
ಮಡಿಕೇರಿ NEWS DESK ಜು.30 : ಸೋಮವಾರಪೇಟೆ ತಾಲ್ಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಶನಿವಾರಸಂತೆ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬಸವ ಪಂಚಮಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್ ಅವರು ನಾಗರಪಂಚಮಿ ಎನ್ನುವುದು ಮೌಢ್ಯತೆಯ ಆಚರಣೆಯಾಗಿರುವುದರಿಂದ ಇದರ ಬದಲಾಗಿ ಬಸವ ಪಂಚಮಿ ಆಚರಿಸಲಾಗುತ್ತಿದೆ ಎಂದರು. ಹುತ್ತದ ಹಾವಿಗೆ ಹಾಲೆರೆಯುವ ಬದಲು ಬೆಳೆಯುವ ಮಕ್ಕಳಿಗೆ ಹಾಲನ್ನೆರೆದರೆ ಭವಿಷ್ಯದಲ್ಲಿ ವೈಚಾರಿಕತೆಯ ಪ್ರಜ್ಞೆಯನ್ನು ಮೂಡಿಸುವ ಜವಾಬ್ದಾರಿಯನ್ನು ಮಕ್ಕಳು ನಿಭಾಯಿಸುತ್ತಾರೆ. ಈ ರೀತಿಯ ಸಾಮಾಜಿಕ ಪರಿವರ್ತನೆಯ ಕೆಲಸಗಳನ್ನು ಮಾನವ ಬಂಧುತ್ವ ವೇದಿಕೆ ಜನಪ್ರತಿನಿಧಿ ಸತೀಶ್ ಜಾರಕಿಹೊಳಿ ಅವರ ಆಶಯದಂತೆ ಮಾಡುತ್ತಿದ್ದು, ಮೌಲ್ಯಯುತ ಆದರ್ಶಗಳನ್ನು ಮಕ್ಕಳಲ್ಲಿ ತುಂಬುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ದಲಿತ ಸಂಘರ್ಷ ಸಮಿತಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್.ಪಾಲಾಕ್ಷ ಅವರು ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಮೂಡಿಸುವ ಅಗತ್ಯವಿದೆ. ಈ ನಾಡಿನಲ್ಲಿ ನಡೆಯುವ ಎಲ್ಲಾ ಆಚರಣೆಗಳ ಮೂಲ ಉದ್ದೇಶಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಮೂಢನಂಬಿಕೆಗಳನ್ನು ತ್ಯಜಿಸಿ ವಿಜ್ಞಾನದಲ್ಲಿ ಆಸಕ್ತಿ ವಹಿಸಬೇಕು. ಶೈಕ್ಷಣಿಕ ಗುರಿ ಸಾಧನೆಯ ಮೂಲಕ ತಂದೆ, ತಾಯಿಗಳಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಸಂಚಾಲಕÀ ಎಂ.ಎಸ್.ವೀರೇಂದ್ರ ಅವರು ಮಾತನಾಡಿ ಭಾರತದ ಮೂಲ ಜನಾಂಗದವರಾದ ನಾಗ ಜನರು ನಾಗ ಪಂಚಮಿಯನ್ನು ಆಚರಿಸುತ್ತಿದ್ದರು. ಬೌದ್ಧ ಧರ್ಮದ ಆಚರಣೆಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿ 18ನೇ ಬುದ್ಧ ಎಂದು ಕೀರ್ತಿ ಪಡೆದ ಕಿಸುತಿ ಎಂಬ ವ್ಯಕ್ತಿ ನಾಗ ಪಂಚಮಿ ಎಂಬ ಹಬ್ಬವನ್ನು ಬೌದ್ಧ ಧರ್ಮದ ಸಡಗರವನ್ನಾಗಿ ಆಚರಿಸುತ್ತಿದ್ದರು ಎಂದರು. ನಂತರ ದಿನಗಳಲ್ಲಿ ಇದನ್ನು ನಾಗರ ಪಂಚಮಿ ಎಂದು ಬದಲಾಯಿಸಿದ ಜನ ಹಾವಿಗೆ ಹಾಲರೆಯುವ ಪದ್ಧತಿಯನ್ನಾಗಿ ರೂಢಿಸಿದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ಹಬ್ಬದ ಮೂಲ ಉದ್ದೇಶ ಮತ್ತು ಆಶಯವನ್ನು ಜನರಿಗೆ ತಿಳಿಸಿ ಮೌಢ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಈ ಒಂದು ಅಂಶವನ್ನು ಪರಿಗಣಿಸಿದ ಜನಪ್ರಿಯ ಜನಸೇವಕ ಸತೀಶ್ ಜಾರಕಿಹೊಳಿ ಅವರು ನಾಗರಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಪರಿವರ್ತಿಸಿದರು. ಹುತ್ತಕ್ಕೆ ಹಾಲೆರೆಯುವ ಬದಲು ಪೌಷ್ಟಿಕತೆಗಾಗಿ ಮಕ್ಕಳಿಗೆ ಹಾಲನ್ನು ನೀಡುವ ಪದ್ಧತಿಯನ್ನು ಕಾರ್ಯಕ್ರಮವನ್ನಾಗಿ ರೂಪಿಸಿದರು ಎಂದು ವಿವರಿಸಿದರು. ಸ್ಥಳೀಯ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಮಂಜಯ್ಯ, ಮಾನವ ಬಂಧುತ್ವ ವೇದಿಕೆ ಸದಸ್ಯರಾದ ವಿಶ್ವ, ತವಿದ್, ಬಾಲಕಿಯ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಜಲಜಾಕ್ಷಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಲು ಮತ್ತು ಸಿಹಿಯನ್ನು ವಿತರಿಸಲಾಯಿತು.









