
ಮಡಿಕೇರಿ ಸೆ.3 NEWS DESK : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಶ್ಯಾಡೋ ಪ್ರೈಮ್ ಮಿನಿಸ್ಟರ್’ ಆಗಿರುವುದರಿಂದ ಇವರು ಮಾಡಿರುವ ಮತಗಳ್ಳತನದ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡುವುದು ಮತ್ತು ಲೋಪಗಳನ್ನು ಸರಿಪಡಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ವಿಯಯ್ ಕುಮಾರ್ ಸೊರಕೆ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರತಿಯೊಬ್ಬರ ಮತದಾನದ ಹಕ್ಕು ಕಳೆದುಹೋಗದಂತೆ ನೋಡಿಕೊಳ್ಳುವುದು ಅತ್ಯವಶ್ಯವಾಗಿದೆ. ಮತಗಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಸಂಸತ್ನಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ ಮತ್ತು ಬೃಹತ್ ಪಾದಯಾತ್ರೆಗೆ ಚಾಲನೆಯನ್ನು ನೀಡಿದ್ದಾರೆ. ಶ್ಯಾಡೋ ಪ್ರೈಮ್ ಮಿನಿಸ್ಟರ್ ಆಗಿರುವ ರಾಹುಲ್ ಗಾಂಧಿಯವರು ಪ್ರಸ್ತಾಪಿಸಿರುವ ಗಂಭೀರ ವಿಚಾರಕ್ಕೆ ಚುನಾವಣಾ ಆಯೋಗ ಉತ್ತರವನ್ನು ನೀಡಬೇಕಾಗಿದೆ ಎಂದರು. ಕಳೆದ ಚುನಾವಣಾ ಅವಧಿಯಲ್ಲಿ ಬೆಂಗಳೂರಿನ ಮಹದೇವಪುರ ಬಡಾವಣೆ ಸೇರಿದಂತೆ 9 ಕ್ಷೇತ್ರಗಳಿಗೆ ಪಕ್ಷದಿಂದ ಸಮಿತಿಯನ್ನು ರಚಿಸಿ, ಅಲ್ಲಿನ ಮತದಾರರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಅವಲೋಕಿಸಿದಾಗ, ಒಂದೊಂದು ಕ್ಷೇತ್ರದಲ್ಲಿ 20 ರಿಂದ 30 ಸಾವಿರ ಅಧಿಕ ಮತಗಳಿರುವುದು ಕಂಡು ಬಂದಿದೆ. ಈ ಬೆಳವಣಿಗೆಯ ಕುರಿತು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು. *ಆರ್ಥಿಕ ಸ್ವಾತಂತ್ರ್ಯ ಅಭಿವೃದ್ಧಿಯ ಭಾಗ* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ, ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿತು. ಆ ಹಂತದಲ್ಲಿ ವಿರೋಧ ಪಕ್ಷಗಳು ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ನಡೆಸಿದ್ದವು. ಹೀಗಿದ್ದೂ ಪಂಚ ಗ್ಯಾರಂಟಿಗಳನ್ನು ಬದ್ಧತೆಯಿಂದ ಜಾರಿಗೆ ತರಲಾಗಿದೆ. ಗ್ಯಾರಂಟಿಗಳ ಮೂಲಕ ಹಣದ ಹರಿವು ಮಹಿಳೆಯರಲ್ಲಿ ಖರೀದಿಯ ಸಾಮಥ್ರ್ಯವನ್ನು ಹೆಚ್ಚಿಸಿದೆ. ಈ ರೀತಿಯ ಆರ್ಥಿಕ ಸ್ವಾತಂತ್ರವನ್ನು ಒದಗಿಸುವುದೂ ಅಭಿವೃದ್ಧಿ ಕಾರ್ಯವೇ ಆಗಿದೆ. ರಸ್ತೆ ಸೇತುವೆಗಳನ್ನು ನಿರ್ಮಿಸುವುದಷ್ಟೆ ಅಭಿವೃದ್ಧಿ ಕಾರ್ಯವಲ್ಲವೆಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು. *ರಾಜ್ಯ ಪ್ರಥಮ* ಪ್ರಸ್ತುತ ಇಡೀ ದೇಶದಲ್ಲೆ ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ನಂಬರ್ 1ನೇ ಸ್ಥಾನದಲ್ಲಿದೆ. ರಾಜ್ಯದ ತಲಾ ಆದಾಯ 2.40 ಲಕ್ಷಗಳಷ್ಟಿದ್ದು, ಇದಕ್ಕೆ ಕಾರಣವಾಗಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಇತರೆ ರಾಜ್ಯಗಳು ಕೂಡ ಅನುಷ್ಠಾಗೊಳಿಸುತ್ತಿವೆ ಎಂದರು. ಧರ್ಮಸ್ಥಳ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗ ಉತ್ತರಿಸಿದ ವಿಯಯ್ ಕುಮಾರ್ ಸೊರಕೆ ಅವರು, ಅನಾಮಿಕ ವ್ಯಕ್ತಿ ನೀಡಿದ ದೂರಿನಂತೆ ಸತ್ಯಾಂಶ ಬಯಲಿಗೆ ತರುವ ಉದ್ದೇಶದಿಂದ ರಾಜ್ಯ ಸರಕಾರ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಿತು. ಅನಾಮಿಕ ಸೂಚಿಸಿದ 13 ಸ್ಥಳಗಳಲ್ಲಿ ಗುಂಡಿ ತೆಗೆಯುವಷ್ಟು ಕಾಲ ಮೌನವಾಗಿದ್ದ ಬಿಜೆಪಿ, ಅದರಲ್ಲಿ ಯಾವುದೇ ಸಾಕ್ಷ್ಯಗಳು ಇಲ್ಲವೆಂದು ಕಂಡು ಬಂದ ಬಳಿಕ ಟೀಕಿಸುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಅವರುಗಳು ಯಾವ ಪಕ್ಷಕ್ಕೆ ಸೇರಿದವರು, ಪ್ರಭಾಕರ ಭಟ್ ಯಾಕೆ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಪಕ್ಷದೊಳಗಿನ ಗೊಂದಲವೇ ಈ ಬೆಳವಣಿಗೆಗೆ ಕಾರಣವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲೋಬೋ, ಸಂಯೋಜಕರಾದ ಫಾರೂಕ್, ಜಾನ್, ಮುನೀರ್ ಮತ್ತಿತರರು ಉಪಸ್ಥಿತರಿದ್ದರು.









