
ಮಡಿಕೇರಿ ಜು.26 NEWS DESK : ಬಿಜೆಪಿಯ ಶಾಸಕರುಗಳೇ ಇದ್ದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ ಈ ಅವಧಿಯಲ್ಲಿ ನಡೆಯುತ್ತಿದೆ. ಆದರೆ ಜಿಲ್ಲೆಯ ಜನರಿಗೆ ಅಭಿವೃದ್ಧಿಯ ವಿಚಾರದಲ್ಲಿ ಬಿಜೆಪಿ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾದ ಟಿ.ಈ.ಸುರೇಶ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಸಾಕಷ್ಟು ಉತ್ತಮ ಕೆಲಸಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ನಡೆಯದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆಯುತ್ತಿದೆ. ಅಭಿವೃದ್ಧಿಯ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದಿದ್ದರೆ ಅವರ ಅವಧಿಯಲ್ಲಿ ಅದನ್ನು ಮಾಡಬೇಕಿತ್ತು ಎಂದು ಹೇಳಿದರು. ಪ್ರತಿಪಕ್ಷ ಬಿಜೆಪಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಇದಕ್ಕೆ ಬದಲಾಗಿ ಕೇವಲ ಕಾಂಗ್ರೆಸ್ ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನಷ್ಟೆ ಮಾಡುತ್ತಿರುವುದಾಗಿ ಟೀಕಿಸಿದರು. *ಅಭಿವೃದ್ಧಿ ಕಾರ್ಯ* :: ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ತಮ್ಮ ಇಲ್ಲಿನವರೆಗಿನ ಅಧಿಕಾರದ ಅವಧಿಯಲ್ಲಿ ಸರ್ಕಾರದಿಂದ ವಿಶೇಷ ಅನುದಾನಗಳನ್ನು ಪಡೆದುಕೊಳ್ಳುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದಾಗಿ ಟಿ.ಈ.ಸುರೇಶ್ ತಿಳಿಸಿದರು. ಮಡಿಕೇರಿ-ವಿರಾಜಪೇಟೆ ನಡುವೆ 32.48 ಕೋಟಿ ವೆಚ್ಚದಲ್ಲಿ 66 ಕೆ.ವಿ.ವಿದ್ಯುತ್ ಮಾರ್ಗ ನಿರ್ಮಾಣ, 24.17 ಕೋಟಿ ವೆಚ್ಚದಲ್ಲಿ ಮಡಿಕೇರಿ, ಮೂರ್ನಾಡು, ಸೋಮವಾರಪೇಟೆ ಮಾದಾಪುರ ಜಂಬೂರಿನಲ್ಲಿ ವಿದ್ಯುತ್ ಉಪ ಕೇಂದ್ರಗಳ ನಿರ್ಮಾಣ ಕಾಮಗಾರಿಗಳು ಶಾಸಕರ ಅವಧಿಯಲ್ಲಿ ನಡೆದಿದೆ. ಕರ್ಣಂಗೇರಿಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ 12.26 ಕೊಟಿ ಅನುದಾನವನ್ನು ಒದಗಿಸುವಲ್ಲಿ ಶಾಸಕರ ಪ್ರಯತ್ನ ದೊಡ್ಡದು. 1 ಕೋಟಿ ರೂ. ವೆಚ್ಚದಲ್ಲಿ ಕುಶಾಲನಗರದಲ್ಲಿ ಕಲಾ ಭವನ ನಿರ್ಮಾಣ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ 10.70 ಕೋಟಿ ವೆಚ್ಚದ ಎಂಆರ್ಐ ಸ್ಕ್ಯಾನಿಂಗ್ ಆರಂಭ, ಮಡಿಕೇರಿಯಲ್ಲಿ 50 ಲಕ್ಷ ವೆಚ್ಚದಲ್ಲಿ ಮಹಾತ್ಮಾ ಗಾಂಧಿ ಸ್ಮಾರಕ ನಿರ್ಮಾಣ ಕಾಮಗಾರಿಗಳು ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವುದಾಗಿ ಸುರೇಶ್ ತಿಳಿಸಿದರು. ಶನಿವಾರಸಂತೆಯಲ್ಲಿ ಜನರ ಹಲ ವರ್ಷಗಳ ಬೇಡಿಕೆಯಾದ ಕೆಎಸ್ಆರ್ಇಸಿ ಬಸ್ ನಿಲ್ದಾಣಕ್ಕೆ 1.70 ಕೋಟಿ ಅನುದಾನ ಒದಗಿಸಿರುವುದು ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಶಾಸಕ ಡಾ. ಮಂತರ್ ಗೌಡ ಅವರ ಮುತುವರ್ಜಿಯಿಂದ ನಡೆಯುತ್ತಿರುವುದಾಗಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಬಿ.ಎನ್.ಮುದ್ದುರಾಜ್, ಸದಾ ಮುದ್ದಪ್ಪ, ನಿಡ್ತ ಗ್ರಾ.ಪಂ ಅಧ್ಯಕ್ಷ ಟಿ.ಕೆ.ಅಶೋಕ್, ಸದಸ್ಯ ವಿ.ತಸ್ಲಿಮ್ ಹಾಗೂ ಪ್ರಮುಖರಾದ ಹೆಚ್.ಎಂ.ಜಯರಾಂ ಉಪಸ್ಥಿತರಿದ್ದರು.









