
ಸೋಮವಾರಪೇಟೆ ಜು.23 NEWS DESK : ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಗಳಿಗೆ ಗುರುಪೂರ್ಣಿಮೆ ಹಾಗೂ ಜನ್ಮ ವರ್ಧಂತಿ ಅಂಗವಾಗಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. 63ನೇ ಸಂವತ್ಸರಕ್ಕೆ ಸಿದ್ಧಲಿಂಗ ಸ್ವಾಮೀಜಿ ಕಾಲಿರಿಸುತಿರುವ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು, ಭಕ್ತರಲ್ಲಿ ಸಂತಸ ಮನೆ ಮಾಡಿತ್ತು. ಮುಂಜಾನೆಯೇ ನಾಡಿನ ಹಲವು ಮಠಾಧೀಶರುಗಳು ಆಗಮಿಸಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ, ಪುಷ್ಪಾರ್ಚನೆಗೈದು ಶುಭಹಾರೈಸಿ, ಆಶೀರ್ವಾದ ಪಡೆದರು. ರಾಜ್ಯದ ಮಂತ್ರಿಗಳು ವಿವಿಧ ಗಣ್ಯರು ಮಠಕ್ಕೆ ಆಗಮಿಸಿ ಶುಭಕೋರಿದರು. ಕೊಡಗು ಜಿಲ್ಲೆಯ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ತಂಡ ಸಿದ್ದಗಂಗಾ ಮಠಕ್ಕೆ ತೆರಳಿ ಸಿದ್ಧಲಿಂಗ ಸ್ವಾಮೀಜಿಗಳಿಗೆ ಕೊಡಗಿನ ಜೇನು, ಕಾಫಿಪುಡಿ, ಕಾಳುಮೆಣಸು ನೀಡಿ ಶುಭಕೋರುವುದರೊಂದಿಗೆ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭ ಕೊಡಗಿನ ಮಳೆ, ಬೆಳೆ ಹಾಗೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿ ತಿಳಿದುಕೊಂಡರು. ಬಿಡುವಿಲ್ಲದ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತಾಪಿ ವರ್ಗದ ಬಗ್ಗೆ ಮರುಕ ವ್ಯಕ್ತಪಡಿಸಿದ ಅವರು, ಪ್ರಕೃತಿ ಮಾತೆಯು ಕರುಣೇತೋರಿ ರೈತಾಪಿ ವರ್ಗವನ್ನು ಹರಸಲಿ ಎಂದರು. ಗುರುವಂದನೆ ಸಂದರ್ಭ ವೀರರಾಜೇಂದ್ರಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ,ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಪದಾಧಿಕಾರಿಗಳಾದ ಡಿ.ಬಿ.ಸೋಮಪ್ಪ, ಬಸಪ್ಪ, ಪ್ರದೀಪ್, ಚಂದ್ರಶೇಖರ್, ಗೀತಾರಾಜು, ಮಂಜುಳ, ರಜನಿ, ದೀಪ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.








