
ಮಡಿಕೇರಿ
NEWS DESK ಜು.9 : ಕೊಡಗು ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್ ಗಳನ್ನು ತಕ್ಷಣ ನೆಲಸಮಗೊಳಿಸಬೇಕೆಂದು ಎನ್ವಿರಾನ್ಮೆಂಟ್ ಐಂಡ್ ಹೆಲ್ತ್ ಫೌಂಡೇಶನ್ ಸಂಸ್ಥೆ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ವಿರಾನ್ಮೆಂಟ್ ಐಂಡ್ ಹೆಲ್ತ್ ಫೌಂಡೇಶನ್ ನ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಪಿ.ಮುತ್ತಣ್ಣ ಅವರು ಜಿಲ್ಲೆಯ ವಿವಿಧೆಡೆ ಅಕ್ರಮ ರೆಸಾರ್ಟ್ ಗಳು ತಲೆ ಎತ್ತಿದ್ದು, ಭೂಕುಸಿತ ಪ್ರದೇಶಗಳಲ್ಲಿ ಅಪಾಯವನ್ನು ಎದುರಿಸುತ್ತಿವೆ. ಒಂದು ವೇಳೆ ಭೂಕುಸಿತ ಉಂಟಾಗಿ ರೆಸಾರ್ಟ್ಗಳು ಹಾನಿಗೀಡಾದರೆ ಇವುಗಳಲ್ಲಿ ತಂಗಿರುವ ಪ್ರವಾಸಿಗರು ಹಾಗೂ ಉದ್ಯೋಗಿಗಳು ಸಾವಿಗೀಡಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಅನ್ವಯ ಕೊಡಗಿನಲ್ಲಿ ತೋಟ, ಜಮ್ಮಾ, ಬಾಣೆ ಮತ್ತು ಜೌಗು ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ 2018ರಲ್ಲಿ ಕೊಡಗಿನ ಬೆಟ್ಟ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳ ನಂತರ, ಕರ್ನಾಟಕ ಸರ್ಕಾರವು 2020 ಜೂನ್ 4ರಂದು ಕೊಡಗಿನಲ್ಲಿ ವಾಣಿಜ್ಯ ಭೂ ಪರಿವರ್ತನೆಗಾಗಿ ಯಾವುದೇ ಅರ್ಜಿಯನ್ನು ಪರಿಶೀಲಿಸಲು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಅಂತಹ ಪರಿವರ್ತನೆಗಳಿಗೆ ಅನುಮತಿ ನಿರಾಕರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸುವ ಆದೇಶವನ್ನು ಹೊರಡಿಸಿತು. ಸರ್ಕಾರ ಆದೇಶ ಹೊರಡಿಸಿದ ನಂತರವೂ ಇದನ್ನು ಉಲ್ಲಂಘಿಸಿ ಕೊಡಗಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರೆಸಾರ್ಟ್ಗಳು ತಲೆ ಎತ್ತಿರುವುದು ಕಂಡು ಬಂದಿದೆ. ಬಿಳಿಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿಗಿರಿ ಗ್ರಾಮದಲ್ಲಿ, ಮಕ್ಕಂದೂರು ಗ್ರಾ.ಪಂ ವ್ಯಾಪ್ತಿಯ ಹಾಲೇರಿ ಗ್ರಾಮದಲ್ಲಿ, ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಮೋದೂರು ಗ್ರಾಮದಲ್ಲಿ ಮತ್ತು ಮಡಿಕೇರಿ ಸಮೀಪ ಗಾಳಿಬೀಡು ಗ್ರಾಮದಲ್ಲಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಮಳೆಗಾಲದಲ್ಲಿ ಅಥವಾ ನಂತರದ ಮಳೆಗಾಲದಲ್ಲಿ ರೆಸಾರ್ಟ್ ಗಳು ಭೂಕುಸಿತದಿಂದ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಇದರಿಂದ ರೆಸಾರ್ಟ್ ಗಳಲ್ಲಿ ವಾಸಿಸುವ ಅತಿಥಿಗಳು, ಕೆಲಸ ಮಾಡುವ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಜೀವಕ್ಕೆ ಕೂಡ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲಾಡಳಿತ ತುರ್ತಾಗಿ ಅಕ್ರಮ ರೆಸಾರ್ಟ್ ಪ್ರಕರಣವನ್ನು ತನಿಖೆಗೆ ಒಳಪಡಿಸಿ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರೆಸಾರ್ಟ್ಗಳನ್ನು ನೆಲಸಮಗೊಳಿಸಬೇಕು ಎಂದು ಕರ್ನಲ್ ಸಿ.ಪಿ.