
ಮೈಸೂರು NEWS DESK ಜು.30 : ಮೈಸೂರು ಇಡೀ ವಿಶ್ವದಲ್ಲಿ ಸಾಂಸ್ಕೃತಿಕ ನಗರಿ, ಶಿಕ್ಷಣಕ್ಕೆ, ಸಂಸ್ಕೃತಿಗೆ ಹೆಸರವಾಗಿಯಾಗಿರುವ ಊರು ಎಂದು ಜನಜನಿತವಾಗಿದೆ. ಆದರೆ ಇತ್ತೀಚಿಗೆ ಮಾದಕ ದ್ರವ್ಯ ವಸ್ತುಗಳು ವಶವಾಗಿರುವುದು ಈ ಖ್ಯಾತಿಗೆ ಅಪಖ್ಯಾತಿ ತಂದಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಮುಂದಾಗಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಗ್ರಹಿಸಿದ್ದಾರೆ. ಬುಧವಾರ ನಡೆದ ಲೋಕಸಭಾ ಕಲಾಪದಲ್ಲಿ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, 390 ಕೋಟಿ ರೂಪಾಯಿ ಮೌಲ್ಯದ ಎಂಡಿಎಂ ಡಗ್ಸ್ ಪತ್ತೆಯಾಗಿರುವುದು ಆತಂಕಕಾರಿ ವಿಷಯವಾಗಿದೆ ಎಂದರು. ಸರ್ಕಾರಿ ಜಾಗದಲ್ಲಿಯೇ ಈ ಡ್ರಗ್ಸ್ ಕೇಂದ್ರವಿದ್ದು, ಕರ್ನಾಟಕ ಪೊಲೀಸರು ಯಾವುದೇ ರೀತಿಯಲ್ಲೂ ಕ್ರಮ ಕೈಗೊಂಡಿಲ್ಲ. ಅಚ್ಚರಿಯ ವಿಷಯ ಎಂದರೆ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ದಾಳಿ ನಡೆಸಿ ಈ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿದ್ದಾರೆ ಎಂದು ಸಂಸದ ಯದುವೀರ್ ಸದನದ ಗಮನ ಸೆಳೆದರು. ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆದರೆ ರಾಜ್ಯ ಗೃಹ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ. ಇದು ಗೃಹ ಇಲಾಖೆಯ ಕಾರ್ಯವೈಖರಿ ಎಂದು ಯದುವೀರ್ ಎಂದು ಟೀಕಿಸಿದರು. ಇತ್ತೀಚೆಗೆ ಕಲಬುರಗಿಯಲ್ಲಿ ಕರ್ನಾಟಕದ ಐಟಿಬಿಟಿ ಸಚಿವರ ಆಪ್ತರೊಬ್ಬರು ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಸದನದ ಮೂಲಕ ಗೃಹ ಸಚಿವಾಲಯಕ್ಕೆ ಒತ್ತಾಯಿಸುವುದೇನೆಂದರೆ, ಡ್ರಗ್ಸ್ ದಂಧೆ ಪ್ರಕರಣದಲ್ಲಿ ಅಂತಾರಾಜ್ಯ ತನಿಖೆ ನಡೆಸಬೇಕು. ರಾಷ್ಟ್ರೀಯ ಮಾದಕ ದ್ರವ್ಯ ಮಂಡಳಿ (ಎನ್ಸಿಬಿ) ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.








