
ಮಡಿಕೇರಿ NEWS DESK ಜು.16 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಇನ್ನು ಕೇವಲ ಎರಡೂವರೆ ತಿಂಗಳು ಮಾತ್ರ ಬಾಕಿ ಉಳಿದಿದ್ದು, ಶೀಘ್ರ ನೂತನ ಮಡಿಕೇರಿ ದಸರಾ ಸಮಿತಿಯನ್ನು ರಚಿಸಬೇಕೆಂದು ದಶಮಂಟಪ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಂ.ರಾಜೇಶ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿವರ್ಷ ತರಾತುರಿಯಲ್ಲಿ ಸಮಿತಿ ರಚನೆ ಮಾಡುವುದರಿಂದ ಮತ್ತು ಸಭೆ ನಡೆಸುವುದರಿಂದ ಗೊಂದಲಗಳು ಏರ್ಪಡುತ್ತಿತ್ತು. ಈ ಬಾರಿ ದಸರಾ ಹಬ್ವನ್ನು ಸುಸೂತ್ರವಾಗಿ ಆಚರಿಸಲು ವಿಳಂಬವಿಲ್ಲದೆ ನೂತನ ಸಮಿತಿಯನ್ನು ರಚಿಸಬೇಕು. ಕಳೆದ ಬಾರಿಯ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸುವ ಮೂಲಕ ಪ್ರಸ್ತುತ ವರ್ಷ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತವನ್ನು ಕೋರಿದ್ದಾರೆ. ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುವ ಮಡಿಕೇರಿ ದಸರಾ ಜನೋತ್ಸವ ದೇಶ ವಿದೇಶಗಳ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ದಸರಾ ಹಬ್ಬ ವ್ಯಾಪಾರ ವಹಿವಾಟಿನ ಚೇತರಿಕೆಗೆ ಮತ್ತು ರಾಜ್ಯದ ಆರ್ಥಿಕ ಕ್ಷೇತ್ರದ ಸಬಲತೆಗೆ ಸಹಕಾರಿಯಾಗಿದೆ. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿರುವುದರಿಂದ ವಾಣಿಜ್ಯ ಮತ್ತು ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಈ ಬಾರಿಯ ಮಡಿಕೇರಿ ದಸರಾ ಜನೋತ್ಸವಕ್ಕೆ ಸರ್ಕಾರದಿಂದ ರೂ.5 ಕೋಟಿ ಬಿಡುಗಡೆ ಮಾಡಿಸುವ ಮೂಲಕ ಕ್ಷೇತ್ರದ ಶಾಸಕರು ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಬೇಕೆಂದು ಬಿ.ಎಂ.ರಾಜೇಶ್ ಮನವಿ ಮಾಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ದಸರಾ ಅನುದಾನದಲ್ಲಿ ಶೇ.30 ರಷ್ಟನ್ನು ಮಾತ್ರ ಕರಗಗಳು ಹಾಗೂ ದಶಮಂಟಪಗಳಿಗೆ ಹಂಚಿಕೆ ಮಾಡಲಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ದಶಮಂಟಪಗಳ ತಯಾರಿ ಸಾಧ್ಯವಾಗದೆ ಇರುವುದರಿಂದ ಈ ಬಾರಿಯ ಅನುದಾನದಲ್ಲಿ ಶೇ.60 ರಷ್ಟನ್ನು ಕರಗಗಳು ಹಾಗೂ ದಶಮಂಟಪಗಳಿಗೆ ಮೀಸಲಿಡಬೇಕೆಂದು ಒತ್ತಾಯಿಸಿದ್ದಾರೆ. ಪ್ರಸ್ತುತ ವರ್ಷ ಅದ್ದೂರಿಯ ದಸರಾ ಆಚರಣೆಗೆ ಎಲ್ಲರೂ ಕೈಜೋಡಿಸಬೇಕು ಮತ್ತು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ತಾವು ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷ ಶ್ರೀ ಕೋಟೆ ಮಹಾಗಣತಿ ದೇವಾಲಯದ ದಸರಾ ಮಂಟಪ ಸಮಿತಿಯು 50ನೇ ವರ್ಷಾಚರಣೆಯ ಸಂಭ್ರಮದಲ್ಲಿರುವುದರಿಂದ ಈ ಸಮಿತಿಯಲ್ಲಿ ಗುರುತಿಸಿಕೊಂಡಿರುವ ತಾವು ದಸರಾ ಸಮಿತಿಯ ಕಾರ್ಯಾಧ್ಯಕ್ಷರಾಗಲು ಇಚ್ಛಿಸಿಲ್ಲ ಎಂದು ಬಿ.ಎಂ.ರಾಜೇಶ್ ತಿಳಿಸಿದ್ದಾರೆ.








