


ಮಡಿಕೇರಿ ಸೆ.5 NEWS DESK : ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿರಾಜಪೇಟೆ ತಾಲ್ಲೂಕು ಮಟ್ಟದ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲಾ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ತಿತಿಮತಿ ಸರ್ಕಾರಿ ಪ್ರೌಢಶಾಲಾ ತಂಡದೊಡನೆ ನಡೆದ ಫೖನಲ್ ಪಂದ್ಯದ ಪ್ರಥಮ ಸೆಟ್ ನಲ್ಲಿ ಆಕರ್ಷಕ ಸ್ಮೇಶ್ ಗಳ ಮೂಲಕ ತಿತಿಮತಿ ತಂಡದ ವಿರುದ್ಧ 21-10 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಸೆಟ್ ನಲ್ಲಿ 21-11 ಅಂಕಗಳ ಅಂತರದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲಾ ತಂಡ ಗೆಲುವು ಸಾಧಿಸಿ ಸತತ ಐದನೇ ಬಾರಿಗೆ ಚಾಂಪಿಯನ್ನರಾಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ ಅವರು ಟ್ರೋಫಿ ವಿತರಣೆ ಮಾಡಿದರು. ಬಾಳೆಲೆ ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ ಹಾಗೂ ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣಾ ಗಣಪತಿ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ಅಭಿನಂದಿಸಿದರು. ಪಂದ್ಯಾಟ ನಡೆಯುವಾಗ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪಡಿಞರಂಡ ಪ್ರಭುಕುಮಾರ್, ಶಿಕ್ಷಕರುಗಳಾದ ಜಯಣ್ಣ, ತಿರ್ನೇಲಿಮಾಡ ರಮಾನಂದ ಬಾಳೆಲೆ ತಂಡದ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದರೆ ತೀರ್ಪುದಾರರಾಗಿ ಮಲ್ಲೇಂಗಡ ಸತ್ಯ, ಪ್ರಕಾಶ್ ಮತ್ತು ಮೀರಾ ಅಶೋಕ್ ಕಾರ್ಯ ನಿರ್ವಹಿಸಿದರು.









