ಕಂದಾಯ ಇಲಾಖೆ ಗ್ರಾವi ಆಡಳಿತಾಧಿಕಾರಿ ಉಮೇಶ್, ಚೆಸ್ಕಾಂ, ಶಿಕ್ಷಣ ಇಲಾಖೆ, ಪೊಲೀಸ್ ಸಿಬ್ಬಂದಿಗಳು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