ಮುತ್ತಣ್ಣ ಒತ್ತಾಯಿಸಿದರು. ಮಕ್ಕಂದೂರಿನಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್ ಕುರಿತು ಮಾಹಿತಿ ಹಕ್ಕು ನಿಯಮದಡಿ ಜಿಲ್ಲಾಡಳಿತದಿಂದ ಮಾಹಿತಿ ಬಯಸಲಾಗಿತ್ತು. ಇಲ್ಲಿ ರೆಸಾರ್ಟ್ ನಿರ್ಮಿಸಲು ಯಾರೂ ಅನುಮತಿ ನೀಡಿಲ್ಲವೆಂದು ಉತ್ತರ ದೊರೆತ್ತಿದೆ. ಅಕ್ರಮ ರೆಸಾರ್ಟ್ ಗಳ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದಾಗ ತಮಗೇನು ತಿಳಿದಿಲ್ಲವೆಂದು ಹೇಳಿದ್ದು, ಇದು ಆಶ್ಚರ್ಯಕ್ಕೆ ಕಾರಣವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಕರ್ನಾಟಕ ಭೂಕಂದಾಯ ಕಾಯ್ದೆಯ ಉಲ್ಲಂಘನೆ ಮತ್ತು ಅಕ್ರಮ ರೆಸಾರ್ಟ್ ಗಳ ನಿರ್ಮಾಣದ ವಿರುದ್ಧ ತಾವು ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು. ಕರ್ನಾಟಕ ಭೂಕಂದಾಯ ಕಾಯ್ದೆಯನ್ನು ಉಲ್ಲಂಘಿಸಿ ಭೂಪರಿವರ್ತನೆ ಮಾಡುತ್ತಿರುವ ಜಿಲ್ಲಾಡಳಿತದ ಕ್ರಮದ ವಿರುದ್ಧ ಈಗಾಗಲೇ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿದಿದೆ. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಹೊರ ಬೀಳಲಿದೆ ಎಂದರು. ಅಕ್ರಮ ಭೂಪರಿವರ್ತನೆ ಮತ್ತು ರೆಸಾರ್ಟ್ಗಳ ವಿರುದ್ಧ ಅಖಿಲ ಕೊಡವ ಸಮಾಜ, ಗೌಡ ಸಮಾಜ ಸೇರಿದಂತೆ ಎಲ್ಲಾ ಜನಾಂಗಗಳು ಹಾಗೂ ಸಂಘ, ಸಂಸ್ಥೆಗಳು ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ ಎಂದು ಕರ್ನಲ್ ಚೆಪುö್ಪಡಿರ ಪಿ.ಮುತ್ತಣ್ಣ ಹೇಳಿದರು. ಸಮಾಜ ಸೇವಕ ಗೋಪಿನಾಥ್ ವೈ.ಡಿ ಮಾತನಾಡಿ ಅಕ್ರಮ ರೆಸಾರ್ಟ್ ಗಳ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕರಾದಿಯಾಗಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಗ್ರಾಮಸ್ಥರ ಸಹಿ ಇರುವ ದೂರನ್ನು ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾರಿಂದಲೂ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲವೆಂದು ಆರೋಪಿಸಿದರು. ಸೋಮವಾರಪೇಟೆ ತಾಲ್ಲೂಕಿನ ನೈಸರ್ಗಿಕ ಸೌಂದರ್ಯದ ಮಕ್ಕಳ ಗುಡಿಬೆಟ್ಟ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಗ್ರಾಮಕ್ಕೆ ಅಪಾಯವಿದೆ. ರೆಡ್ ಅಲರ್ಟ್ ಸಂದರ್ಭ ಈ ಭಾಗದಲ್ಲಿರುವ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ಆದರೆ ಗ್ರಾಮಸ್ಥರ ವಿರೋಧದ ನಡುವೆ ತಲೆ ಎತ್ತಿರುವ ರೆಸಾರ್ಟ್ಗೆ ಯಾವುದೇ ನೋಟಿಸ್ ನೀಡುತ್ತಿಲ್ಲ ಮತ್ತು ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂ ಸಭೆಗಳಲ್ಲಿ ರೆಸಾರ್ಟ್ ಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಹೊರಗಿನ ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಜಿಲ್ಲೆಯ ವಿವಿಧೆಡೆ ಅಕ್ರಮ ರೆಸಾರ್ಟ್ ಗಳು ನಿರ್ಮಾಣಗೊಳ್ಳುತ್ತಿವೆ, ಮರಗಳು ಹನನವಾಗುತ್ತಿವೆ, ನಿಷೇಧವಿದ್ದರೂ ಭಾರೀ ಭಾರದ ವಾಹನಗಳು ರೆಸಾರ್ಟ್ ಕಾಮಗಾರಿಗಾಗಿ ಸಂಚರಿಸುತ್ತಿವೆ ಎಂದು ಗೋಪಿನಾಥ್ ವೈ.ಡಿ ಗಮನ ಸೆಳೆದರು. ಕಿರಗಂದೂರು ಗ್ರಾಮಸ್ಥರು ಮಾತನಾಡಿ ಕರ್ನಾಟಕ ಭೂಕಂದಾಯ ಕಾಯ್ದೆಯ ಉಲ್ಲಂಘನೆ ಮತ್ತು ಅಕ್ರಮ ರೆಸಾರ್ಟ್ ಗಳ ನಿರ್ಮಾಣದ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕಿರಗಂದೂರು ಗ್ರಾಮಾಡಳಿತ ಮಂಡಳಿಯ ಅಧ್ಯಕ್ಷ ಸಿ.ಕೆ.ಚಿದಾನಂದ, ಕಾರ್ಯದರ್ಶಿ ಬಿ.ಬಿ.ರಶಿನ್ ಕುಮಾರ್, ಗ್ರಾಮಸ್ಥರಾದ ನಿತಿನ್ ಕೆ.ಜಿ ಹಾಗೂ ಗಿರೀಶ್ ಎಸ್.ಸಿ ಉಪಸ್ಥಿತರಿದ್ದರು.

